Sep 29, 2012

ಅತಿ ಸಣ್ಣ ಕಥೆಗಳು

ಜೀವನ

ಒಂದು  ಮನೆಯಲ್ಲಿ ಮುಂಜಾನೆ ಬೇಗನೆ ಶ್ರಾದ್ಧ ನಡೆಸಿ , ಮತ್ತೊಂದು ಮನೆಯಲ್ಲಿ ಮಗುವಿನ ನಾಮಕರಣ ನಡೆಸಲು ಮೊಪೆಡ್ ನಲ್ಲಿ ಅವಸರವಸರದಲ್ಲಿ ಹೋಗುತ್ತಿದ್ದ ಪುರೋಹಿತರೊಬ್ಬರು ರಸ್ತೆ ಅಪಘಾತದಲ್ಲಿ ಮೃತರಾದರು. ಜೀವನದ ನಶ್ವರತೆ ಸಾಯುವ ಕೆಲವೇ ಕ್ಷಣಗಳ ಹಿಂದೆ ಅರಿವಾಗಿ ಅವರು ಮನದಲ್ಲೇ ನಕ್ಕರು. ಅವರ ಮಕ್ಕಳು ನಶ್ವರ ಜೀವನಗಳನ್ನು ಮುಂದುವರೆಸಿದರು.

ಬಲಿ

ಕೆಲ ವರ್ಷಗಳ ಹಿಂದೆ ದೀಪಾವಳಿಯ ಸಮಯದಲ್ಲಿ ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಪಾತಾಳದಿಂದೆದ್ದು  ಬಂದ. ರಸ್ತೆ, ಬೀದಿ, ಗಲ್ಲಿಗಳಲ್ಲೆಲ್ಲ ಜನ ಹುಚ್ಚೆದ್ದು ಪಟಾಕಿ ಸಿಡಿಸುತ್ತಿದ್ದರು. ಸದ್ದಿಗೆ ಹೆದರಿ ಪಾತಾಳಕ್ಕೆ ಹಿಂದಿರುಗಿದ ಬಲಿ ಮತ್ತೆಂದೂ ಭೂಮಿಯತ್ತ ತಲೆ ಹಾಕುವ ಸಾಹಸ ಮಾಡಲಿಲ್ಲ. ಪಟಾಕಿ ಸದ್ದಿಗೆ ಬಲಿ ಚಕ್ರವರ್ತಿ ಬಲಿಯಾದದ್ದು ತಿಳಿಯದ ಜನ ಪಟಾಕಿ ಸಿಡಿಸುವುದು ನಿಲ್ಲಿಸಲಿಲ್ಲ.

ಅಳು  

ಜಯಮ್ಮನವರು ತಾಯಿಯ ಶವದ ಮುಂದೆ ಅಳುತ್ತ ಕುಳಿತಿದ್ದರು. ಪಕ್ಕದಲ್ಲೆ ಮತ್ತೆ ಯಾರೋ ಬಿಕ್ಕಳಿಸುವ ದನಿ ಕೇಳಿ, ನೋಡಿದರೆ ಅವರ ಪತಿಯ ಅಣ್ಣನ ಮಗಳು, ಹೈ-ಸ್ಕೂಲು ಹುಡುಗಿ. ಜಯಮ್ಮ ತಮ್ಮ ಅಳು ಮರೆತರು, ಆ ಹುಡುಗಿಯ ತಾಯಿ ಸತ್ತದ್ದು ಹಿಂದಿನ ವರ್ಷವಷ್ಟೆ. ಅವಳ ಅಳು ಸದ್ಯಕ್ಕೆ ನಿಲ್ಲುವಂಥದ್ದಾಗಿರಲಿಲ್ಲ.

 






Sep 23, 2012

Barfi!


Barfi is a good movie. It is a refreshing concept, and is worth a watch. It will stay in history as a great attempt. But what surprises me is this - with a good concept in hand, and with such talented lead and supporting actors, why did the movie feel content with just being good! Let me try listing what I didn't like about the movie:
  • There is nothing Chaplinesque about Barfi's character except for his histrionics. It is not a 'smiling through pain' character, though his first love "Shruthi" tells us so.
     
  • There is not enough substance in the first half.
     
  • The multiple flashbacks start intervening with the story-telling. I didn't understand why the flashbacks were required.
     
  • The second half seems dragged towards the end.
     
Film after film, Ranbir has been proving himself. I liked his performance. I think that alone can make Barfi a hit movie.

Capturing the mundane








Aug 25, 2012

ನಿನಗೆ ಯಾವ ಗೋಲಿ ಬೇಕು?

  ಆ ಹುಡುಗ ಬೆಳಗಿನಿಂದಲೂ ಅದೇ ಕೋಣೆಯಲ್ಲಿ ಕುಳಿತಿದ್ದ. ಆ ಕೋಣೆಯ ಮೂಲೆಯಲ್ಲಿ ಬಣ್ಣಬಣ್ಣದ ಗೋಲಿಗಳಿದ್ದವು. ಅವುಗಳನ್ನೇ ಬಹಳ ಹೊತ್ತು ನೋಡುತ್ತಾ ಕುಳಿತಿದ್ದ. ಹುಡುಗನ ತಾಯಿ ಈ ಮನೆಯಲ್ಲಿ ಕೆಲಸಕ್ಕಿದ್ದಳು. ಶಾಲೆಗೆ ರಜೆಯಾದ ಕಾರಣ, ಮಗನನ್ನೂ ಕರೆ ತಂದಿದ್ದಳು. ಪರರ ಮನೆಯಲ್ಲಿ ಐದಾರು ವರ್ಷ ವಯಸ್ಸಿನ ಮಕ್ಕಳಿಗಿರಬಹುದಾದ ಸಂಕೋಚದಲ್ಲಿ ಹುಡುಗ ಮೂಲೆಯಲ್ಲಿ ಕುಳಿತಿದ್ದ. ಶೋಕೇಸಿನಲ್ಲಿ ಅಲಂಕಾರಕ್ಕೆಂದು ತಂದಿದ್ದರೋ ಏನೋ, ಗೋಲಿಗಳನ್ನು ಯಾರೋ ಈ ಮೂಲೆಯಲ್ಲಿ ಸುರಿದಿದ್ದರು. ಹುಡುಗ ಗೋಲಿಗಳನ್ನು ಕುಕ್ಕರುಗಾಲಿನಲ್ಲಿ ಕುಳಿತು ನೋಡಿದ. ಕೆಲವನ್ನು ಎತ್ತಿ ಬೆಳಕಿಗೆ ಹಿಡಿದು, ತಿರುಗಿಸಿ ಸಂತೋಷ ಪಟ್ಟ. ಯಾರದಾದರೂ ಹೆಜ್ಜೆ ಸಪ್ಪಳ ಕೇಳಿದಾಗ ಪಟ್ಟನೆ ಕೆಳಗಿಟ್ಟು, ತನಗೂ ಗೋಲಿಗಳಿಗೂ ಸಂಬಂಧವಿಲ್ಲದಂತೆ ನಟಿಸುತ್ತ ಕುಳಿತ. ತಾಯಿ ಗಂಟೆಗೊಮ್ಮೆ ಬಂದು ಮಗ ತಂಟೆ ಮಾಡದೆ ಕುಳಿತಿರುವುದನ್ನು ಖಚಿತಪಡಿಸಿಕೊಂಡು ಮುಗುಳ್ನಕ್ಕು ಕೆಲಸಕ್ಕೆ ಮರಳುತ್ತಿದ್ದಳು. ಮನೆಯೊಡತಿ, 'ಎಂಥ ಪಾಪದ ಹುಡುಗ' ಎಂದುಕೊಂಡಳು ಹಲವು ಬಾರಿ. ಹುಡುಗ ಗೋಲಿಗಳನ್ನೇ ನೋಡುತ್ತಾ ಕುಳಿತ. ಒಂದೊಂದನ್ನೇ ಎತ್ತಿ ಬೆಳಕಿಗೊಡ್ಡಿ, ತಿರುಗಿಸಿ ಅದರೊಳಗಿದ್ದ ವಿಚಿತ್ರ ಆಕಾರಗಳು ಏನಿರಬಹುದೆಂದು ಯೋಚಿಸುತ್ತಾ ಕುಳಿತ. ತಿರುಗಿಸುತ್ತಾ ತಿರುಗಿಸುತ್ತಾ ಗೋಲಿಯೊಳಗೆ ಏನೇನೋ ಕಂಡಂತಾಗಿ ಸಂಭ್ರಮಿಸಿದ. ಪ್ರತಿಯೊಂದು ಗೋಲಿಯನ್ನೂ ಅದೇ ಬೆರಗಿನಿಂದ ಪರೀಕ್ಷಿಸಿದ. ತನ್ನ ಈ ಆಟ ಯಾರಿಗೂ ಗೊತ್ತಾಗಬಾರದೆಂದು ಕಿವಿಗಳನ್ನಗಲಿಸಿ ಹೆಜ್ಜೆ ಸಪ್ಪಳ ಕೇಳಿಸಿಕೊಳ್ಳುತ್ತಲೇ ಆಟ ಮುಂದುವರೆಸಿದ. ಈ ಆಟ ಅವನಿಗೆ ಎಷ್ಟು ಹಿಡಿಸಿಬಿಟ್ಟಿತೆಂದರೆ ಮರುದಿನ ಶಾಲೆಗೆ ಚಕ್ಕರ್ ಹೊಡೆದು ಇಲ್ಲಿಗೆ ಬರುವುದೆಂದು ನಿರ್ಧರಿಸಿದ. ಜ್ವರದ ನಾಟಕ ಸರಿಯೇ, ಹೊಟ್ಟೆನೋವಿನ ನಾಟಕ ಒಳ್ಳೆಯದೇ ಎಂದು ಚಿಂತಿಸಿದ. ಹಿಂದೊಮ್ಮೆ ಬೇಧಿಯ ನಾಟಕ ಆಡಿದ್ದು ನೆನೆಸಿಕೊಂಡ. ಬೇಧಿಯ ನಾಟಕ ಎರಡು ಸಲ ಕೆಲಸ ಮಾಡಿತ್ತು. ಆದರೆ ಮೂರನೆಯ ಸಲ ನಡೆಸಲು ಪ್ರಯತ್ನಿಸಿದಾಗ ತಾಯಿ,'ಮಗನೇ, ನೀನು ಕಕ್ಕಸಿನಿಂದ ಬರುವಾಗ ಈ ಸಲ ನೀರು ಹಾಕಬೇಡ. ನಾನೇ ಕಕ್ಕಸು ತೊಳೆಯುತ್ತೇನೆ.', ಎಂದಳು. ಹುಡುಗ ಕಕ್ಕಸಿಗೆ ಹೋದವನು ಎಷ್ಟೇ ಪ್ರಯತ್ನ ಪಟ್ಟರೂ 'ಬರದಿದ್ದಾಗ', ಅಳುತ್ತಾ ಅಮ್ಮನಲ್ಲಿ ಸತ್ಯ ಒಪ್ಪಿಕೊಂಡ. ಬೇಧಿಯ ನಾಟಕ ಅಂದೇ ಕೊನೆಯಾಯಿತು!

ಜ್ವರದ ನಾಟಕಕ್ಕೆ ತುಂಬಾ ತಯಾರಿ ಬೇಕಾಗುತ್ತದೆ. ಹಿಂದಿನ ಸಂಜೆಯೇ ಕೆಮ್ಮು, ಗಂಟಲು ನೋವುಗಳ ಪ್ರದರ್ಶನವಾಗಬೇಕಾಗುತ್ತದೆ. ಮುಂಜಾನೆ ಕಣ್ಣುಗಳನ್ನು ಜೋರಾಗಿ ತಿಕ್ಕಿಕೊಂಡು ಕೆಂಪು ಮಾಡಿಕೊಂಡು, ಮುಖ ಬಾಡಿಸಿಕೊಂಡು, 'ಅಮ್ಮ, ಜ್ವರ ಇರೋ ಥರ ಅನ್ನಿಸ್ತಾ ಇದೆ', ಎನ್ನಬೇಕು. ಅಮ್ಮನಿಗೆ ಸಂಶಯ ಬಂದು ಹಣೆ, ಕತ್ತುಗಳನ್ನು ಮುಟ್ಟಿ ಪರೀಕ್ಷಿಸುತ್ತಾಳೆ. ನಾಟಕ ಚೆನ್ನಾಗಿದ್ದಲ್ಲಿ, ಹಣೆ ಕತ್ತು ತಣ್ಣಗಿದ್ದರೂ, 'ಒಳ ಜ್ವರವಿರಬಹುದು', ಎಂದುಕೊಂಡು ರಜೆ ಹಾಕಿಸುತ್ತಾಳೆ. ನಾಟಕದಲ್ಲಿ ದೋಷವಿದ್ದರೆ, 'ಸುಳ್ಳು ಹೇಳ್ತೀಯ?', ಎಂದು ಗದರಿ, ಒದ್ದು ಶಾಲೆಗೆ ಕಳಿಸುತ್ತಾಳೆ! ಹಾಗಾಗಿ ಜ್ವರದ ನಾಟಕ ಬಹಳ ಕಷ್ಟ. ಹೊಟ್ಟೆ ನೋವೇ ಸರಿ ಎಂದು ತೀರ್ಮಾನಿಸಿದ ಹುಡುಗ. ಈ ಮಹತ್ವದ ತೀರ್ಮಾನ ಕೈಗೊಂಡ ಬಳಿಕ ಮತ್ತೆ ಗೋಲಿಗಳ ಜೊತೆ ಆಟ ಮುಂದುವರೆಸಿದ. ಪ್ರಪಂಚ ದುಂಡಗಿದೆ ಎಂದು ಮೇಷ್ಟ್ರು ಹೇಳಿದ್ದರು. ಗೋಲಿಯೂ ದುಂಡಗಿತ್ತು. ಗೋಲಿಯೊಳಗೆ ಒಂದು ಪ್ರಪಂಚವೇ ಇತ್ತು. ಹಾಗೆಯೇ ಗೋಲಿಗಳನ್ನು ನೋಡುತ್ತಾ ಹುಡುಗ ಗೋಲಿಯೊಳಗಿನ ಪ್ರಪಂಚದ ಭಾಗವಾಗಿಬಿಟ್ಟ. ಹೆಜ್ಜೆ ಸಪ್ಪಳಕ್ಕೆ ತೆರೆದಿದ್ದ ಕಿವಿ ಈಗ ಗೋಲಿಯೊಳಗಿನ ಪ್ರಪಂಚದ ದನಿಗಳನ್ನು ಕೇಳಿಸಿಕೊಳ್ಳಲು ಯತ್ನಿಸಿತು. ಹುಡುಗನ ಪ್ರಪಂಚದಲ್ಲಿ ಈ ಮಹತ್ವದ ಬದಲಾವಣೆಗಳಾಗುತ್ತಿದ್ದಾಗ, ಆ ಮನೆಯವರು ಇದರ ಪರಿವೆಯೇ ಇಲ್ಲದೆ ಕಾಫಿ-ಉಪ್ಪಿಟ್ಟು, ಟೀವಿ-ವಾರ್ತೆ, ಚುನಾವಣೆ-ಭ್ರಷ್ಟಾಚಾರಗಳ ನೀರಸ ಪ್ರಪಂಚದ ರಗಳೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೋಫಾ-ಕುರ್ಚಿಗಳಲ್ಲಿ ಕೋನ ಬದಲಿಸಿಕೊಳ್ಳುತ್ತಿದ್ದರು.

*                                                                *                                                                      *

ಸಂಜೆಯಾದರೂ ಹುಡುಗನ ಆಟ ಮುಂದುವರೆದಿತ್ತು. ತಾಯಿ ಮನೆಗೆಲಸ ಮುಗಿಸಿ ಮಗನತ್ತ ಬಂದಳು. ಅವನಿಗೆಂದು ಅವಳು ಇಟ್ಟಿದ್ದ ಕುರುಕಲು ತಿಂಡಿಯನ್ನು ಹುಡುಗ ಮುಟ್ಟಿಯೂ ಇರಲಿಲ್ಲ. ತಾಯಿಗೆ ಆಶ್ಚರ್ಯ. 'ಕಿಟ್ಟಿ, ಯಾಕೋ ಏನೂ ತಿಂದಿಲ್ಲ', ಎಂದಳು. ಹುಡುಗನ ಕಿವಿಗಳು ಈ ಪ್ರಪಂಚದ ದನಿಗೆ ಕಿವುಡಾಗಿದ್ದವು. ತಾಯಿ ಮಗನ ತಲೆ ಸವರಿ, ಕೆನ್ನೆ ತಟ್ಟಿ ಮತ್ತೊಮ್ಮೆ ಕೇಳಿದಳು. ಹುಡುಗನಿಗೆ ಒಮ್ಮೆಗೆ ತನ್ನ ಪ್ರಪಂಚದಿಂದ ಬೇರೆ ಪ್ರಪಂಚಕ್ಕೆ ತಂದು ಇಳಿಸಿದಂತಾಗಿ ಬೆಚ್ಚಿ ಬಿದ್ದು, 'ಹಾಂ!' ಎಂದ. ತಾಯಿಗೆ ವಿಷಯ ಗೊತ್ತಾಯಿತು-ಮಗನಿಗೆ ಗೋಲಿಗಳು ಇಷ್ಟವಾಗಿವೆ. ನಾಲ್ಕೈದು ಗೋಲಿಗಳನ್ನು ಮಗನಿಗೆ ತೆಗೆದುಕೊಳ್ಳುವುದೆಂದು ಮನೆಯೊಡತಿಯಲ್ಲಿ ಕೇಳಿದಳು. ಅವಳೂ ಒಳ್ಳೆಯವಳೇ, ಇದಕ್ಕೆಲ್ಲ ಇಲ್ಲ ಎನ್ನುವವಳಲ್ಲ. ಆದರೆ ಆ ಮನೆಯ ಹುಡುಗನ ಕಿವಿ ಚುರುಕಾಯಿತು. ಆ ಗೋಲಿಗಳೆಲ್ಲವೂ ತನಗೆ ಬೇಕು ಎಂದು ಕಿರುಚತೊಡಗಿದ. ಮಗನ ರಂಪ ನೋಡಿ ಮನೆಯೊಡತಿ, 'ಆಯಿತು ಮಗಾ. ಎಲ್ಲ ನಿನಗೇ ಕೊಡ್ತೇನೆ. ಆದರೆ ಒಂದೇ ಒಂದು ಆ ಹುಡುಗನಿಗೆ ಕೊಡೋಣ?', ಎಂದು ಹೇಗೋ ಒಪ್ಪಿಸಿದಳು.

ಇಷ್ಟೆಲ್ಲಾ ಮಾತುಕತೆ-ಸಂಧಾನ  ನಡೆಯುತ್ತಿದ್ದಾಗ ನಮ್ಮ ಹುಡುಗ ಮತ್ತೆ ಗೋಲಿಯೊಳಗಿನ ಪ್ರಪಂಚದ ಜೊತೆ ಸಂಪರ್ಕ ಸಾಧಿಸಿದ್ದ! ಆದರೀಗ ಅವನ ತಾಯಿ ಮತ್ತೆ ಅವನನ್ನು ಈ ಪ್ರಪಂಚಕ್ಕೆ ಎಳೆದು ತಂದು, 'ಇದರಲ್ಲಿ ಒಂದು ಗೋಲಿ - ನಿನಗೆ ಯಾವುದು ಇಷ್ಟವೋ  ಅದು - ತೆಗೋ.' ಎಂದಳು. ಹುಡುಗನಿಗೆ ಗೊಂದಲವಾಯಿತು. ತನ್ನ ಪಾಡಿಗೆ ತಾನು ಆಡಿಕೊಂಡಿದ್ದೆ. ಮರುದಿನವೂ ಆಟ ಮುಂದುವರೆಸಲು ಬೇಕಾದ ಸಿದ್ಧತೆಗಳನ್ನು ನಡೆಸಿಕೊಂಡಿದ್ದೆ. ಅಮ್ಮ ಸುಮ್ಮನೆ ಎಲ್ಲವನ್ನೂ ಕೆಡಿಸುತ್ತಿದ್ದಾಳೆ ಎಂದು ಸಿಟ್ಟಿನಲ್ಲಿ ಮುಖ ಸಿಂಡರಿಸಿಕೊಂಡ. ಇಷ್ಟು ಗೋಲಿಗಳಲ್ಲಿ ಒಂದೇ ಒಂದನ್ನು ಆರಿಸಿಕೊಳ್ಳುವ ಯೋಚನೆ ಅವನಿಗೆ ಹಿಡಿಸಲಿಲ್ಲ. ಹುಡುಗನ ಮನದೊಳಗೆ ಯೋಚನೆಗಳ ಚಂಡಮಾರುತವೇ ಎದ್ದಿತು. ತಾಯಿಗೆ ಗೊತ್ತಾಗಲಿಲ್ಲ. 'ಬೇಗ ತೆಗೋ ಕಿಟ್ಟಿ, ಮನೆಗೆ ಹೋಗೋಣ.', ಎಂದು ಒತ್ತಾಯ ಮಾಡಿದಳು. ಹುಡುಗ ಅಲುಗಲಿಲ್ಲ. 'ತೆಗೊತೀಯೋ, ಇಲ್ಲ ಒದೆ ಬೇಕೋ?', ತಾಯಿ ದನಿ ಎತ್ತರಿಸಿದಳು. ಹುಡುಗ ಒತ್ತಡಕ್ಕೆ ಬಿದ್ದ. ತನಗೀಗ ಒಂದೇ ಒಂದು ಗೋಲಿಯನ್ನು ಎತ್ತಿಕೊಳ್ಳುವುದೇ ಮಾರ್ಗ ಎಂದು ತಡಕಾಡಿದ. ಬೇಗಬೇಗನೆ ಯಾವ ಗೋಲಿ ತನಗಿಷ್ಟವಾದದ್ದೆಂದು ಯೋಚಿಸತೊಡಗಿದ. ಗೋಲಿಗಳ ರಾಶಿಯೇ ಕಣ್ಣ ಮುಂದಿದ್ದಾಗ ಹುಡುಗ ಯಾವ ಗೋಲಿ ತನಗಿಷ್ಟವಾದದ್ದೆಂದು ಯೋಚಿಸಿಯೇ ಇರಲಿಲ್ಲ. ಯಾವ ಗೋಲಿಯನ್ನೂ ಮನೆಗೆ ತೆಗೆದುಕೊಂಡು ಹೋಗುವ ಯೋಚನೆಯೇ ಅವನಿಗೆ ಬಂದಿರಲಿಲ್ಲ. ಒಂದೊಂದು ಗೋಲಿಗೂ ಅದರದ್ದೇ ಅಂದವಿತ್ತು. ಆಡಲಿಕ್ಕೆ ಅವನಿಗೆ ಎಲ್ಲವೂ ಬೇಕಿತ್ತು, ಆದರೆ ಯಾವ ಒಂದನ್ನೂ ತನ್ನದಾಗಿ ಮಾಡಿಕೊಳ್ಳುವ ಹಠ ಅವನಿಗೆ ಇರಲಿಲ್ಲ. ಆದರೀಗ ಜೀವನ್ಮರಣದ ಹೋರಾಟ ಎದುರಾಯಿತು-ಇಷ್ಟರಲ್ಲಿ ತನ್ನ ಪಾಲಿಗೆ ಬಂದದ್ದು ಒಂದು, ಅದನ್ನೂ ತಾನೇ ಆರಿಸಬೇಕು! ಹುಡುಗನಿಗೆ ಭಯವಾಯಿತು. ತಾಯಿಯನ್ನೊಮ್ಮೆ ಗೋಲಿಗಳನ್ನೊಮ್ಮೆ ನೋಡಿ, 'ನಂಗೆ ಗೋಲಿಯೂ ಬೇಡ, ಏನೂ ಬೇಡ.', ಎಂದು ಕಿರುಚುತ್ತಾ ಮನೆಯತ್ತ ಓಡಿದ .

*                                                       *                                         *

ಈ ಘಟನೆಯ ಕಿಟ್ಟಿ ಬೆಳೆದು ಶ್ರೀ|ಕಿಶೋರ್ ಕುಮಾರ್ ಆದ ಮೇಲೂ, ಅಸಂಖ್ಯ ಸಾಧ್ಯತೆಗಳಲ್ಲಿ ಒಂದನ್ನು ಆರಿಸಿಕೊಳ್ಳುವ ಸಂದರ್ಭಗಳಲ್ಲಿ, ಈ ಪ್ರಪಂಚದಲ್ಲಿ ಮಹತ್ವದ್ದು ಎನಿಸಿಕೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಣಗಳಲ್ಲಿ - ಅದು ಬೆಡ್ ರೂಮೇ ಆಗಿರಲಿ, ಬೋರ್ಡ್ ರೂಮೇ ಆಗಿರಲಿ, ಕಿಶೋರ್ ಚಡ್ಡಿ ಹಾಕಿಕೊಂಡ ಕಿಟ್ಟಿಯಂತಾಗಿ ತಾಯಿ, 'ನಿನಗೆ ಯಾವ ಗೋಲಿ ಬೇಕು?!', ಎಂದು ಗದರಿದಂತಾಗಿ ಬೆಚ್ಚಿ ಬೀಳುತ್ತಾನೆ!

*                                                      *                                            *

Jul 10, 2012

ಆಶ್ರಮದ ಹಾವುಗಳು

ಹಿಂದೊಂದು ಕಾಲದಲ್ಲಿ ಆಶ್ರಮವೊಂದಿತ್ತು. ಆಶ್ರಮದ ತುಂಬೆಲ್ಲ ಗಡ್ಡ ಬಿಟ್ಟುಕೊಂಡ ಸನ್ಯಾಸಿಗಳೇ ತುಂಬಿದ್ದರು. ಹೊರಗಿನಿಂದ ನೋಡುವವರಿಗೆ ಆಶ್ರಮ ಸುಂದರವಾಗಿಯೇ ಕಾಣುತ್ತಿತ್ತು. ಆಶ್ರಮವಾಸಿಗಳು ಒಬ್ಬರಲ್ಲೊಬ್ಬರು ಮಾತನಾಡುತ್ತಿರಲಿಲ್ಲ. ಎಲ್ಲರೂ ಯಂತ್ರಗಳಂತಿದ್ದರು. ಪ್ರತಿಯೊಬ್ಬರೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಅಲ್ಲಿ ಎದುರಿಸುವ ಮತ್ತು ಅನುಸರಿಸುವ ಪ್ರಶ್ನೆಯೇ ಇರಲಿಲ್ಲ. ಒಬ್ಬರ ಪರಿಧಿ ಇನ್ನೊಬ್ಬರ ಪರಿಧಿಯೊಂದಿಗೆ ಘರ್ಷಣೆಗೊಳಗಾಗುವ ಸಂಭವವೇ ಇರಲಿಲ್ಲ. ಎಲ್ಲರೂ ಶಾಂತ, ಮೌನ ತಪಸ್ವಿಗಳಾಗಿದ್ದರು. ಬಿಡುವಿನ ವೇಳೆಯಲ್ಲಿ ತಮ್ಮ ಮನಸ್ಸಿಗೆ ಬಂದ ಸ್ಥಳದಲ್ಲಿ ಕುಳಿತುಕೊಂಡು ಧ್ಯಾನಿಸುತ್ತಿದ್ದರು, ಜಪಿಸುತ್ತಿದ್ದರು.

ಆ ಆಶ್ರಮದ ಈಶಾನ್ಯ ಮೂಲೆಯಲ್ಲಿ ಆಲದ ಮರವೊಂದಿತ್ತು. ಆ ಮರದ ಕೆಳಗೆ ಎಷ್ಟೋ ವರ್ಷಗಳಿಂದ ನಾಶವಾಗದೇ ಉಳಿದ ಹಂಡೆಯೊಂದಿತ್ತು. ಅದರಲ್ಲಿ ಮಾಯೆಯಿಂದಲೋ ಎಂಬಂತೆ ಸದಾಕಾಲ ನೀರು ತುಂಬಿರುತ್ತಿತ್ತು. ಆ ನೀರಿನ ಸ್ಥಿತಿಯನ್ನು ಯಾರೂ ಕೆಣಕಲು ಹೋಗಿರಲಿಲ್ಲ. ಪ್ರಶ್ನಿಸುವ ಮನೋಭಾವವೇ ಇಲ್ಲದ ಆಶ್ರಮವಾಸಿಗಳು ಇದರ ಕುರಿತು ತಲೆ ಕೆಡಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆಶ್ರಮವಾಸಿಗಳು ಇದ್ದದ್ದನ್ನು ಇದ್ದಂತೆ ಒಪ್ಪಿಕೊಳ್ಳುತ್ತಿದ್ದರು. ಅದು ಏಕೆ ಹಾಗಾಗಬೇಕು, ಹೀಗೇಕಾಗಬಾರದು ಎಂದು ಪ್ರಶ್ನಿಸುವ ಸ್ವಭಾವ ಅವರದಲ್ಲ. ಪ್ರಶ್ನೆಗಳಿಂದ ಅಲೆಗಳು ಏರ್ಪಡುತ್ತವೆ, ಅಲೆಗಳು ಸರ್ವನಾಶಕ್ಕೆ ಕಾರಣವಾಗುತ್ತವೆ - ಎಂಬುದು ಅವರು ಯಾರಲ್ಲೂ ಹೇಳದ, ಆದರೆ ಮನಸ್ಸಿನಲ್ಲೇ ಒಪ್ಪಿಕೊಂಡ ಸಿದ್ಧಾಂತವಾಗಿತ್ತು.

ಆಶ್ರಮವಾಸಿಗಳು ಮುಂಜಾನೆ ಎದ್ದಂತೆ ಹಲ್ಲುಜ್ಜಿಕೊಳ್ಳುತ್ತಿದ್ದರು. ಮಾವಿನ ಎಲೆಯಿಂದ ಇದ್ದಲಿನವರೆಗೆ ಯಾವುದಾದರೊಂದು ವಸ್ತುವಿನಿಂದ ಅವರು ಹಲ್ಲುಜ್ಜಿಕೊಳ್ಳುತ್ತಿದ್ದರು. ನಾಗರೀಕ ಮಾನವರಂತೆಯೇ ಅವರು ನಾಲಗೆಯ 'ಅಗ್ರ'ವನ್ನೂ ತೆಗೆಯುತ್ತಿದ್ದರು.ಅವರು ಮುಖ ತೊಳೆದುಕೊಳ್ಳುವ ರೀತಿ ವಿಚಿತ್ರವಾಗಿತ್ತು. ಮುಖಕ್ಕೆ ನೀರು ಹಾಕಿಕೊಂಡು ಅಪ್ರದಕ್ಷಿಣಾಕಾರವಾಗಿ ಮುಖವನ್ನು ಕೈಯಿಂದ ತಿಕ್ಕಿಕೊಳ್ಳುತ್ತಿದ್ದರು. ಮುಖ ತೊಳೆದಾದ ನಂತರ ಪುನಃ ಬಾಯಿ ಮುಕ್ಕಳಿಸುತ್ತಿದ್ದರು.

 ಹಲ್ಲುಜ್ಜಿಯಾದ  ನಂತರ ಅವರು ಸ್ನಾನ ಮಾಡುತ್ತಿದ್ದರು. ನಂತರ ಕಸ ಕಡ್ಡಿ ಸೇರಿಸಿ ಕಲ್ಲು ಕುಟ್ಟಿ ಬೆಂಕಿಯುರಿಸುತ್ತಿದ್ದರು. ಆಗ ತಾನೇ ಕಿತ್ತು ತಂದ ಹಣ್ಣುಗಳನ್ನೂ ತಿನ್ನುವಂಥ ಸೊಪ್ಪುಗಳನ್ನೂ ಸೇರಿಸಿ ಬೇಯಿಸುತ್ತಿದ್ದರು. ಬೆಂದದ್ದು ಸಂಪೂರ್ಣವಾಗಿ ಆರಿದ ಬಳಿಕ ಪದ್ಮಾಸನದಲ್ಲಿ ಕುಳಿತು ತಿನ್ನುತ್ತಿದ್ದರು. ಮಧ್ಯಾಹ್ನದ ಆಹಾರವೂ ಇದೇ ಆಗಿತ್ತು. ರಾತ್ರಿ - ಉಪವಾಸ. ಅವರು ಮಲಗಿಕೊಳ್ಳುವ ಹೊತ್ತಿಗೆ ಅಮಾವಾಸ್ಯೆಯ ದಿನವೂ ಚಂದ್ರ ಕಾಣಿಸಿಕೊಳ್ಳುತ್ತಿದ್ದ. ಇವರನ್ನು ನಿಯಂತ್ರಿಸುವವರು ಯಾರೂ ಇರಲಿಲ್ಲವಾದರೂ ಅವರು ತಮ್ಮ ಮೇಲೆ ಸ್ವಯಂಪ್ರೇರಿತ  ನಿರ್ಭಂದವನ್ನು ಹೇರಿಕೊಂಡಿದ್ದರು. ಅವರಲ್ಲಿ ಭಾವನೆಗಳಿರಲಿಲ್ಲ, ವಿಕಾರಗಳಿರಲಿಲ್ಲ. ಏಕೆಂದರೆ ಸಂತೋಷಪಡಲಾಗಲಿ, ದುಃಖಿಸಲಿಕ್ಕಾಗಲಿ ಅವರಿಗೆ ಕಾರಣಗಳಿರಲಿಲ್ಲ.

ಒಂದು ಸುಪ್ರಭಾತದಲ್ಲಿ ಆಶ್ರಮವಾಸಿಗಳು ಹಲ್ಲುಜ್ಜುತ್ತಿದ್ದಾಗ ಒಂದು ಘಟನೆ ನಡೆಯಿತು - ಅದುವರೆಗೆ ಹಕ್ಕಿಗಳ ಕಿಚಪಿಚ ಹಾಗೂ ಪ್ರಾಣಿಗಳ 'ಗೊರ ಗೊರ', 'ಬೌ ಬೌ', 'ಮಿಯಾಂವ್'ಗಳನ್ನೂ ಮಾತ್ರ ಕೇಳಿದ್ದ ಆಶ್ರಮವಾಸಿಗಳು ಮೊದಲ ಬಾರಿಗೆ ಮನುಷ್ಯನ ದನಿ ಕೇಳಿದರು. ಸುಮುಖನೆಂಬ ಆಶ್ರಮವಾಸಿ ಜೋರಾಗಿ  ಕಿರುಚಿದ್ದನು. ಮೊಟ್ಟ ಮೊದಲ ಬಾರಿಗೆ ತನ್ನ ಎತ್ತರಿಸಿದ ದನಿಯನ್ನು ಕೇಳಿದ ಸುಮುಖನಿಗೆ ಆಶ್ಚರ್ಯವಾಯಿತು. ತನ್ನ  ದನಿಗೆ ಹೆದರಿ ಹೆದರಿ ಹಕ್ಕಿಗಳು ಗಲಿಬಿಲಿಗೊಂಡು ಹಾರಿದ್ದನ್ನೂ, ಆಶ್ರಮದ ಬೆಕ್ಕುಗಳೂ ನಾಯಿಗಳೂ ಬೆದರಿದ ದನಿ ಹೊರಡಿಸಿದ್ದನ್ನೂ ಕಂಡ ಸುಮುಖನಿಗೆ ತನ್ನ ದನಿಗಿರುವ ಶಕ್ತಿಯ ಅರಿವಾಯಿತು. ಇಂಥ ಅದ್ಭುತವನ್ನು ಅಡಗಿಸಿಟ್ಟು ಬದುಕುತ್ತಿರುವ ತಮ್ಮ ಮೇಲೆ ಆತನಿಗೆ ಮರುಕ ಹುಟ್ಟಿತು. ಆತ ಪುನಃ ಪುನಃ ಕಿರುಚಿದ! ಹುಚ್ಚನಂತೆ ದನಿಯೆತ್ತರಿಸಿ ನಕ್ಕ!
 "ನಮಗೆ ಮಾತನಾಡಲು ಗೊತ್ತಿಲ್ಲವೇ? ನಾವೇನು ಮೂಗರೇ! ನಮಗೆ ಭಾಷೆ ಗೊತ್ತಿಲ್ಲವೇ? ನಾವೇಕೆ ಮೌನವಾಗಿರಬೇಕು?" - ಆತ ತನಗೆ ತಾನೇ ಪ್ರಶ್ನಿಸಿಕೊಂಡ.

ಜನ ಸೇರಿದರು. ಅದ್ಭುತವೆಂಬಂತೆ ಎಲ್ಲರೂ ಮಾತನಾಡತೊಡಗಿದರು! "ಏನಾಯಿತು? ಏನಾಯಿತು?" - ಎಲ್ಲರೂ ಕೇಳಿದರು.

ಸುಮುಖನಿಗೆ ಒಮ್ಮೆಗೆ ಎಚ್ಚರವಾಯಿತು. ತಾನು ಕಿರುಚಿದ್ದೇಕೆ ಎಂದು ಯೋಚಿಸಿದ. ಅದೇಕೆಂದು ನೆನಪಾದಾಗ ಆಲದ ಮರದತ್ತ ನಡೆದ. ಅದರ ಕೆಳಗಿದ್ದ ಹಂಡೆಯಲ್ಲಿ ನಾಲ್ಕು, ಐದು, ಹತ್ತು ... ಲೆಕ್ಕವಿಲ್ಲದಷ್ಟು ಹಾವುಗಳು ಹುಟ್ಟಿಕೊಂಡಿದ್ದವು! ಬಾಲವಿಲ್ಲದ, ಅಗಲ ಹೆಡೆಯ ಹಾವುಗಳು!

"ಹಾವು!" - ಆಶ್ಚರ್ಯವೆಂಬಂತೆ ಎಲ್ಲರೂ ಮಾತು ಕಲಿತಿದ್ದರು! ಎಲ್ಲರಿಗೂ ಆಶ್ಚರ್ಯವಾಗಿತು. ಯಂತ್ರಗಳಂತಿದ್ದವರು ಮನುಷ್ಯರಾಗಲು ಕಲಿತಿದ್ದರು.

ಆ ಹಾವುಗಳಿಂದ ಯಾರಿಗೂ ತೊಂದರೆಯಾಗಲಿಲ್ಲ. ಅವುಗಳು ಅಮಲಿನಲ್ಲಿದ್ದಂತಿದ್ದವು. ಏಲಕ್ಕಿ ತೋಟದ ಚೇಳುಗಳು ಕುಟುಕುವುದಿಲ್ಲ (ಅಂತೆ). ಅಂತೆಯೇ ಈ ಹಾವುಗಳು ವಿಷಪೂರಿತ ಹಾವುಗಳೆಂದೆನಿಸಿದರೂ ಯಾರಿಗೂ ಅದರ ಅನುಭವವಾಗಲಿಲ್ಲ ಅರ್ಥಾತ್ ಅದು ಯಾರಿಗೂ ಕಚ್ಚಿರಲಿಲ್ಲ.

ಸುಮುಖ ಪ್ರತಿದಿನ ಆ ಹಾವುಗಳನ್ನು ನೋಡುತ್ತಿದ್ದ. ಅವು ಅವನ ಕುತೂಹಲವನ್ನು ಕೆರಳಿಸಿದ್ದವು. ಆಹಾರವಿಲ್ಲದೆ ಅವು ಹೇಗೆ ಬದುಕುತ್ತವೆ ಎಂಬುದು  ಸುಮುಖನ ಮುಂದಿದ್ದ ಪ್ರಶ್ನೆ.

ಒಂದು ಮುಂಜಾನೆ ಸುಮುಖ ಹಾವುಗಳನ್ನು ನೋಡಲು ಬಂದಾಗ ಅವನಿಗೆ ಆಶ್ಚರ್ಯ ಕಾದಿತ್ತು. ಹಾವುಗಳ ಹೆಡೆಯಲ್ಲಿ, ಎರಡು ಕಣ್ಣುಗಳ ಮಧ್ಯೆ ಮೂರನೆಯ ಕಣ್ಣಿನಂತಿದ್ದ, ವಜ್ರದಂತೆ ಹೊಳೆಯುವಂಥದ್ದೇನೋ ಕಂಡಿತು! ಕೊಂಚ ಸಮಯ ವೀಕ್ಷಿಸಿದ ನಂತರ ಸುಮುಖನಿಗೆ ತಾನು ಕಾಣುತ್ತಿರುವುದು ನಿಜಕ್ಕೂ ವಜ್ರವೆಂಬುದು ಅರಿವಾಯಿತು. ಸುಮುಖ ವಜ್ರವನ್ನೇ ವೀಕ್ಷಿಸುತ್ತಾ ನಿಂತ.

ಇದಾದ ಕೆಲವು ತಿಂಗಳುಗಳ ನಂತರದ ಕಥೆಯನ್ನು ವರ್ತಮಾನ ಕಾಲವೆಂದು ಭಾವಿಸುವುದಾದರೆ, ಈಗ ಆಶ್ರಮಕ್ಕೆ ನಾಗರಿಕತೆಯ ದಾಳಿ ಶುರುವಾಗಿದೆ. ಸುಮುಖನು ಹಾವುಗಳ ತಲೆಯಲ್ಲಿದ್ದ ವಜ್ರಗಳನ್ನೆಲ್ಲ ಪೇಟೆಯಲ್ಲಿ ಮಾರಿ ಮುಗಿಸಿದ್ದಾನೆ! ನಿರ್ವಿಕಾರಿಗಳಾಗಿದ್ದ ಆಶ್ರಮವಾಸಿಗಳೆಲ್ಲರೂ ಸ್ವಾರ್ಥಿಗಳಾಗಿದ್ದಾರೆ. ಎಲ್ಲರೂ ಮಾತನಾಡುತ್ತಾರೆ. ಎಲ್ಲರ ಮನಗಳಲ್ಲಿದ್ದ ವಿಕಾರ ಹೊರ ಬಂದಿದೆ. ಆಶ್ರಮದ ಶಾಂತಿಭಂಗವಾಗಿದೆ. ಹಳೆಯ ಪರಂಪರೆಯವರು ಇದನ್ನೆಲ್ಲಾ ಕಂಡು ವ್ಯಥೆಪಡುತ್ತಿದ್ದಾರೆ.

ಮಾತನಾಡುತ್ತಾ, ಆಶ್ರಮವಾಸಿಗಳಲ್ಲಿ ಅಭಿಪ್ರಾಯ ವ್ಯತ್ಯಾಸ ಕಂಡುಬಂದು ಅವರಲ್ಲಿ ಗುಂಪುಗಾರಿಕೆ ಪ್ರಾರಂಭವಾಯಿತು. ಗುಂಪುಗಳಾದಾಗ ನಾಯಕನ ಅವಶ್ಯಕತೆ ಕಂಡು ಬಂದಿತು. ಆಗ ಚುನಾವಣೆಗಳ ಅವಶ್ಯಕತೆ ಕಂಡು ಬಂದಿತು. ಚುನಾವಣೆಗಳಾದಾಗ ಆಮಿಷ, ಬೆದರಿಕೆ, ದಬ್ಬಾಳಿಕೆಗಲೆಲ್ಲವೂ ಪ್ರಾರಂಭವಾದವು.

ಸುಮುಖ ತನ್ನ ಗುಂಪಿಗೆ ನಾಯಕನಾದ. ಆತ ಮಾತಾಡಿದ, "ನಮ್ಮ ಅಭಿವೃದ್ಧಿಗೆ ನಮ್ಮ ಆಶ್ರಮದ ಈಶಾನ್ಯ ಮೂಲೆಯಲ್ಲಿರುವ ಹಾವುಗಳೇ ಕಾರಣ. ನಮ್ಮ ವಿರೋಧಿ ಬಣದವರು ಆ ಹಾವುಗಳನ್ನೇ ನಾಶ ಮಾಡಲು ಹೊರಟಿದ್ದಾರೆ. ಆಕಾಶದಲ್ಲಿ ಹಾರಾಡುತ್ತಿದ್ದರೂ ನಾವು ನಮ್ಮ ಬೇರುಗಳನ್ನು ಮರೆಯಬಾರದು."

ಸುಮುಖನ ವಿರೋಧಿ ಬಣದ ನಾಯಕ ದುರ್ಮುಖ ಮಾತನಾಡಿದ,"ನಾವಿನ್ನೂ ಅಭಿವೃದ್ಧಿ ಹೊಂದದಿರಲು ನಮ್ಮ ಆಶ್ರಮದ ಈಶಾನ್ಯ ಮೂಲೆಯಲ್ಲಿರುವ ಹಾವುಗಳೇ ಕಾರಣ. ನಮ್ಮ ವಿರೋಧಿ ಬಣದವರು ಆ ಹಾವುಗಳನ್ನು ನಾಶಪಡಿಸಬಾರದೆಂದು ಹೇಳುತ್ತಿದ್ದಾರೆ. ಬಂಧನವನ್ನು ಕಳಚಿಕೊಂಡ ಹಕ್ಕಿಗಳು ಆಗಸದೆತ್ತರಕ್ಕೆ ಹಾರುತ್ತವೆ, ನಾವು ಮನುಷ್ಯರು ಇನ್ನೂ ಭೂಮಿಗಂಟಿಕೊಂಡಿದ್ದೇವೆ." ಇವರಿಬ್ಬರ ಮಾತುಗಳಿಗೂ ಅವರವರ ಬಣದವರು ತಲೆಯಾಡಿಸಿದರು.

ಈಗ ಇದು ಗುಂಪು-ಗುಂಪುಗಳ ಘರ್ಷಣೆಯಾಗಿರದೆ, ಸುಮುಖ-ದುರ್ಮುಖರ ನಡುವಿನ ಯುದ್ಧವಾಗಿತ್ತು. ಕ್ರಮೇಣ ಗುಂಪುಗಳ ಸದಸ್ಯರ ಅಭಿಪ್ರಾಯಗಳು ಗೌಣವಾಗಿ ಸುಮುಖ-ದುರ್ಮುಖರ ಅಭಿಪ್ರಾಯಗಳಂತೆಯೇ ಅವರವರ ಬಣಗಳು ನಡೆಯತೊಡಗಿದವು.

ಈ ಸ್ಥಿತಿ ಮುಂದುವರೆದಾಗ ಸುಮುಖ-ದುರ್ಮುಖರಲ್ಲಿ ಒಂದು ಒಪ್ಪಂದವಾಯಿತು. ಅದರಂತೆ ಇವರಿಬ್ಬರಲ್ಲಿ ಒಬ್ಬರ ಆಡಳಿತ ಮಾತ್ರ ನಡೆಯಬೇಕಿತ್ತು ಅರ್ಥಾತ್ ಯಾವ ಗುಂಪಿಗೆ ಬಹುಮತವಿತ್ತೋ ಆ ಗುಂಪು ಆಶ್ರಮದ ಆಡಳಿತವನ್ನು ನೋಡಿಕೊಳ್ಳಬೇಕಿತ್ತು.

ಚುನಾವಣೆಯ ದಿನ ನಿಶ್ಚಯವಾಯಿತು. ಸುಮುಖ-ದುರ್ಮುಖರಿಬ್ಬರೂ ಪ್ರಚಾರ ನಡೆಸಿದರು. ಚುನಾವಣೆಗೆ ಎರಡು ವಾರಗಳ ಹಿಂದೆ ಎರಡೂ ಗುಂಪುಗಳಿಗೆ ಘರ್ಷಣೆಯಾಯಿತು. ಇದರ  ಫಲವಾಗಿ ಸುಮುಖಾನ ಗುಂಪಿನ ಇಬ್ಬರು ಹಾಗೂ ದುರ್ಮುಖನ ಗುಂಪಿನ ಒಬ್ಬನ ಕೊಲೆಯಾಯಿತು. ಇದರಿಂದಾಗಿ ಘರ್ಷಣೆ-ಮರುಘರ್ಷಣೆಗಳಾದವು. ಈ ಎರಡು ಇಸಮ್ಮುಗಳ ಘರ್ಷಣೆಯನ್ನು ಕಂಡು ರೋಸಿ ಹೋದ ಯುವಕನೊಬ್ಬನಿದ್ದ. ಚುನಾವಣೆಗೆ ಒಂದು ವಾರ ಬಾಕಿ ಉಳಿದಿದ್ದಾಗ ಆತನಿಗೆ ಗುಂಪುಗಾರಿಕೆ ಹಾಗೂ ಅದರ ಫಲಗಳನ್ನು ಸಹಿಸಲು ಅಸಾಧ್ಯವಾಯಿತು. ಆತ ತನ್ನ ಚೀಲವನ್ನು ಹೊರತೆಗೆದು ಅದರ ಒಳಗಿದ್ದುದನ್ನೆಲ್ಲವನ್ನೂ ಹೊರ ಸುರಿದ. ಅದರಲ್ಲಿದ್ದ ಚೂರಿಯನ್ನು ತೆಗೆದು ಅದರ ಹರಿತವನ್ನು ಪರೀಕ್ಷಿಸಿದ.

ಆತ ಆಶ್ರಮದ ಈಶಾನ್ಯ ಮೂಲೆಯತ್ತ ನಡೆದ. ಮಬ್ಬುಗತ್ತಲಿನಲ್ಲಿ ದಾರಿ ಕಾಣಲಿಲ್ಲವಾದರೂ, ತಡವರಿಸಿಕೊಂಡು ಹಂಡೆಯ ಬಳಿ  ತಲುಪಿದ. ಚೂರಿಯ ಹರಿತವಿರುವ ತುದಿಯಿಂದೊಮ್ಮೆ ಹಂಡೆಯನ್ನು ಸವರಿ ಅದನ್ನು ಹಿಂದಕ್ಕೆಳೆದು ಪುನಃ ಹಂಡೆಯತ್ತ ಬೀಸಿದ.  ಹಂಡೆಯಲ್ಲಾದ ಗಾಯದಿಂದಾಗಿ ನೀರೆಲ್ಲವೂ ಹೊರಗೆ ಸೋರಿ ಹೋಯಿತು. ಅದರ ಕೆಳಗಿದ್ದ ಹಾವುಗಳು ವಿಲವಿಲನೆ ಒದ್ದಾಡತೊಡಗಿದವು. ಯುವಕ ಒದ್ದ ರಭಸಕ್ಕೆ ಹಂಡೆಯೊಳಗಿದ್ದ ಹಾವುಗಳು ಹೊರ ಬಿದ್ದವು. ಒಂದೊಂದನ್ನೇ ಪರೀಕ್ಷಿಸಿ  ಚೂರಿಯಿಂದ ಚುಚ್ಚತೊಡಗಿದ ಯುವಕ. ಹಾವುಗಳು ತುಂಡುತುಂಡಾಗಿ ವಿಲವಿಲನೆ ಒದ್ದಾಡಿದವು. ರಕ್ತ ಸಮುದ್ರವಾಗಿ ಹರಿಯಿತು - ರುಧಿರ ಪ್ರವಾಹ! ಎಲ್ಲೆಲ್ಲೂ ರಕ್ತ! ಯುವಕ ಗಾಬರಿಗೊಂಡ. ತಾನು ರಕ್ತದಲ್ಲಿ  ತೇಲುತ್ತಿದ್ದೇನೆಂದು ಅರಿವಾಯಿತು. ಆಶ್ರಮ ರಕ್ತದಲ್ಲಿ ಮುಳುಗಿತು. ಮಲಗಿದ್ದವರೆಲ್ಲರೂ ಅದೇ ಭಂಗಿಯಲ್ಲಿ ರಕ್ತದಲ್ಲಿ ತೇಲುತ್ತಿದ್ದರು!

ಇದೀಗ ಯುವಕನಿಗೆ ಹೃದಯಾಘಾತವಾಗುವಂಥ ಘಟನೆ ನಡೆಯಿತು-ಕತ್ತರಿಸಲ್ಪಟ್ಟ ಪ್ರತಿಯೊಂದು ಹಾವಿನ ಹೆಡೆಯಿಂದ ಮೂರು  ಚೇಳುಗಳು, ಹೊಟ್ಟೆಯ ಭಾಗದಿಂದ ಆರು ಗೂಬೆಗಳು, ಚಿಕ್ಕ ಬಾಲದ ತುದಿಯಿಂದ ಹನ್ನೆರಡು ಕರಿಬೆಕ್ಕುಗಳು ಹುಟ್ಟಿಕೊಳ್ಳತೊಡಗಿದವು! ಯುವಕ ಕಿರುಚತೊಡಗಿದ - "ಏಳಿ! ಎದ್ದೇಳಿ, ಎಲ್ಲರೂ ಮುಳುಗಲಿದ್ದೀರಿ!" - ಯಾರೋ ಏಳಲಿಲ್ಲ, ಎಲ್ಲರೂ ಯಾವುದೊ ಅಮಲಿನಲ್ಲಿದ್ದಂತಿತ್ತು.

ಯುವಕ ಆಗಸದತ್ತ ನೋಡಿದ - ಸುಮುಖ ದುರ್ಮುಖರು ಪುಷ್ಪಕ ವಿಮಾನದಲ್ಲಿ ಕುಳಿತು ಪ್ರವಾಹವನ್ನು ವೀಕ್ಷಿಸುತ್ತಿದ್ದರು - ಈಗ ಅವರಿಬ್ಬರೂ ಒಂದಾಗಿದ್ದರು! "ಜನರೇ! ಎದ್ದೇಳಿ! ನಮ್ಮ ನಾಯಕರು ನಮಗೆ ಮೋಸ ಮಾಡಿದರು. ಅವರು ನಮ್ಮ ಸ್ಥಿತಿಯನ್ನು ನೋಡಿ ಗಹಗಹಿಸಿ ನಗುತ್ತಿದ್ದಾರೆ! ಎದ್ದೇಳಿ! ಪ್ರತಿಭಟಿಸಿ!" - ಯುವಕ ಕಿರುಚತೊಡಗಿದ, ಕಿರುಚುತ್ತಲೇ ಇದ್ದ. ಯಾರೂ ಎಚ್ಚರಗೊಳ್ಳಲಿಲ್ಲ.

Jun 14, 2012

ಈ ಕಾಲ

ನಾವು ನೀವು ಬದುಕುತ್ತಿರುವ ಈ ಕಾಲದಲ್ಲಿ ಯಾವುದಕ್ಕೂ ಬೆಲೆ ಉಳಿದಿಲ್ಲ. ಸತ್ಯ, ನ್ಯಾಯ, ನೀತಿ, ಸಿದ್ಧಾಂತ ಎಂಬುದೆಲ್ಲ ಹಳಸಿದ ಮಾತು. ಹಿಂದೆಲ್ಲ ಚೆನ್ನಾಗಿತ್ತು ಎಂಬುದು ನನ್ನ ಅಭಿಪ್ರಾಯವಲ್ಲ , ಆದರೆ ಇಂದು "ಇದೆಲ್ಲ ಸರಿಯಿಲ್ಲ " ಎಂಬ ಮಾತಿಗೂ ಬೆಲೆ ಇಲ್ಲದಂತಾಗಿದೆ . ಪವಿತ್ರವಾಗಿ , ಪ್ರಶ್ನಾತೀತವಾಗಿ ಯಾವುದೂ ಉಳಿದಿಲ್ಲ.  ದೇವರು ಎಂಬ  ಕಲ್ಪನೆ ಎಷ್ಟು ಮನಗಳಲ್ಲಿ  ಉಳಿದಿದೆಯೋ ಆ ದೇವರೇ  ಬಲ್ಲ! ಆ ದೇವರ  ಹೆಸರಿನಲ್ಲಿ ಎಷ್ಟು ಅವ್ಯವಹಾರಗಳು ನಡೆದಿವೆಯೋ ಅದನ್ನೂ ಅವನೇ ಬಲ್ಲ! ಧರ್ಮವೆಂಬುದು ರಾಜಕೀಯ ದಾಳವಾದದ್ದು ಕೂಡ ಹಳೆಯ ಮಾತು. ಐ.ಎ.ಎಸ್. ಅಧಿಕಾರಿ, ವಕೀಲ, ಸರಕಾರಿ ಉದ್ಯೋಗಿ, ನ್ಯಾಯಾಧೀಶ, ಕೊನೆಗೆ ರಾಷ್ಟ್ರಪತಿಯಂಥ ರಾಷ್ಟ್ರಪತಿ ಕೂಡ ಘನತೆಯನ್ನು ಉಳಿಸಿಕೊಂಡಿಲ್ಲ. ರಾಜಕಾರಣಿ ಮರ್ಯಾದೆ ಕಳೆದುಕೊಂಡು ದಶಕಗಳೇ ಕಳೆದವು. ಇಂಥ ಈ ಕಾಲದಲ್ಲಿ ಯಾರಿಗೂ ಮತ್ತೊಬ್ಬರಿಗೆ ಬುದ್ಧಿ ಹೇಳುವ, ತಿದ್ದುವ ಅರ್ಹತೆ ಇಲ್ಲ. ಎಲ್ಲರೂ ಅವರವರ ಸ್ವಾರ್ಥ ಸಾಧಿಸಿಕೊಳ್ಳುವುದೇ ಸರಿ ಎಂದು ಬದುಕುತ್ತಿದ್ದಾರೆ.

ಸಮಾಜದ ಕಥೆ ಹೀಗಾದರೆ ಖಾಸಗಿ ಜೀವನದ್ದು ಇನ್ನೊಂದು ಕಥೆ. ಸಂಬಂಧಗಳಿಗೆ ಬೆಲೆ ಇಲ್ಲ. ತಂದೆಯ ಮಮತೆ, ತಾಯಿಯ ಪ್ರೀತಿ ಪ್ರಶ್ನಾತೀತವಾದದ್ದು ಎಂದುಕೊಂಡವರು ಎಷ್ಟು ಜನ ಉಳಿದಿದ್ದಾರೋ ಗೊತ್ತಿಲ್ಲ. ಪ್ರೇಮ ಪವಿತ್ರವಾಗಿ ಕಾಣುವುದು ತೀರ ಭಾವುಕವಾಗಿದ್ದಾಗ ಮಾತ್ರ. ನಂತರ ಅದೂ ಕೂಡ ಬೇರೆ ಭಾವಗಳಂತೆ ಮಾಮೂಲಿಯಾಗಿ ಕಾಣತೊಡಗುತ್ತದೆ. ಸ್ವಾರ್ಥದ ಓಟದಲ್ಲಿ ಪ್ರೀತಿ, ಪ್ರೇಮ, ಮಮತೆ, ಸ್ನೇಹ - ಎಲ್ಲವೂ ನಜ್ಜುಗುಜ್ಜಾಗುವುದನ್ನು ಎಲ್ಲರೂ ನೋಡಿದ್ದಾರೆ. ಪ್ರತಿದಿನ ವ್ಯವಹರಿಸುವ ಜನರನ್ನು ಕೂಡ ಅಪರಿಚಿತರಂತೆ ಸಂಶಯದ ದೃಷ್ಟಿಯಿಂದ ನೋಡುವುದನ್ನು ವ್ಯವಹಾರ ಚಾತುರ್ಯ ಎಂದು ಕರೆಯಲಾಗಿದೆ  ಇಂದಿನ ಕಾಲದಲ್ಲಿ. ನಂಬಿಕೆ, ವಿಶ್ವಾಸ, ಆಪ್ತತೆ - ಎಲ್ಲವೂ ಕೆಲವು ಸನ್ನಿವೇಶಗಳಿಗೆ ಅಷ್ಟೆ, ನಂತರ ಅವೂ ಹಳಸಿ ಹೋಗುತ್ತವೆ.

ಇಂಥ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ! ಹೊರಗಿನ ಗದ್ದಲ ಮನಸ್ಸಿಗೂ ಘಾಸಿ ಮಾಡುತ್ತದೆ ಪ್ರತಿದಿನ. ಕೊಳಕು ಸುದ್ದಿಗಳು "ಯಾರನ್ನೂ ನಂಬದಿರು" ಎಂದು ಕಿರುಚುತ್ತವೆ. ಮನುಷ್ಯ ಮನುಷ್ಯನನ್ನು ನಂಬದಿರುವ ಕಾಲ. ಸಂವೇದನೆಗಳಿಗೆ ಜಡವಾಗಿರುವ ನಮ್ಮ ಕಾಲ. ಹೀಗೆಲ್ಲ ಅನಿಸುವುದು ಬದಲಾದ ಕಾಲದಿಂದಲೋ, ಅಥವಾ ಬದಲಾಗಿದ್ದು ನಾನೋ ಎಂಬ ಪ್ರಶ್ನೆಗೆ ಉತ್ತರಿಸಲು ನಾನು ತಕ್ಕ ವ್ಯಕ್ತಿಯಲ್ಲ! ಹಾಗೊಮ್ಮೆ ಬದಲಾದದ್ದು ನನ್ನ ಮನೋಭಾವವಾಗಿದ್ದರೂ ಕೂಡ ಅದರಲ್ಲಿ ನಾನು ಬದುಕುತ್ತಿರುವ ಕಾಲದ್ದೂ ಪಾಲಿದೆ ಎಂಬುದು ಮಾತ್ರ ಸತ್ಯ!


You might also like:
ಹುಡುಕಾಟ

Nothing

The other day, the siren at the Electronic City Phase 2 traffic signal was beeping continuously. Normally, this siren is to indicate that the pedestrians can cross the road. However, this time it was due to a malfunctioning of the system. The beep was still going on when I left that place. The traffic signal displayed the green light for pedestrians, as the vehicles were speeding their way on the road. As everyone knows, these signals are to be followed at one's own risk.

It was good fun to see the traffic police trying to stop the beep. One guy climbed on to the post and tried his skills. Nothing stopped the beep. But the fact is that nobody took the beep seriously. None of the pedestrians relied on the signal while crossing the road there. Needless to say, none of the vehicles cared to slow down looking at the signal.



The Electronic city signal provides an option to the pedestrian to turn signal in his favor while crossing the road. He can push a button which will turn green signal to pedestrians, also switching on the beep. (The beep is probably for the visually impaired crossing the road.) My guess is that somebody pressed this button, and the beep started. I am guessing that nobody has done this before, and that the police doesn't know how this system actually works. Probably it is designed to stop after a while, but didn't behave the way it is intended to.

I cross this road everyday, but I had never noticed the button. I had never seen anybody using this. I don't think I will use it in future either!
.

Jun 13, 2012

ವ್ಯರ್ಥ ಹಣ ಕಳೆದದ್ದು

ಈಗ ಒಂದು ವರ್ಷದಿಂದ ವ್ಯರ್ಥ ಹಣ ಕಳೆದದ್ದು ಈ ಕೆಳಗಿನ ಸಿನಿಮಾಗಳಿಗೆ :
  1. ಅಣ್ಣಾ ಬಾಂಡ್
  2. ಗೋವಿಂದಾಯ ನಮಃ 
  3. ಭೀಮಾ ತೀರದಲ್ಲಿ 
  4. ಬ್ರೇಕಿಂಗ್ ನ್ಯೂಸ್ 
  5. ಪರಮಾತ್ಮ
  6. ಜೋಗಯ್ಯ
  7. Shanghai (ಹಿಂದಿ)
  8. Madagascar 3 (ಆಂಗ್ಲ)
  9. ವೇಟೈ (ತಮಿಳು)
  10. ಮಂಕಾತ್ತ (ತಮಿಳು)
ಇಷ್ಟ ಪಟ್ಟು ನೋಡಿದ್ದು -
  1.  ವಿಷ್ಣುವರ್ಧನ
  2. Vicky Donor (ಹಿಂದಿ)