Dec 1, 2014

Facebook Ramblings - Dec 2014

Dec 28, 2014:

The year looked normal and uninteresting; but when Facebook told me how great it was, WOW!
feeling blah.

 Dec 21, 2014:


ನಿನ್ನೆಯಿಂದ ಪೀಕೆ ಸಿನಿಮಾದ ಬಗ್ಗೆ ಫೇಸ್ಬುಕ್ಕಿನಲ್ಲಿ ಕೇಳಿ ಬರುತ್ತಿರುವ ವಿವಿಧ ತಪ್ಪು ಅಭಿಪ್ರಾಯಗಳು :
೧. ಇದು ಹಿಂದೂ ಧರ್ಮ ವಿರೋಧಿ ಸಿನಿಮಾ: ಪೀಕೆ ಮನರಂಜನೆಗೋಸ್ಕರ ಮಾಡಿರುವ ಸಿನಿಮಾ. ಮನರಂಜನೆ ನೀಡುತ್ತಲೇ ಮನುಷ್ಯ ಕಟ್ಟಿರುವ ದೇವರ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ. ಆ ಪ್ರಶ್ನೆಗಳು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತವೆ. ಸಿನಿಮಾವನ್ನು ವಿಮರ್ಶೆ ಮಾಡುವ ಬದಲು ಅದರ ನಾಯಕನಟನ ಧರ್ಮವನ್ನು ವಿಮರ್ಶೆ ಮಾಡಹೊರಟರೆ ಇಂಥ ಅಭಿಪ್ರಾಯ ಬರುತ್ತದೆ.
೨. ಪೀಕೆಯಲ್ಲಿ ಹೊಸತೇನೂ ಇಲ್ಲ. ಇದೆಲ್ಲ ನನಗೆ ಮೊದಲೇ ಗೊತ್ತಿತ್ತು: ಒಂದಿಷ್ಟು ಪುಸ್ತಕಗಳನ್ನು ಗಂಭೀರವಾಗಿ ಓದಿದವರಿಗೆ ಸಾಮಾನ್ಯರಿಗೆ ...ತಿಳಿದಿರದ ಎಷ್ಟೋ ವಿಷಯಗಳು ತಿಳಿದಿರುತ್ತದೆ. ಆದರೆ ಆ ಬುದ್ಧಿವಂತಿಕೆಯ ಅಹಂ ಇಟ್ಟುಕೊಂಡು ನೋಡಿದರೆ ಯಾವ ವಿಷಯವೂ ಹೊಸದಾಗಿ ಕಾಣುವುದಿಲ್ಲ. ಎಲ್ಲ ಸಿನಿಮಾಗಳೂ ನಮ್ಮ ಬುದ್ಧಿವಂತಿಕೆಗೆ ಸವಾಲಾಗಿಯೇ ಇರಬೇಕು ಎಂದೇನಿಲ್ಲ. ಇದುವರೆಗೆ ಕೆಲವು ವಿಚಾರವಾದಿಗಳ ಮಾತುಗಳಲ್ಲಿ, ಪುಸ್ತಕಗಳಲ್ಲಿ,ಹಾಗೂ ಕೆಲವರ ಮನಗಳಲ್ಲಿ ಕುಳಿತಿದ್ದ ವಿಚಾರಗಳು ಬಾಲಿವುಡ್ ನಂಥ ಪ್ರಬಲ ಮಾಧ್ಯಮದ ಮೂಲಕ ಮತ್ತಷ್ಟು ಜನರನ್ನು ತಲುಪುವುದಾದರೆ ತಪ್ಪೇನು? 'ಪ್ರೇಮ ಅಮರ' ಎನ್ನುತ್ತ ಒಂದು ಗಂಡು ಮತ್ತು ಹೆಣ್ಣಿನ ನಡುವಿನ ಪ್ರೇಮವನ್ನು ಏನೋ ಹೊಸ ವಿಷಯವೆಂಬಂತೆ ಮತ್ತೆ ಮತ್ತೆ ತೋರಿಸುವ ಸಿನಿಮಾಗಳ ಮಧ್ಯೆ ಇಂಥದೊಂದು ಹೊಸ ಪ್ರಯತ್ನ ನಡೆದಾಗ ಪ್ರೋತ್ಸಾಹಿಸಬೇಕೆ ಹೊರತು 'ನನಗಿದೆಲ್ಲ ಇಪ್ಪತ್ತು ವರ್ಷಗಳ ಹಿಂದೆಯೇ ಗೊತ್ತಿತ್ತು' ಎಂಬ ಗರ್ವ ತಪ್ಪು.
೩. ಅಮೀರ್ ಖಾನ್ ಹಿಂದುತ್ವ ವಿರೋಧಿ, ಅವನ ಸಿನಿಮಾ ನೋಡುವ ಹಿಂದೂಗಳು ನಿರಭಿಮಾನಿಗಳು: ಸಿನಿಮಾವನ್ನು ಸಿನಿಮಾ ಆಗಿ ನೋಡದೆ hidden agenda ಗಳನ್ನು ಹುಡುಕುವವರಿಗೆ ಹೀಗೆ ಅನ್ನಿಸುತ್ತದೆ. ಪೀಕೆ ನೋಡಿದ ಹಿಂದೂಗಳು ಮರುಕ್ಷಣವೇ ಹಿಂದೂ ಧರ್ಮ ಸರಿಯಿಲ್ಲ, ನಾವೆಲ್ಲ ಧರ್ಮ ಬದಲಿಸೋಣ ಎನ್ನುತ್ತಾರೆಯೇ?

Dec 20, 2014:

PK : An awesome first half makes you laugh about God, religion, and social conditioning. That makes it a treat to watch. The movie gives in to usual Bollywood formula in the second half, but that can be forgiven.
Rajkumar Hirani has used all his usual tricks, but has delivered a movie that is entertaining and thought provoking.
Watch it for the terrific first half. That alone makes it a great movie.

Dec 1, 2014:

ಮಾತು ಆಡಿದರೆ ಹೋಯಿತು, ಟಚ್ ಸ್ಕ್ರೀನ್ ಒಡೆದರೆ ಹೋಯಿತು. :-D

Nov 1, 2014

FaceBook Ramblings - Nov 2014

Nov 20, 2014:

ಎಫ್.ಎಮ್. ನಲ್ಲಿ ಹಾಡು ಕೇಳುತ್ತಾ ಗಾಡಿ ಓಡಿಸುತ್ತಿದ್ದ ಅವನ ಟೈರ್ ಒಮ್ಮೆ ಜೋರಾಗಿ 'ಢಮ್' ಎಂದು ಸದ್ದು ಹೊರಡಿಸಿ ಗಾಳಿ ಕಳೆದುಕೊಂಡಿತು. ಇನ್ನೇನು ಹಿಡಿತ ತಪ್ಪಿ ಬೀಳಲಿದ್ದವನು ಸಂಭಾಳಿಸಿಕೊಂಡು ಗಾಡಿಯನ್ನು ರಸ್ತೆಯ ಬದಿಗೆ ತರುವಲ್ಲಿ ಯಶಸ್ವಿಯಾದ. ಗಾಡಿಯನ್ನು ತಳ್ಳಿಕೊಂಡು ಹೊರಟ. ಬಿಸಿಲು ಜೋರಿತ್ತು. ಬೆವರಿಳಿಸಿಕೊಂಡು, ಏದುಸಿರು ಬಿಡುತ್ತಾ ಅಸಹಾಯಕ ಸಿಟ್ಟಿನಲ್ಲಿ ಪ್ರಪಂಚಕ್ಕೆಲ್ಲ ಬಯ್ಯುತ್ತಿದ್ದವನ ಕಣ್ಣಿಗೆ ಆ ಬೋರ್ಡು ಬಿದ್ದಾಗ ಅವನ ಬಾಯಲ್ಲಿ ಬಂದ ಹಾಡು - 'ಅರರರೇ ಪಂಚರ್ ಅಂಗ್ಡಿ!!!'. ಎಫ್.ಎಮ್. ನಲ್ಲಿ ಬರುತ್ತಿದ್ದ ಹಾಡು -'ಅರರರೇ ಪಂಚರಂಗಿ!'

Nov 18, 2014:

ಒಂದು ಮಕ್ಕಳ ಕಥೆ:
ಒಂದು ಊರಿನಲ್ಲಿ ಒಬ್ಬ ಸಜ್ಜನ ವ್ಯಾಪಾರಿಯಿದ್ದ. ಅವನು ದೈವಭಕ್ತ, ನ್ಯಾಯಕ್ಕೆ ಹೆದರುತ್ತಿದ್ದ. ಊರ ಜನರೂ ಕೂಡ ಇವನನ್ನು ಬಹಳ ಮೆಚ್ಚುತ್ತಿದ್ದರು.
ಅದೇ ಊರಿನಲ್ಲಿ ಒಬ್ಬ ದುಷ್ಟ ವ್ಯಾಪಾರಿಯಿದ್ದ. ಅವನು ದೇವರನ್ನು ನಂಬುತ್ತಿರಲಿಲ್ಲ. ಅವನು ಬಹಳ ಅನ್ಯಾಯ ಮಾಡುತ್ತಿದ್ದ.
...
ಕಾಲ ಕಳೆದಂತೆ ಸಜ್ಜನ ವ್ಯಾಪಾರಿಯ ವ್ಯವಹಾರ ಉನ್ನತಿ ಹೊಂದುತ್ತಾ ಹೋಯಿತು. ದುಷ್ಟ ವ್ಯಾಪಾರಿಯ ಮೋಸ, ವಂಚನೆ ಅವನನ್ನೇ ಬಲಿ ತೆಗೆದುಕೊಂಡಿತು.
ನೀತಿ: ನ್ಯಾಯಕ್ಕೇ ಜಯ.... ಹೀಗೆಲ್ಲಾ ಹೇಳ್ತಾ ಹೋದ್ರೆ ಇವತ್ತಿನ ಮಕ್ಕಳು ನಂಬೊಲ್ಲ ಬಿಡಿ. ದೊಡ್ಡವರಂತೂ ಪಕಪಕನೆ ನಗುವುದು ಖಂಡಿತ. ಹಾಗಿದ್ರೆ ನೀತಿ ಏನು? ಯಾವೋನಿಗೊತ್ತು!

Nov 17, 2014:

ಈ 'ಸೆಲ್ಫಿ' ಯುಗದಲ್ಲಿ 'ಸೆಲ್ಫ್ ಲೆಸ್' ಆಗಿರು ಅಂತ ಹೇಳೋದು ಹೇಗೆ?



Oct 1, 2014

FaceBook Ramblings - Oct 2014

Oct 24, 2014:

ಅಪ್ಪ ಪಟಾಕಿ ಕೊಡಿಸ್ತಿರಲಿಲ್ಲ. 'ಎಟುಕದ ದ್ರಾಕ್ಷಿ ಹುಳಿ' ಅನ್ನಿಸಿರಬಹುದು, ಮತ್ತು ಅನಿಸಿದ್ದನ್ನೆಲ್ಲ 'ಚುಟುಕ'ದಲ್ಲಿ ಹೇಳುವ ಹುಚ್ಚು. ಹೈಸ್ಕೂಲಿನಲ್ಲಿದ್ದಾಗ ಬರೆದದ್ದು, ದೀಪಾವಳಿಯ ಸಮಯದಲ್ಲಿ:
ಹಬ್ಬದಂದು ಪಟಾಕಿ ಏಕೆ?
ಸಂತಸವ ಸದ್ದಿನೊಂದಿಗೆ ಆಚರಿಸಬೇಕೆ!
ವೃಥಾ ಮಾಲಿನ್ಯವ ಸೃಷ್ಟಿಸಲೇಕೆ?...
ಮುಂದೊಮ್ಮೆ ಮರುಗಬೇಕಾದೀತು, ಜೋಕೆ!

Oct 16, 2014:
ಬಂಧೀಖಾನೆ....
ನಾನೊಬ್ಬ ಖೈದಿ,
ಸಿದ್ಧಾಂತಗಳೆಲ್ಲ ಸರಪಳಿಗಳು
ನಾ ಬಂಧಿ ವಿಚಾರಗಳ ಬಂಧೀಖಾನೆಯಲ್ಲಿ....
...
ನನ್ನ ಗೆಳೆಯ ಕೂಡ ಖೈದಿ,
ರೂಪಾಯಿಯ ಸರಪಳಿಯಲ್ಲಿ
ಅವ ಬಂಧಿ ಅವನ ಕಾರು, ಅವನದೇ ಅಪಾರ್ಟ್ಮೆಂಟುಗಳಲ್ಲಿ
ನನ್ನ ಬಾಸ್ ನ ಕಥೆ ಬೇರೆ,
ಅವ ನಿಜಕ್ಕೂ ಸ್ವತಂತ್ರ
ಅದು ತಿಳಿಯದ ಅವನೂ ಕೂಡ ಬಂಧಿ,
ಅವನದೇ ಮೌಢ್ಯದಲ್ಲಿ!
ನೆರೆಮನೆಯವ ಸಿನಿಕ
ಅಲ್ಲದೇ ಮಹಾ ಮೌನಿ
ಅವನೂ ಕೂಡ ಖೈದಿ
ಅವನದೇ ಮೌನದಲ್ಲಿ...
ಅವನ ಪತ್ನಿ ಬಾಯಿಬಡುಕಿ
ಜೊತೆಗೆ ಟೆಲಿವಿಷನ್ ಶೋಕಿ
ವಿಚಾರಗಳೆಲ್ಲ ಚೌಕಾಕಾರ
ಅವಳು ಎಂದೆಂದಿಗೂ ಬಂಧಿ
ನಲವತ್ತೆರಡಿಂಚಿನ ಪೆಟ್ಟಿಗೆಯಲ್ಲಿ!
ನಾವೆಲ್ಲ ಖೈದಿಗಳು
ನಮ್ಮ ನಂಬಿಕೆಗಳಲ್ಲಿ,
ಭಕ್ತಿಯಲ್ಲಿ, ಪ್ರೇಮದಲ್ಲಿ
ಮಮತೆಯಲ್ಲಿ, ಮಾತ್ಸರ್ಯದಲ್ಲಿ...
ನಾವು ಕಟ್ಟಿದ ದೇವರು ಕೂಡ ಖೈದಿ
ಅವನು ಎಂದೆಂದಿಗೂ ಬಂಧಿ,
ನಾವು ಹೊರಿಸಿದ ಶಕ್ತಿಯ ಭಾರದಲ್ಲಿ,
ಕಲ್ಪಿತ ಕಥೆಗಳ ಪರಿಮಿತ ಸತ್ಯಗಳಲ್ಲಿ,
ಬದಲೇ ಆಗದ ಧರ್ಮ ಗ್ರಂಥಗಳ ವ್ಯಾಖ್ಯಾನದಲ್ಲಿ....
ಇಷ್ಟರಲ್ಲೇ ದೇವರು ಕೂಡ
ಬೈಲ್ ಅರ್ಜಿ ಹಾಕಿರಬಹುದು....

Oct 1, 2014:

ಏನಾಶ್ಚರ್ಯ! ಎಷ್ಟೊಂದು ವಿದ್ಯಾವಂತರೆನಿಸಿಕೊಂಡವರಿಗೆ ರಸ್ತೆಯಲ್ಲಿ ಕಸ ಎಸೆಯಬಾರದೆಂದು ಮೊನ್ನೆ ಮೊನ್ನೆ ಅರಿವಾಯಿತಂತೆ. ಶಂಖದಿಂದ ಬಂದ್ರೇನೆ ತೀರ್ಥ ಅಂದರೆ ಇದೇ ಏನು?


Sep 1, 2014

FaceBook Ramblings - Sep 2014

Sep 29, 2014:

Banners welcoming Amma, on Hosur road. What did they mean; welcome to Parappana Agrahara?

Sep 19, 2014:

When life becomes just about the house you own, the car you drive, the restaurants you dine in, and the money you earn... You know you have stopped living.

Sep 17, 2014:

ನೈಸ್ ರೋಡ್ ನ ಬದಿಯಲ್ಲಿ ಬೆಳೆದ ಹುಲ್ಲನ್ನು ಕತ್ತರಿಸಿ 'ಸಮ' ಮಾಡುವವರನ್ನು ಕಂಡಾಗ ಅನಿಸಿದ್ದು - ಮನುಷ್ಯ ಯಾವುದನ್ನೂ ಅದರ ಪಾಡಿಗೆ ಬಿಡಲೊಲ್ಲ. ಎಲ್ಲವನ್ನೂ ಕತ್ತರಿಸಿ ಮಟ್ಟಸ ಮಾಡಬೇಕು, ಎಲ್ಲವೂ ತನ್ನ ಹಿಡಿತದಲ್ಲಿರಬೇಕು. ಎಲ್ಲವೂ ವ್ಯವಸ್ಥೆಯ ಬಂಧನದಲ್ಲಿರಬೇಕು. ಯಾವನಾದರೂ ಸ್ವತಂತ್ರನಾಗಿರಲು ಯತ್ನಿಸುತ್ತಿದ್ದಾನೆಯೇ? ಬಿಡಬೇಡ, ಕಡಿದು ಮಟ್ಟಸ ಮಾಡು!



Jul 1, 2014

FaceBook Ramblings - Jul 2014

Jul 30, 2014:

Preethi-geethi, maduve-giduve, college - geelej, thindi-gindi, jagaLa-gigaLa... 'gi'kaarave yake?

Jul 17, 2014:

ಮನುಷ್ಯ ಮನುಷ್ಯನಿಗೆ ಅರ್ಥವಾಗದ ಕಾರಣಕ್ಕಾಗಿ ದೇವರನ್ನು ಸೃಷ್ಟಿಸಿದನೇ?

Jun 1, 2014

FaceBook Ramblings - Jun 2014

Jun 22, 2014:

ಟಿಪಿಕಲ್ ಕೈಲಾಸ್ : ಸಹಜ ಹಾಸ್ಯದ ಉತ್ತಮ ಚಿತ್ರ. ಸೃಜನ್ ಲೋಕೇಶ್ ನಗಿಸುವುದು ತುಂಬ ಸುಲಭವೇನೋ ಎಂದೆನಿಸುವಂತೆ ನಟಿಸಿದ್ದಾರೆ. ಹಾಸ್ಯಕ್ಕಾಗಿ ಹಾಸ್ಯ ಸೃಷ್ಟಿಸದೆ, ಒಂದು ಸರಳ ಕಥೆ ಹೇಳುತ್ತ, ಆ ಕಥೆಯಲ್ಲಿ ಹಾಸ್ಯವನ್ನು ಬೆರೆಸಿರುವ ನಿರ್ದೇಶಕರ ಶೈಲಿ ಇಷ್ಟವಾಗುತ್ತದೆ.
Watch it for a good laugh.

Jun 19, 2014:

ದೇವರು ಇದ್ದಾನೆಯೇ ಇಲ್ಲವೇ ಎಂದು ಕೇಳಿದರೆ ಇದ್ದಾನೆ ಅಥವ ಇಲ್ಲ ಎಂದು ಖಚಿತವಾಗಿ ಉತ್ತರಿಸುವವರೆ ಹೆಚ್ಚು. ಈ ಪ್ರಶ್ನೆಗೆ 'ಗೊತ್ತಿಲ್ಲ ', ಎಂದು ಮುಗ್ಧವಾಗಿ ಉತ್ತರಿಸುವುದು ಸಾಧ್ಯವಿಲ್ಲವೆ? 'ನಾನು' ಎಂದರೆ ಏನು ಎಂಬುದನ್ನು ಅರಿಯುವುದೇ ಅಸಾಧ್ಯವಾಗಿರುವಾಗ, ದೇವರು ಇಲ್ಲ ಎಂದು ಸಾಧಿಸಿ ತೋರಿಸಲು ಸಾಧ್ಯವೆ? ಅಥವ ದೇವರು ಇದ್ದಾನೆ ಎನ್ನುವುದಾದಲ್ಲಿ ಅವನನ್ನು ಪಡೆಯಲು ಸಾಧ್ಯವೆ!? ಮನುಷ್ಯತ್ವವನ್ನು ಉಳಿಸಿಕೊಳ್ಳಲೇ ಹೆಣಗಬೇಕಾಗಿ ಬಂದಿರುವಾಗ, ದೈವತ್ವದ ಅನ್ವೇಷಣೆ ಅವಶ್ಯವೆ?

Jun 3, 2014:

ಬದುಕು ಮುಖ್ಯವೆ, ಬದುಕಿನ ಕುರಿತಾದ ಪ್ರಶ್ನೆಗಳು ಮುಖ್ಯವೆ? ಬದುಕಿನ ಹಿಂದೆ ಹೋದವರು ಪ್ರಶ್ನೆಗಳನ್ನು ಮರೆಯುತ್ತಾರೆ, ಪ್ರಶ್ನೆಗಳ ಹಿಂದೆ ಹೋಗುವವರು ಬದುಕುವುದನ್ನು ಮರೆಯುತ್ತಾರೆ. ಎರಡನ್ನೂ ಸಮನಾಗಿ ತೂಗಿಸಿಕೊಂಡು ಹೋಗುತ್ತೇನೆ ಎನ್ನುವವರು ಎರಡಕ್ಕೂ ನ್ಯಾಯ ಒದಗಿಸುವುದಿಲ್ಲ.
ಬದುಕು ಮುಖ್ಯವೆ, ಬದುಕಿನ ಕುರಿತಾದ ಪ್ರಶ್ನೆಗಳು ಮುಖ್ಯವೆ?



Mar 8, 2014

ವಿಶ್ವ ಮಹಿಳಾ ದಿನ

ಬ್ಯಾಂಗಳೂರ್ ವೇವ್ಸ್ ಎಂಬ ವೆಬ್ ಸೈಟ್ ನಲ್ಲಿ ಪ್ರಕಟವಾದ ವಿಶ್ವ ಮಹಿಳಾ ದಿನದ ಕುರಿತಾದ ನನ್ನ ಲೇಖನ :

http://www.bangalorewaves.com/articles/bangalorewaves-article-details.php?val1=NjI5


Mar 6, 2014

ಹ್ಯಾಪಿ ಬರ್ತ್ ಡೇ

ಪುಷ್ಪ ವಿವೇಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯಾದ ಎರಡು ತಿಂಗಳಿಗೇ ಬೇರೆ ಮನೆ ಮಾಡಿ ಸಂಸಾರ ಹೂಡಿದ್ದರು. ವಿವೇಕನಿಗೆ ಐದು ಅಣ್ಣಂದಿರಿದ್ದರು, ಹಾಗೂ ಆರು ಅಕ್ಕಂದಿರು. ಅಕ್ಕಂದಿರೆಲ್ಲರ ಮದುವೆಗಳಾಗಿ ಗಂಡಂದಿರ ಮನೆಗಳನ್ನು ಸೇರಿಕೊಂಡಿದ್ದರಾದರೂ, ಅಣ್ಣಂದಿರು ಮದುವೆಗಳಾದ ಮೇಲೂ ಜೊತೆಗೇ ಇದ್ದರು. ವಿವೇಕ-ಪುಷ್ಪ ಬಂಡಾಯವೆದ್ದು ಬೇರೆ ಮನೆ ಮಾಡಿದ್ದರು. ತಾವೇನೋ ಕ್ರಾಂತಿ ನಡೆಸಿದ್ದೇವೆಂಬ ಭಾವವಿತ್ತು ಇಬ್ಬರಲ್ಲೂ ಈ ವಿಷಯದಲ್ಲಿ. ಮುಂದೆ ಪುಷ್ಪ ಗಂಡು ಮಗುವೊಂದನ್ನು ಹೆತ್ತಳು.  ಹುಟ್ಟುತ್ತಲೇ ನಿತ್ರಾಣವಾಗಿತ್ತು; ಹೆಚ್ಚು ತೂಕವಿರಲಿಲ್ಲ. ವಿವೇಕನ ಅಣ್ಣಂದಿರ ಹೆಂಡತಿಯರು 'ದೊಡ್ಡವರ  ಕೇಳದ ಫಲ. ಮಾಗುವಿಗೆ ಆರೋಗ್ಯ ಸರಿಯಿಲ್ಲ.', ಎಂದು ಆಡಿ ತೋರಿಸಿದರು. ವಿವೇಕ ಕೆಮ್ಮಿ ಸುಮ್ಮನಾದರೆ ಪುಷ್ಪ ತಾನು ಮಗುವನ್ನು ಬೆಳೆಸಿ ಗೆಲ್ಲಿಸಿ ತೋರಿಸಬೇಕೆಂದು ಪಣ ತೊಟ್ಟಳು. ಮಗುವಿನ ಭವಿಷ್ಯದ ಬಗ್ಗೆ ಗಂಡನಲ್ಲಿ ತನ್ನ ಯೋಜನೆಗಳನ್ನು ಹಂಚಿಕೊಂಡಳು. ವಿವೇಕ ಪುಷ್ಪಳ ದುಬಾರಿ ಯೋಜನೆಗಳಿಗೆಲ್ಲ ಹಣ ಹೊಂದಿಸುವುದಾದರೂ ಹೇಗೆ ಎಂದು ಚಿಂತಿಸಲಾರಂಭಿಸಿದ. ತನಗೆ ಮುಂದೆ ಬಹಳ  ಕಷ್ಟಕರ ದಿನಗಳು ಎಂದು ತನ್ನ ಹಣೆಬರಹವನ್ನು ತಾನೇ ಹಳಿದುಕೊಂಡ. 
**********************************************************************************************************
ಮಗುವಿನ ನಾಮಕರಣ ಸಮಾರಂಭ ಭರ್ಜರಿಯಾಗಿ ನಡೆಯಿತು. ವಿವೇಕನ ಸಾಲದ ಹೊರೆ ಹೆಚ್ಚಿತು.
**********************************************************************************************************
ಈಗ ಆರ್ಯನ್ ಎಂಬ ಶುಭನಾಮಾಂಕಿತನಾಗಿದ್ದ ಮಗುವಿನ ಮೊದಲನೆ ಹುಟ್ಟುಹಬ್ಬದ ಯೋಜನೆ ಹಾಕಿಕೊಂಡಳು ಪುಷ್ಪ. ದೊಡ್ಡದೊಂದು ಪಾರ್ಟಿ ಆಯೋಜಿಸಿ, ಮನೆಯವರನ್ನೆಲ್ಲ ಕರೆದು, ಬಂದವರಿಗೆಲ್ಲ ಸ್ವಾಗತ ದ್ವಾರದಲ್ಲೇ ಕೋಕಾ-ಕೋಲಾ ಕುಡಿಸಿ, ಬಂದವರ ಮಕ್ಕಳಿಗೆಲ್ಲ ಆಟಗಳನ್ನು ಆಡಿಸಿ, ಮಗನಿಂದ ಕೇಕ್  ಕತ್ತರಿಸಿ, ಕೇಕಿನ ಮೇಲೊಂದು ಪುಟಾಣಿ ಕ್ಯಾಂಡಲ್ ಇರಿಸಿ, ಅದನ್ನು ಮಗನಿಂದ ಊದಿಸಿ, ಎಲ್ಲರೂ ಚಪ್ಪಾಳೆ ಹೊಡೆಯುತ್ತಿದ್ದರೆ ಮಗನಿಗೆ ಮುತ್ತಿಟ್ಟು, ಅದರದ್ದೊಂದು ಫೋಟೋ ಹಿಡಿಸಿ - ಎಂದೆಲ್ಲ ಕನಸು ಕಾಣತೊಡಗಿದ್ದಳು ಪುಷ್ಪ. ಆದರೆ ಮಗ ಆರ್ಯನ್ ಮನೆಯಲ್ಲಿ ಗ್ಯಾಸ್ ಸ್ಟೌವ್ ಉರಿಸುವಾಗ ಬೆಚ್ಚಿ ಬೀಳುತ್ತಿದ್ದ. ಮಗನನ್ನೆತ್ತಿಕೊಂಡು ಅಡಿಗೆ ಮಾಡಲು ಸ್ಟೌವ್ ಹಚ್ಚಿದರೆ ಮಗ ಕಿಟಾರನೆ ಕಿರುಚುತ್ತಿದ್ದ. ಒಂದು ವರ್ಷದ ಮಗುವಿಗೆ ಬೆಂಕಿಯೆಂದರೆ ವಿಪರೀತ ಭಯವಿತ್ತು. ಇದು ಸಹಜವೇ ಆದರೂ ಅವನಿಂದ ಕ್ಯಾಂಡಲ್ ಊದಿಸುವ ತನ್ನ ಕನಸು ನನಸಾಗಬೇಕಾದರೆ ಹೇಗಾದರೂ ಈ ಭಯವನ್ನು ಹೋಗಲಾಡಿಸಬೇಕೆಂದು ಪುಷ್ಪ  ಅದಕ್ಕೆ ಉಪಾಯಗಳನ್ನು ಹುಡುಕಿದಳು. 
ಪ್ರತಿದಿನವೂ ಮಗನ ಮುಂದೆ ಬೆಂಕಿ ಕಡ್ಡಿ ಗೀರುವುದು - ಇದಕ್ಕೆ ಪ್ರತಿಕ್ರಿಯೆಯಾಗಿ ಅವನು ಕಿರುಚಿಕೊಳ್ಳುವುದು - ಪುಷ್ಪಳ ಅವಿವೇಕದ ಬಗ್ಗೆ ವಿವೇಕ ರೇಗುವುದು ಬಹಳ ದಿನ ನಡೆಯಿತು. ಕೊನೆಗೊಮ್ಮೆ ಮಗು ಕಿರುಚಿಕೊಳ್ಳುವುದು ನಿಂತಿತು. ನಂತರ ಕ್ಯಾಂಡಲ್ ಊದುವ ತರಬೇತಿ ನಡೆಯಿತು. ಒಂದು ಸಂಜೆ ಪುಷ್ಪ ಮಗನಿಂದ ಕ್ಯಾಂಡಲ್ ಊದಿಸುವುದರಲ್ಲಿ ಯಶಸ್ವಿಯಾಗಿ, ತಾನು ಮಗನನ್ನು ತಯಾರು ಮಾಡಿದ ರೀತಿಗೆ ಹೆಮ್ಮೆ ಪಟ್ಟುಕೊಂಡು ಬೀಗಿದಳು. ವಿವೇಕ ಹೆಂಡತಿ ಮತ್ತು ಮಗನ ಮೇಲೆ ವಿಪರೀತ ಪ್ರೀತಿ ಉಕ್ಕಿ ಬಂದು ತಮ್ಮ ಮೂವರ ಫೋಟೋ ಒಂದನ್ನು ತನ್ನ ಮೊಬೈಲ್ ಫೋನ್ ನಲ್ಲಿ ಕ್ಲಿಕ್ಕಿಸಿಕೊಂಡ. 
*******************************************************************************************************
ವಿವೇಕನ ಅಣ್ಣಂದಿರ ಮಕ್ಕಳು ಯಾರಿಗೂ ಮೊದಲನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಾಗಿರಲಿಲ್ಲ. ಪುಷ್ಪ ತಾನು ಅಭೂತಪೂರ್ವವಾದದ್ದೇನನ್ನೋ ಸಾಧಿಸಿದ ಖುಷಿಯಲ್ಲಿದ್ದಳು ಮಗನ ಸಮಾರಂಭದ ದಿವಸ. ಸ್ನೇಹಿತರಿಗೆ, ಹಿತೈಷಿಗಳಿಗೆ, ಬಂಧುವರ್ಗಕ್ಕೆ ಆಮಂತ್ರಣವಿತ್ತು. ಪುಷ್ಪಳ ಆಸೆಯಂತೆಯೇ, ಈಗಿನ ಟ್ರೆಂಡ್ ಗೆ ಅನುಗುಣವಾಗಿಯೇ ಛೋಟಾ ಭೀಮನ ಆಕಾರದಲ್ಲಿ ಕೇಕನ್ನು ತಯಾರಿಸಲಾಗಿತ್ತು. ಛೋಟಾ ಭೀಮ ನಗುತ್ತಿದ್ದ. ವಿವೇಕ ಸಾಲದ ಹೊರೆಯಲ್ಲಿ ಒಳಗೊಳಗೆ ಅಳುತ್ತಿದ್ದ. ಸ್ವಾಗತದ್ವಾರದ ಬಳಿಯೇ ಕೋಕಾ-ಕೋಲಾ ಸರಬರಾಜಾಯಿತು. ವಿವೇಕನ ಅಣ್ಣಂದಿರ ಪತ್ನಿಯರು ಬೆರಗು ಹಾಗೂ ಅಸೂಯೆ ಬೆರೆಸಿಕೊಂಡು ಕೋಕಾ-ಕೋಲಾ ಕುಡಿದು ಸಮಾರಂಭದಲ್ಲೇನಾದರೂ ಕೊಂಕು ಹುಡುಕಬಹುದೇ ಎಂದು ಯೋಚಿಸುತ್ತಿದ್ದರು. ಪುಷ್ಪ ತಾನು ಮಗನನ್ನು ತಯಾರು ಮಾಡಿದ ರೀತಿಗೆ ಇವತ್ತು ಎಲ್ಲರೂ ಬೆಚ್ಚಿ ಬೀಳಲಿದ್ದಾರೆ ಎಂಬ ಖಾತ್ರಿಯಲ್ಲಿ ಖುಷಿಯಾಗಿದ್ದಳು. 
**********************************************************************************************************
ಕೊನೆಗೆ ಆ ಘಳಿಗೆ ಬಂತೇ ಬಂತು. ಪುಷ್ಪ ಮಗನನ್ನು ಹಿಡಿದುಕೊಂಡು ನಿಂತಳು. ವಿವೇಕ ಕ್ಯಾಂಡಲ್ ಹಚ್ಚಿದ. ನೆರೆದವರು ಕತ್ತು  ಉದ್ದ ಮಾಡಿ ಪುಷ್ಪಳ ಮಗ ಆರ್ಯನ್ ಕ್ಯಾಂಡಲ್ ಊದುವುದನ್ನು ಕಣ್ತುಂಬ ನೋಡಿ ಆನಂದಿಸಲು ಉತ್ಸುಕರಾಗಿದ್ದರು. ಛಾಯಾಗ್ರಾಹಕ ತಯಾರಾಗಿದ್ದ. ದುಬಾರಿ ಮೊಬೈಲ್ ಫೋನ್ ಗಳಿದ್ದವರು ಈ ಘಳಿಗೆಯನ್ನು ಶಾಶ್ವತವಾಗಿ ಸೆರೆ ಹಿಡಿದುಕೊಳ್ಳಲು ಮೊಬೈಲ್ ಫೋನ್ ಗಳನ್ನು ಆಯುಧಗಳಂತೆ ಎತ್ತಿ ಹಿಡಿದರು. 

ಇಷ್ಟೆಲ್ಲ ಭರ್ಜರಿ ಚಟುವಟಿಕೆಗಳ ಕೇಂದ್ರದಲ್ಲಿದ್ದ ಕೇಕಿನ ಹಿಂದಿದ್ದ ಆರ್ಯನ್ ನನ್ನು ಹಿಡಿದುಕೊಂಡಿದ್ದ ಪುಷ್ಪಳ ಪಕ್ಕ ವಿವೇಕನ ಅಣ್ಣಂದಿರಲ್ಲಿ ಒಬ್ಬನಾದ ಗೋಪಾಲ ತನ್ನ ಮೂರು ವರ್ಷದ ಮಗಳಾದ ಸೋನಂಳನ್ನು ಎತ್ತಿಕೊಂಡು ನಿಂತಿದ್ದ. ಇದೆಲ್ಲ ಭಾವೋದ್ವೇಗ ಉತ್ತುಂಗಕ್ಕೇರಿದೆ ಅನ್ನಿಸಿದಾಗ ಗೋಪಾಲ ಆರ್ಯನ್ ಗೆ, "ಊದು , ಊದು" ಎಂದು ಉತ್ತೇಜಿಸಿದ. ಆಗ ಅದು ನಡೆದು ಹೋಯಿತು - ಅಪ್ಪ ಹೇಳಿದ್ದು ತನಗೇ ಇರಬೇಕು ಎಂದುಕೊಂಡು ಗೋಪಾಲನ ಮಗಳು ಸೋನಂ ಪುಷ್ಪಳ ಮಗ ಆರ್ಯನ್ ಊದಬೇಕಿದ್ದ ಕ್ಯಾಂಡಲ್ ಅನ್ನು ಊದಿ ಬಿಟ್ಟಳು. ಕ್ಯಾಂಡಲ್ ಆರಿ ಹೋಗಿ ಸಣ್ಣ ಹೊಗೆ ಮೇಲೇರುತ್ತಿದ್ದಂತೆ ಪುಷ್ಪ ಸ್ಫೋಟಗೊಂಡು ಕಿರುಚಾಡಿ ಕೊನೆಗೆ ತಾನು ಮಗನನ್ನು ತಯಾರಿಸಿದ ರೀತಿಯನ್ನೆಲ್ಲ ನೆನೆಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು. ವಿವೇಕನ ಹಿರಿಯ ಅಣ್ಣ ಶ್ರೀನಿವಾಸ "Man proposes. God disposes.", ಎಂಬ ಭಾರವಾದ ತತ್ವಶಾಸ್ತ್ರದ ಚಿಂತನೆಯನ್ನು ಪುಷ್ಪಳಿಗೆ ಒಪ್ಪಿಸಿದರು. "ಬೇಕಿದ್ರೆ ಇನ್ನೊಂದು ಕ್ಯಾಂಡಲ್ ತರ್ಲಾ? ನಿನ್ನ ಮಗ ಊದ್ಲಿ.", ಎಂದೂ ಸೇರಿಸಿದರು. ಪುಷ್ಪ ಮತ್ತೂ ಅತ್ತಳು. ಛೋಟಾ ಭೀಮ ನಗುತ್ತಿದ್ದ. 
********************************************************************************************
(ಮುಗಿಯಿತು)

Jan 7, 2014

ಸಾವು-ಬದುಕಿನ ಆಟ

(ಭಾಗ ೧)
ಶರ್ಮಿಳಾಳ ಬಗ್ಗೆ ನೆನೆದಾಗ ನಯನಾಳಿಗೆ ಮೊದಲು ನೆನಪಾಗುವುದು ಅವಳ ದೈವ ಭಕ್ತಿ. ಅದರಲ್ಲೂ ಶಿರಡಿಯ ಸಾಯಿ ಬಾಬಾರ ಬಗ್ಗೆ ಇದ್ದ ಅವಳ ವಿಪರೀತ ಭಕ್ತಿ. ಅವಳು ತನ್ನ ಈ-ಮೇಲ್ ಅಕೌಂಟಿಗಾಗಲಿ, ಕಂಪ್ಯೂಟರ್ ಗಾಗಲಿ ಇಡುತ್ತಿದ್ದ ಪಾಸ್ವರ್ಡ್ ಗಳು ಕೂಡ "LoveYouSairam", "sairam123" ಎಂದಿತ್ಯಾದಿಯಾಗಿ ಅವಳ ಸಾಯಿ-ಭಕ್ತಿ ಯನ್ನು ಪ್ರತಿಬಿಂಬಿಸುವಂತಿದ್ದವು. ಪ್ರತಿ ಗಳಿಗೆಯೂ ಅವಳು ಸಾಯಿ ಬಾಬರೊಂದಿಗೆ ಸಂವಾದ ನಡೆಸುತ್ತಿದ್ದಳು. ಅಗತ್ಯಕ್ಕಿಂತ ಹೆಚ್ಚಾಗಿ ಬಾಬಾರನ್ನು ನಂಬುತ್ತಿದ್ದ ಅವಳು ಭಕ್ತಿಯಿಂದ ಬೇಡಿದರೆ ಕಷ್ಟಗಳೆಲ್ಲವೂ ದೂರವಾಗುವುದೆಂದು ದೃಢವಾಗಿ ನಂಬಿಕೊಂಡಿದ್ದಳು. ಬದುಕಿನಲ್ಲಿ ಅವಳಿಗಿದ್ದ ಕಷ್ಟಗಳೆಂದರೆ ಅವಳ ಕುಟುಂಬದ ಜವಾಬ್ದಾರಿ ಮತ್ತು ಈ ಜವಾಬ್ದಾರಿಗಳ ನಡುವೆಯೂ ಬೇಕೆನಿಸಿದ್ದ ಪ್ರೇಮ. ಮಹೇಶ ಎಂಬ ಹೆಸರಿನ ಅವಳ ಪ್ರಿಯತಮ ಅವಳ ಕಷ್ಟಗಳನ್ನು ಕರಗಿಸುವ ನಾಯಕನಾಗಿರದೆ, ಅವಳ ಕಷ್ಟಗಳನ್ನು ಹೆಚ್ಚಿಸುವ ಖಳನಾಯಕನಾಗಿ ಬಿಟ್ಟಿದ್ದ. ಹುಚ್ಚು ಹುಡುಗಿ ಶರ್ಮಿಳಾ ಮಹೇಶ ಸಿಗದಿದ್ದರೆ ಬಾಳುವುದಿಲ್ಲ ಎಂದು ಹಟ ತೊಟ್ಟಿದ್ದಳು. ಮಹೇಶ ಹುಚ್ಚು ಕುದುರೆಯಂತೆ ಶರ್ಮಿಳಾಳ ಹೊರತಾಗಿಯೂ ಎರಡು ಮೂರು ಹುಡುಗಿಯರೊಂದಿಗೆ ಚೆಲ್ಲಾಟ ನಡೆಸಿದ್ದ. ಶರ್ಮಿಳಾ-ಮಹೇಶರ ಮದುವೆ ಯಾವತ್ತೂ ನಡೆಯುವುದಿಲ್ಲವೆಂದು ತಿಳಿದಿದ್ದೂ ಕೂಡ ನಯನಾ ಶರ್ಮಿಳಾಳ ಹುಚ್ಚು ಪ್ರಯತ್ನಗಳಲ್ಲಿ ಭಾಗಿಯಾಗುತ್ತಿದ್ದಳು.

"ಪ್ರತಿದಿನ ವೈನ್ ಕುಡಿದ್ರೆ ಮುಖದಲ್ಲಿ glow ಬರುತ್ತೆ.", ಎಂದು ಒಮ್ಮೆ ಶರ್ಮಿಳಾಗೆ ಮಹೇಶನನ್ನು ತನ್ನ ಕಾಂತಿಯುತ ಮುಖದ ಸೆಳೆತವೊಂದರಿಂದಲೇ ಉಳಿಸಿಕೊಳ್ಳಬಹುದೆಂಬ ಅದ್ಭುತವಾದ ಉಪಾಯ ಹೊಳೆದು ಇವರಿಬ್ಬರೂ ಮಸಾಲೆ ಪುರಿ, ಗೋಬಿ ಮಂಚೂರಿಗಳಿಗೆ ಕಳೆಯುತ್ತಿದ್ದ ದುಡ್ಡನ್ನುಳಿಸಿ ಗೋಲ್ಕೊಂಡ ವೈನು ಕೊಂಡು ಕುಡಿಯಲಾರಂಭಿಸಿದರು. ವೈನು ಬಾಟಲಿ ಖಾಲಿಯಾಯಿತು. ಮಹೇಶನ ಪ್ರೇಯಸಿಯರ ಸಂಖ್ಯೆ ಹೆಚ್ಚಿತು. ಉಪಾಯ ಫಲಿಸಲಿಲ್ಲ.

*                                                            *                                                            *

ನಯನಾ ಶರ್ಮಿಳಾರು ಸಹೋದ್ಯೋಗಿಗಳು. ಇವರಿಬ್ಬರನ್ನೂ ಹತ್ತಿರ ತಂದಿದ್ದು ಇಬ್ಬರಿಗೂ ಬದುಕಿನಲ್ಲಿದ್ದ ಕಷ್ಟಗಳು. ಒಬ್ಬರ ಸಮಸ್ಯೆಗೆ ಇನ್ನೊಬ್ಬರಲ್ಲಿ ಉತ್ತರ ಹುಡುಕುತ್ತಿದ್ದರೋ, ಅಥವಾ ಇಬ್ಬರೂ ಸಮಾನ ದುಃಖಿಗಳೆಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರೋ ಎಂಬುದು ನಯನಾಳಿಗೆ ಸ್ಪಷ್ಟವಿಲ್ಲ. ಒಟ್ಟಿನಲ್ಲಿ ಗಟ್ಟಿಯಾದ ಸ್ನೇಹ ಬೆಳೆದಿತ್ತು, ಇಬ್ಬರ ಅರಿವಿಗೂ ಬರುವ ಮೊದಲೇ. ನಯನಾಳಿಗೆ ಪ್ರಪಂಚ ಜ್ಞಾನ ಬರುವ ಮೊದಲೇ ಅವಳ ತಂದೆಗೆ ತಲೆಯ ಬಲಭಾಗದಲ್ಲಿ ಶುರುವಾದ ನೋವು ಕೊನೆಗೆ ಮೆದುಳಿನ ತೊಂದರೆಯಲ್ಲಿ ಕೊನೆಗೊಂಡು, ಅವರು ಬದುಕುವ ಸಾಧ್ಯತೆಯೇ ಇಲ್ಲವೆಂಬ ಆಘಾತ ನಯನಾಳ ಮೇಲೆ ಎರಗಿತ್ತು. ನಯನಾಳ ತಾಯಿ ಮಂಜುಳಾ ಗಂಡನ ನೆರಳಿನಲ್ಲಿ ಬದುಕಿದವರು, ಅವರಿಗೆ ಗಂಡನ ಸಾವು ಖಚಿತವೆಂದು ಗೊತ್ತಾದ ಕ್ಷಣದಲ್ಲಿ ತನ್ನಿಬ್ಬರು ಮಕ್ಕಳಿಗೆ ವಿಷವಿಟ್ಟು ಸಾಯಿಸಿ, ತಾನೂ ಕೂಡ ಸಾಯುವುದೆಂದು ನಿರ್ಧರಿಸಿ ಬಿಟ್ಟರು. ನಯನಾ ಪಿ.ಯು.ಸಿ. ಎರಡನೆ ವರ್ಷದಲ್ಲಿದ್ದರೆ, ಅವಳ ತಮ್ಮ ನಿಖಿಲ ಒಂಬತ್ತನೇ ತರಗತಿಯಲ್ಲಿದ್ದ - ಇಬ್ಬರಿಗೂ ತಾಯಿಯ ನಿರ್ಧಾರವನ್ನು ಅಲ್ಲಗಳೆಯುವ ಧೈರ್ಯವಿರಲಿಲ್ಲ. ಅನ್ನಕ್ಕೆ ವಿಷ ಮಿಶ್ರ ಮಾಡಿ ತಯಾರಿಟ್ಟಾಗ, ನಯನಾ " ಅಮ್ಮ,ಕೊನೆಯ ಸಲ ಪಾರ್ಕಿಗೆ ಹೋಗಿ ಬರೋಣ." ಎಂದು ಒತ್ತಾಯ ಮಾಡಿದರೆ ಅಮ್ಮ ಒಪ್ಪಿಕೊಂಡರು.

ಪಾರ್ಕಿಗೆ ಹೋಗಿ ಬಂದು ವಿಷವುಂಡು ಸಾಯುವುದೆಂದು ನಿಶ್ಚಯ ಮಾಡಿಕೊಂಡಿದ್ದ ಮೂವರು ಪಾರ್ಕಿನಲ್ಲಿ ಕಲ್ಲು ಬೆಂಚೊಂದರಲ್ಲಿ ಮಾತಾಡದೆ ಕುಳಿತಿದ್ದರು. ಮಾತನಾಡಿದರೆ ನಿರ್ಧಾರ ಸಡಿಲವಾಗಿಬಿಡಬಹುದೇನೋ ಎಂಬಂತೆ ಕುಳಿತಿದ್ದರು ತಾಯಿ ಮಂಜುಳಾ. ಬದುಕು ಅವರ ಪಾಲಿಗೆ ಮುಗಿದಂತಿತ್ತು. ನಯನಾಳಿಗೆ ಬದುಕು ಮುಗಿಸುವ ಉದ್ದೇಶವಿರಲಿಲ್ಲ. ಎಲ್ಲಿಂದಾದರೂ ಯಾವುದಾದರೊಂದು ಸಹಾಯ  ಬರಬಾರದೆ, ಬದುಕು ಮುಗಿಸುವ ತಾಯಿಯ ನಿರ್ಧಾರ ಬದಲಾಗಬರದೆ ಎಂದು ಆ ಪಾರ್ಕಿನಲ್ಲಿ ಕುಳಿತು ಮನದಲ್ಲೇ ಮೌನವಾಗಿ ಪ್ರಾರ್ಥಿಸುತ್ತಿದಳು.

(ಭಾಗ ೨)

ಈ ಮೂವರು ಹೀಗೆ ಕುಳಿತಿರಬೇಕಾದರೆ, ನಯನಾಳ ಸಹಪಾಠಿ ಗಾಯತ್ರಿ ಅಲ್ಲಿಗೆ ಬಂದಳು. ಗಾಯತ್ರಿ ಬಹಳ ದುಃಖದಲ್ಲಿದ್ದಂತಿದ್ದಳು. ನಯನಾ ಸ್ವತಃ ತಾನೇ ದುಃಖದಲ್ಲಿದ್ದರೂ ಗಾಯತ್ರಿಯನ್ನು ಒತ್ತಾಯ ಮಾಡಿ ವಿಚಾರಿಸಿದಾಗ ಅವಳು ಬಿಕ್ಕಿ ಅಳತೊಡಗಿದಳು. ಕೊನೆಗೆ ನಯನಾ, ತಾಯಿ ಮಂಜುಳಾರಿಬ್ಬರೂ ಅವಳನ್ನು ಸಮಾಧಾನಪಡಿಸಿ ನಿಧಾನಕ್ಕೆ ಕೇಳಿದಾಗ ತನ್ನ ಕಷ್ಟ ಹೇಳಿಕೊಂಡಳು. "ನನ್ನ ತಮ್ಮನಿಗೆ ಹುಟ್ಟಿನಿಂದಲೇ ಬುದ್ಧಿಮಾಂದ್ಯ. ಯಾವ ಮದ್ದೂ ಇಲ್ಲ ಅದಕ್ಕೆ. ಈಗೀಗ ಅವನು ವಿಪರೀತ ಕಿರುಚಾಡ್ತಾನೆ. ಇಡೀ ದಿನ ಅವನನ್ನ control ಮಾಡ್ಲಿಕ್ಕೆ ಒಬ್ರು ಜೊತೆಗೇ ಇರ್ಬೇಕು. ಮನೆಯಲ್ಲಿ ಅವ್ನ ಕಿರುಚಾಟದ ಮಧ್ಯ ನಂಗೆ ಓದ್ಕೊಳ್ಳೋಕೂ ಅಗೊಲ್ಲ."

ಎಲ್ಲವನ್ನೂ ಕೇಳಿಸಿಕೊಂಡ ಮಂಜುಳಾ, "ಇಷ್ಟು ಚಿಕ್ಕ ವಯಸಿನಲ್ಲಿ ಈ ಮಗುವಿಗೆ ಇಂಥ ಕಷ್ಟ ಕೊಟ್ಟು ಪಾರ್ಕಿನಲ್ಲಿ ಬಂದು ಅಳುವಂತೆ ಮಾಡುವ ದೇವರಿಗೆ ಕರುಣೆಯೇ ಇಲ್ಲವೇ?!", ಎಂದು ಮರುಗಿದರು. ಗಾಯತ್ರಿಗೆ ಸಮಾಧಾನ ಮಾಡಿದರು - "ಎಲ್ಲಕ್ಕಿಂತ ದೊಡ್ಡದು ಬದುಕು. ಅಳಬೇಡ, ಧೈರ್ಯವಾಗಿರು."
ತಾಯಿ ಹೀಗೆ ಹೇಳಿದ್ದು ನಯನಾಳಿಗೆ ಆಶ್ಚರ್ಯವಾಯಿತು! ಇವಳ ಬದುಕು ಮಾತ್ರ ದೊಡ್ಡದೇ? ನಮ್ಮ ಬದುಕು ಬದುಕಲ್ಲವೇ? - ಎಂದುಕೊಂಡಳು ಗಾಯತ್ರಿಯನ್ನು ನೋಡುತ್ತಾ. ಸ್ವಲ್ಪ ಹೊತ್ತಿನಲ್ಲಿ ಗಾಯತ್ರಿ ತನ್ನ ಮನೆಗೆ ನಡೆದಳು.

ಗಾಯತ್ರಿ ಅತ್ತ ಹೋಗುತ್ತಿದ್ದಂತೆ, ಸಾವಿನಿಂದ ಬಚಾವಾಗಲು ತನಗಿರುವ ಕೊನೆಯ ದಾರಿ ಗಾಯತ್ರಿಯ ಕಥೆ ಎಂದು ನಯನಾಳಿಗೆ ಅನ್ನಿಸಿತು. ಹೇಗಾದರೂ ಮಾಡಿ ಈ ಕಥೆಯನ್ನು ತಾಯಿಯ ಸಾವಿನ ನಿರ್ಧಾರವನ್ನು ಬದಲಾಯಿಸಲು ಉಪಯೋಗಿಸಬೇಕೆಂದುಕೊಂಡು ಹೇಳಿಯೇಬಿಟ್ಟಳು - "ಅಮ್ಮಾ, ನೋಡು. ಎಲ್ರಿಗೂ ಕಷ್ಟ ಇದೆ. ಎರಡು ವರ್ಷದಿಂದ ಗಾಯತ್ರಿನ ನೋಡ್ತಾ ಇದ್ದೀನಿ, ಆದ್ರೆ ಅವಳಿಗೆ ಇಷ್ಟು ಕಷ್ಟ ಇದೆ ಅಂತ ಗೊತ್ತಿರ್ಲಿಲ್ಲ. ಅಂದ್ರೆ ಕಷ್ಟ ಇದ್ರೂ ಬದುಕಬಹುದು ಅಂತ ಆಲ್ವಾ ಅರ್ಥ? ಒಬ್ಬ ಡಾಕ್ಟರು ಅಪ್ಪ ಉಳಿಯೊಲ್ಲ ಅಂತ ಹೇಳಿದ್ರೆ ಏನಾಯ್ತು? ಇನ್ನೊಬ್ರಿಗೆ ತೋರ್ಸೋಣ. ಆದ್ರೆ ಸಾಯೋದು ಬೇಡ. ನಂಗೆ ಬದುಕ್ಬೇಕು.", ಎಂದು ಒತ್ತಾಯ ಮಾಡುತ್ತಾ ಜೋರಾಗಿ ಅಳತೊಡಗಿದಳು. ವಯಸಿಗೆ ಮೀರಿದ ಮಾತುಗಳನ್ನಾಡಿದ ಮಗಳನ್ನೇ ದಿಟ್ಟಿಸುತ್ತ ಕುಳಿತರು ಮಂಜುಳಾ. ಇದೇ ಹೊತ್ತಿಗೆ ತಮ್ಮ ನಿಖಿಲ ಕೂಡ, " ಅಮ್ಮ,ಸಾಯೋದು ಬೇಡ ಪ್ಲೀಸ್.", ಎಂದು ಅಳತೊಡಗಿದ!

*                                                                 *                                                                 *

ಅಂದು ತಾವು ಬದುಕಿ ಉಳಿದಿದ್ದಕ್ಕೆ ಕಾರಣ ಗಾಯತ್ರಿಯ ಕಥೆ ಎಂದು ನಯನಾ ದೃಢವಾಗಿ ನಂಬಿದ್ದಾಳೆ. ನಯನಾಳ ಮಾತಿನಿಂದ ಮನಸ್ಸು ಬದಲಾಯಿಸಿಕೊಂಡ ಮಂಜುಳಾ ಮನೆಗೆ ಬಂದವರೇ ವಿಷ ಬೆರೆಸಿದ್ದ ಅನ್ನವನ್ನು ಚೆಲ್ಲಿ ಹಣೆಯಲ್ಲಿದ್ದಂತೆ ನಡೆಯಲಿ ಎಂದು ಬದುಕನ್ನೆದುರಿಸಲು ತಯಾರಾದರು. ಮರುದಿನ ಆಸ್ಪತ್ರೆಗೆ ಹೋದರೆ ವೈದ್ಯರು ಐದು ದಿನ ಬಿಟ್ಟು ಕೊನೆಯದೊಂದು ಪರೀಕ್ಷೆ ಮಾಡುವುದಾಗಿಯೂ, ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದರೆ ಜೀವ ಉಳಿಯುವುದಾಗಿಯೂ ಹೇಳಿದರು. ಕೊನೆಗೆ ಅದ್ಭುತವೆಂಬಂತೆ ನಯನಾಳ ಅಪ್ಪ ಬದುಕುಳಿದು ನಿಧಾನವಾಗಿ ಚೇತರಿಸಿಕೊಂಡರು. ಆದರೆ ಮನೆಯವರಿಗೆ ನಿಮ್ಹಾನ್ಸ್ ನಲ್ಲಿ ಕಳೆದ ಆ ದಿನಗಳನ್ನು ಎಂದೂ ಮರೆಯಲಾಗಲಿಲ್ಲ. ಬದುಕು ಎಷ್ಟು ಸೂಕ್ಷ್ಮ ಮತ್ತು ಸುಲಲಿತವಾಗಿ ನಡೆಯುತ್ತಿರುವ ಎಲ್ಲವೂ ಹಳಿ ತಪ್ಪುವುದು ಎಷ್ಟು ಸುಲಭ ಎಂಬ ಸತ್ಯವನ್ನು ಸದಾ ನೆನಪಿಸುತ್ತಿರುತ್ತದೆ.

ಅಪ್ಪ ದೇವರಾಜ್ ಚೇತರಿಸಿಕೊಂಡರೂ ಕೂಡ ಹಿಂದಿನಂತೆ ದುಡಿಯುವ ಸಾಮರ್ಥ್ಯ ಉಳಿಯಲಿಲ್ಲ. ಸ್ಕಾಲರ್ ಶಿಪ್ ನಲ್ಲಿ ಇಂಜಿನಿಯರಿಂಗ್ ಮುಗಿಸಿದ ನಯನಾ ದುಡಿದು ಸಂಸಾರ ನೋಡಿಕೊಳ್ಳತೊಡಗಿದಳು. ತಮ್ಮ ನಿಖಿಲನನ್ನೂ ಇಂಜಿನಿಯರಿಂಗ್ ಓದಿಸುತ್ತಿದ್ದಳು. ನಯನಾಳಿಗೆ ವಿದ್ಯೆ, ಉತ್ತಮ ಅಂಕಗಳಿದ್ದರೂ ಕೂಡ ಭಾರಿ ಸಂಬಳದ ಕೆಲಸ ಸಿಗದೇ ಮನೆಯ ಖರ್ಚನ್ನೆಲ್ಲ ನೋಡಿಒಳ್ಳುವಷ್ಟರಲ್ಲಿ ಸಾಕುಸಾಕಾಗುತ್ತಿತ್ತು. ನಯನಾಳ ಅಪ್ಪ ಆರೋಗ್ಯ ಹದಗೆಟ್ಟ ನಂತರ ಮಗುವಿನಂತಾಗಿದ್ದರು - ಚಿಕ್ಕ ಪುಟ್ಟ  ವಿಷಯಗಳಿಗೆ,ಕೆಲವೊಮ್ಮೆ ಕಾರಣವೇ ಇಲ್ಲದೆ ಅಳುತ್ತಿದ್ದರು. ಟಿ.ವಿ.ಯಲ್ಲಿ ಯಾವುದಾದರೂ ಭಾವುಕ ಸನ್ನಿವೇಶ ಬಂದರೆ ಆ ಪಾತ್ರಗಳೊಂದಿಗೆ ತಾವೂ ಅಳುತ್ತಿದ್ದರು. ಕೆಲವೇ ತಿಂಗಳ ಹಿಂದೆ  ಗತ್ತಿನಿಂದ, ಕೆಲವೊಮ್ಮೆ ದರ್ಪವೇನೋ ಅನಿಸುವಂತೆ ನಡೆದುಕೊಳ್ಳುತ್ತಿದ್ದ ದೇವರಾಜ್ ಈ ರೀತಿ ಮೇಣದ ಮುದ್ದೆಯಂತೆ ಬದಲಾದದ್ದು ಮನೆಯವರಿಗೆ ದುಃಖ ತರಿಸಿತ್ತು, ಸ್ಥೈರ್ಯ ಕುಸಿದುಬಿಟ್ಟಿತ್ತು.

ನಯನಾ ತಾನು ಹಲ್ಲು ಕಚ್ಚಿಕೊಂಡು, ದುಃಖ ಸಹಿಸಿಕೊಂಡು ಬದುಕಲೇಬೇಕೇಂಬ ಜಿದ್ದಿನಿಂದ ಬೇರೆ ಕೆಲಸ ಹುಡುಕುತ್ತಿದ್ದಳು. ಏನಿಲ್ಲದಿದ್ದರೂ, ಮನೆಯ ಆರ್ಥಿಕ ಪರಿಸ್ಥಿತಿಯನ್ನಾದರೂ ಸುಧಾರಿಸಬೇಕು ಎಂದು ಚಡಪಡಿಸುತ್ತಿದ್ದಳು. ಕೊನೆಗೊಮ್ಮೆ ಬೇರೆ ದಾರಿ ಕಾಣದೆ ಪಾರ್ಟ್ ಟೈಮ್ ಕೆಲಸವೊಂದಕ್ಕೆ ಸೇರಿಕೊಂಡಳು. ಮುಂಜಾನೆ ಎರಡು-ಮೂರು ಗಂಟೆ ಕಿಂಡರ್ ಗಾರ್ಟನ್ ಒಂದರಲ್ಲಿ ಪಾಠ ಮಾಡಿ ನಂತರ ತನ್ನ ಎಂದಿನ ಕೆಲಸಕ್ಕೆ ಹೋಗತೊಡಗಿದಳು. ಇದನ್ನೇ ಮಾಡಮಾಡುತ್ತ ಮಕ್ಕಳ ನಡುವೆ ತನ್ನ ದುಃಖ ಮರೆಯತೊಡಗಿದ್ದಳು. ಆದರೆ ಶಾಲೆಯ ಇತರ ಶಿಕ್ಷಕಿಯರು ತಾವು ಟೀಚರ್ಸ್ ಟ್ರೈನಿಂಗ್ ಮುಗಿಸಿ ಪಡೆಯುತ್ತಿರುವ ಅದೇ ಸಂಬಳವನ್ನು ನಯನಾ ಯಾವುದೇ ತರಬೇತಿಯಾಗಲಿ, ಪೂರ್ವ ಅನುಭವವಾಗಲಿ ಇಲ್ಲದೆ ಪಡೆಯುತ್ತಿದ್ದಾಳೆಂದು ಇವಳನ್ನು ಶತ್ರುವಿನಂತೆ ಕಾಣತೊಡಗಿದರು. ಇದರಿಂದಾಗಿ ನಯನಾ ಕೆಲಸ ಬಿಡಬೇಕಾಯಿತು. ಹೆಚ್ಚು ಸಂಬಳದ ಬೇರೆ ಕೆಲಸದ ಹುಡುಕಾಟ ಮುಂದುವರೆಯಿತು.

*                                                    *                                                                     *

ನಯನಾ ಕೆಲಸ ಹುಡುಕುವಲ್ಲಿ ತನ್ನ ಶಕ್ತಿ ವ್ಯಯಿಸುತ್ತಿದ್ದರೆ, ಶರ್ಮಿಳಾ ಮಹೇಶನನ್ನು ಒಲಿಸಿಕೊಳ್ಳಲು ಶತಪ್ರಯತ್ನದಲ್ಲಿ ತೊಡಗಿದ್ದಳು. ಶರ್ಮಿಳಾ ಮಹೇಶನ ಹುಚ್ಚನ್ನು ಬಿಟ್ಟರೆ ಉದ್ಧಾರವಾಗುತ್ತಾಳೆ ಎಂದು ನಯನಾಳಿಗೆ ಎಷ್ಟೋ ಬಾರಿ ಅನಿಸಿದ್ದಿದೆ. ಆದರೆ ಶರ್ಮಿಳಾಗೆ ಅದನ್ನು ಅರ್ಥ ಮಾಡಿಸುವುದು ಸಾಧ್ಯವಾಗಿರಲಿಲ್ಲ. ಶರ್ಮಿಳಾ ಮಹೇಶರು ಭೇಟಿಯಾಗುವಾಗ ಕೆಲವೊಮ್ಮೆ ನಯನಾಳೂ ಜೊತೆಗಿರುತ್ತಿದ್ದಳು. ಅವರಿಬ್ಬರ ಮಾತುಕತೆಯಲ್ಲಿ ಮಹೇಶನ ಕಿರುಚಾಟ ಮತ್ತು ಶರ್ಮಿಳಾಳ ಮುಸುಮುಸು ಅಳುಗಳ ಪಾಲೇ ಹೆಚ್ಚಿತ್ತು. ಹೀಗೆ ಸಂವಾದವೇ ಇಲ್ಲದೆ ಸಂಬಂಧ ಬೆಳೆಯುವುದಾದರೂ ಹೇಗೆ ಎಂದು ನಯನಾಳಿಗೆ ಅನಿಸಿದ್ದರೂ ಶರ್ಮಿಳಾಳಿಗೆ ಏನೂ ಹೇಳಿರಲಿಲ್ಲ.

ಶರ್ಮಿಳಾಳನ್ನೊಮ್ಮೆ ನಯನಾ ಮನೆಗೆ ಕರೆದಿದ್ದಳು. ಶರ್ಮಿಳಾಳಿಗೆ ತನ್ನ ತಂದೆಯ ಅನಾರೋಗ್ಯದ ವಿಷಯವನ್ನೆಲ್ಲ ಹೇಳಿದ್ದರೂ ಕೂಡ ಅವಳನ್ನು ತಂದೆಯ ಬಳಿ ಕೂರಿಸಿ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಶರ್ಮಿಳಾ ತನ್ನ ಮತ್ತು ಮಹೇಶನ ಕಥೆಯನ್ನು ಹೇಳಿ - ಇಬ್ಬರೂ ಜೋರಾಗಿ ಅಳತೊಡಗಿದ್ದರು. ಇವರಿಬ್ಬರನ್ನು ಸಮಾಧಾನ ಮಾಡುವಷ್ಟರಲ್ಲಿ ನಯನಾಳಿಗೆ ಸಾಕು ಸಾಕಾಯಿತು! ಇದನ್ನೆಲ್ಲಾ ನೋಡಿದ ತಾಯಿ ಮಂಜುಳಾ ಮುಂದೆ ನೆನಪಾದಾಗಲೆಲ್ಲ "ಪಾಪ, ಪೆದ್ದು ಹುಡುಗಿ!", ಎನ್ನುತ್ತಾರೆ.

ಶರ್ಮಿಳಾ ಏನೇನೋ ಮೋಡಿ ಮಾಡಿ ಮಹೇಶನನ್ನು ಸೆಳೆದುಕೊಂಡು ತನ್ನ ಬಳಿ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಕೂಡ, ಮಹೇಶ ಇವಳ ಯಾವ ತಂತ್ರಕ್ಕೂ ಬಗ್ಗಲಿಲ್ಲ. ಶರ್ಮಿಳಾ ನಯನಾಳಲ್ಲಿ ಹೇಳದಿದ್ದರೂ ಕೂಡ, ಮಹೇಶ ಶರ್ಮಿಳಾಳನ್ನು ದೈಹಿಕವಾಗಿ ಉಪಯೋಗಿಸುತ್ತಿದ್ದಾನೆ ಎಂಬ ಅನುಮಾನ ನಯನಾಳಿಗೆ ಬಂದಿತ್ತು. ಆದರೆ ಮದುವೆಯ ಮಾತೆತ್ತಿದಾಗ ಮಹೇಶ ಉರಿದು ಬೀಳುತ್ತಿದ್ದ. ಮಹೇಶ ತನಗೆ ಸಿಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶರ್ಮಿಳಾ ಹೇಳತೊಡಗಿದ್ದಳು. ಈ ಹೆಣ್ಣು ಹುಚ್ಚನ ಹುಚ್ಚು ಹಿಡಿಸಿಕೊಂಡು ಅವಳು ಜೀವ ಕಳೆದುಕೊಳ್ಳುವುದಾದರೂ ಏಕೆ ಎಂದು ನಯನಾ ಶರ್ಮಿಳಾಳಿಗೆ ಇನ್ನಿಲ್ಲದಂತೆ ಬುದ್ಧಿ ಹೇಳಿದ್ದಳು.

ಇದು ಹೀಗೆಯೆ ಮುಂದುವರಿದು ಕೊನೆಗೊಮ್ಮೆ ಶರ್ಮಿಳಾಳಿಗೂ ಖಡಾಖಂಡಿತವಾಗಿ ಏನಾದರೊಂದು ಆಗಲೇಬೇಕು ಎಂದೆನಿಸಿತು. ಮಹೇಶ ತನ್ನನ್ನು ಮಾಡುವೆ ಆಗುತ್ತಾನೋ ಇಲ್ಲವೋ ಎಂದು ತೀರ್ಮಾನ ಆಗಲೇಬೇಕೆಂದು ನಯನಾಳನ್ನು ಜೊತೆಗಿಟ್ಟುಕೊಂಡು ಮಹೇಶನನ್ನು ಮಾತುಕತೆಗೆ ಕರೆದಳು. ಶರ್ಮಿಳಾ ಗಂಭೀರವಾಗಿ ಮಾತಾಡಿದರೆ ಮಹೇಶ ಉಡಾಫೆ ಮಾಡಿದ. ಕೊನೆಗೆ ನಯನಾ ಮಹೇಶನಿಗೆ ನಾಟುವಂತೆ ಕೇಳಿದಳು - "ಒಂದೇ ಮಾತಿನಲ್ಲಿ ಹೇಳು ಮಹೇಶ್. ನೀನು ಶರ್ಮಿಳಾನ ಮದುವೆ ಆಗ್ತೀಯಾ ಇಲ್ವಾ?"

ಮಹೇಶ ನಯನಾಳೀಂದ ಇಂಥ ನೇರ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. "ಬ್ಬೆಬ್ಬೆಬ್ಬೆ" ಎಂದ. ದೃಷ್ಟಿ ತಪ್ಪಿಸಿದ. ಕೊನೆಗೆ ತನ್ನ ಪಾಡು ತನಗೇ ಸಹಿಸಿಕೊಳ್ಳಲಾಗದೆ ಇಲ್ಲದ ಸಿಟ್ಟು ಬರಿಸಿಕೊಂಡು, "ನೀವೇ ಹೇಳಿ ಸಿಸ್ಟರ್. ಇವಳನ್ನ ಯಾರಾದ್ರೂ ಮದುವೆ ಆಗ್ತಾರಾ?", ಎಂದ.
ಕೂಡಲೆ ಶರ್ಮಿಳಾಳತ್ತ ತಿರುಗಿದ ನಯನಾ, "ಈ ನಾಯಿನ ಮರ್ತು ಬಿಡು. ಶರ್ಮಿಳಾ, ಇನ್ನು ಒಂದು ನಿಮಿಷ ಕೂಡ ಇಲ್ಲಿರೋದು ಬೇಡ. ಗುಡ್ ಬೈ ಹೇಳು ಇವ್ನಿಗೆ.", ಎಂದಳು. ನಯನಾಳ ದನಿಯಲ್ಲಿದ್ದ ಗಾಂಭೀರ್ಯಕ್ಕೆ ಹೆದರಿಕೊಂಡ ಶರ್ಮಿಳಾ ನಯನಾಳ ಜೊತೆ ನಡೆದು ಬಿಟ್ಟಳು.

ಮಹೇಶನಿಗೆ ಪಿಚ್ಚೆನಿಸಿತು. "ಸಿಸ್ಟರ್, ನಿಲ್ಲಿ. ಒಂದ್ನಿಮಿಷ", ಎಂದು ಬೇಡಿಕೊಳ್ಳುತ್ತಿದ್ದರೂ ಕೇಳಿಸಿಕೊಳ್ಳದೆ ಇಬ್ಬರೂ ನಡೆದು ಬಂದು ಬಿಟ್ಟರು.

*                                                       *                                                         *

ಇದು ನಡೆದ ಒಂದು ವಾರದೊಳಗೆ ನಯನಾಳ ಬದುಕಿನಲ್ಲಿ ಮತ್ತೊಂದು ಆಘಾತ ಅವಳ ತಂದೆ ದೇವರಾಜರ ಹೃದಯಾಘಾತದ ರೂಪದಲ್ಲಿ ಎರಗಿತು. ಮಧ್ಯರಾತ್ರಿ ನೋವು ಕಾಣಿಸಿಕೊಂಡು, ಮಕ್ಕಳಿಬ್ಬರೂ ಮಲಗಿರುವಾಗ, ಹೆದರಿಕೊಂಡಿದ್ದ ಪತ್ನಿ ಮಂಜುಳಾರನ್ನು ಕರೆದುಕೊಂಡು ಆಟೊ ರಿಕ್ಷಾ ಹಿಡಿದು ಆಸ್ಪತ್ರೆಯ ಮುಂಬಾಗಿಲು ದಾಟುವಷ್ಟರಲ್ಲಿ ದೇವರಾಜ್ ಕುಸಿದು ಬಿದ್ದರು. ಇಷ್ಟೆಲ್ಲವೂ ಮಧ್ಯರಾತ್ರಿ ನಡೆದು ಹೋದರೂ ಕೂಡ, ನಯನಾ ನಿಖಿಲರಿಗೆ ವಿಷಯ ತಿಳಿದದ್ದು ಮುಂಜಾನೆಯೇ! ಮತ್ತೊಂದು ಗಂಡಾಂತರದಿಂದ ತಪ್ಪಿಸಿಕೊಂಡು ಬದುಕಿ ಉಳಿದ ದೇವರಾಜರಿಗೆ ಸಂಜೆಯ ಒಳಗೆ angioplasty ಮಾಡಿಸಬೇಕೆಂದು ವೈದ್ಯರು ಹೇಳುತ್ತಿದ್ದರೆ ನಯನಾಳ ತಲೆಯಲ್ಲಿ ದುಡ್ಡು ಹೊಂದಿಸುವುದು ಹೇಗೆ ಎಂಬ ಪ್ರಶ್ನೆಯೊಂದೇ ಓಡುತ್ತಿತ್ತು. ವೈದ್ಯರು ಹೇಳಿದ್ದೊಂದೂ ಅರ್ಥವಾಗಲಿಲ್ಲ. ಮನಸ್ಸು-ಬುದ್ಧಿ ಎರಡಕ್ಕೂ ಮಂಕು ಬಡಿದಿತ್ತು.

ಅಂದು ಸಂಜೆ ದೇವರಾಜರ ಶಸ್ತ್ರಚಿಕಿತ್ಸೆ ಅವರ ಸ್ನೇಹಿತರೊಬ್ಬರು ಸಾಲವಾಗಿ ಕೊಟ್ಟ ಮೊತ್ತದಿಂದ ನಡೆಯಿತು. ಆದರೆ ನಯನಾಳಿಗೆ ಗುರಿಯೇ ಇರದ, ಕೊನೆಯೇನೆಂಬುದೇ ತಿಳಿಯದ ಹುಚ್ಚು ಓಟದಲ್ಲಿ ಓಡಿ ಸುಸ್ತಾಗಿತ್ತು. ಅಪ್ಪ ಐ.ಸಿ.ಯು. ನಲ್ಲಿ ಮಲಗಿದ್ದರು. ತಾಯಿ ಮಂಜುಳಾ ಅಳುವೊಂದರ ಹೊರತು ಬೇರೆ ಯಾವ ರೀತಿಯ ಪ್ರತಿಕ್ರಿಯೆಯನ್ನೂ ಕೊಡುತ್ತಿರಲಿಲ್ಲ. ತಮ್ಮನ ತಲೆಯಲ್ಲಿ ಏನು ನಡೆಯುತ್ತಿದೆ ಎಂದೇ ಅವಳಿಗೆ ತಿಳಿಯುತ್ತಿರಲಿಲ್ಲ - ಅವನು ತನ್ನ ಸ್ನೇಹಿತರ ಜೊತೆ ಮಾತಾಡದೆ ಕುಳಿತಿದ್ದ. ಇದಕ್ಕೂ ತನಗೂ ಸಂಬಂಧವಿಲ್ಲವೆಂದುಕೊಂಡಿದ್ದಾನೇ ಇವನು? - ಅರ್ಥವಾಗಲಿಲ್ಲ. ಅಂದು ಸಂಜೆ ಬಿಕೋ ಎನ್ನುತ್ತಿದ್ದ ಆಸ್ಪತ್ರೆಯ ಕಾರಿಡಾರಿನಲ್ಲಿ ಒಮ್ಮೆಗೆ ಅವಳಿಗೆ ಅನಾಥಳಾದಂತೆ ಭಾಸವಾಯಿತು. ಹೆಚ್ಚು ಸಂಬಳದ ಕೆಲಸದ ಹಿಂದೆ ತಾನು ಓಡಿದ್ದು ವ್ಯರ್ಥವಾದಂತೆ ಅನ್ನಿಸಿತು. ತಂದೆಯ ಆರೋಗ್ಯ ಇನ್ನೂ ಕೆಡುತ್ತದಷ್ಟೆ ಹೊರತು ಅದು ಸರಿ ಹೋಗಿ ಮೊದಲಿನ ಅಪ್ಪನನ್ನು ಮತ್ತೆ ನೋಡಲು ಸಾಧ್ಯವಿಲ್ಲ. ಅಮ್ಮ ಮೊದಲಿನಂತೆ ನಗುನಗುತ್ತ ಉತ್ಸಾಹದಿಂದಿರುವುದು ಸಾಧ್ಯವಿಲ್ಲ. ತನ್ನ ಮೇಲಿರುವ ಸಾಲದ ಹೊರೆಯನ್ನು ತನ್ನ ಸಂಬಳದಲ್ಲಿ ತೀರಿಸುವುದೂ ಸಾಧ್ಯವಿಲ್ಲ. 'ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ' ಎಂದು ಹೇಳುವುದು ಇದನ್ನೇ ಏನು?! ನಿಖಿಲ್  ತನ್ನ ಸ್ನೇಹಿತರ ಜೊತೆ ಕೂರುವ ಬದಲು ನನ್ನ ಬಳಿ ಬಂದು ಒಳ್ಳೆಯದೋ ಕೆಟ್ಟದ್ದೋ, ಉಪಯೋಗವಾಗುವಂತದ್ದಾಗಲೀ ವ್ಯರ್ಥವೆನಿಸುವಂಥದ್ದಾಗಲೀ ಒಂದೆರಡು ಮಾತಾಡಬಾರದೇ! ಅವನೇಕೆ ಬೇರೆಯದೇ ಪ್ರಪಂಚದ ಭಾಗವಾಗಿರುವವನಂತೆ ಒಬ್ಬೊಬ್ಬನೇ ಓಡಾಡುತ್ತಾನೆ! - ನಯನಾ ಆಸ್ಪತ್ರೆಯ ಬಿಕೋ ಎನ್ನುತ್ತಿದ್ದ ಕಾರಿಡಾರಿನ ಮೂಲೆಯೊಂದರಲ್ಲಿ ಸದ್ದಿಲ್ಲದೇ ಬಿಕ್ಕಿ ಬಿಕ್ಕಿ ಅತ್ತಳು.

*                                                 *                                               *

"ಸುಮ್ಮನೆ ಒದ್ದಾಡ್ತಾ ಇದ್ದೀನಿ ಅಷ್ಟೆ ಕಣೆ. ಇದು ಯಾವ್ದನ್ನೂ ಸರಿ ಮಾಡೋದು ಸಾಧ್ಯಾನೇ ಇಲ್ಲ!" - ನಯನಾ ಹೇಳಿದರೆ ಪ್ರತಿಕ್ರಿಯಿಸುವುದು ಹೇಗೆಂದು ತಿಳಿಯದೆ ಕುಳಿತಿದ್ದಳು. ಶರ್ಮಿಳಾ ಮಹೇಶನನ್ನು ಉಳಿಸಿಕೊಳ್ಳಲು ವರ್ಷಗಳ ಕಾಲ ವ್ಯರ್ಥ ಪ್ರಯತ್ನ ನಡೆಸಿದ್ದಳು. ಮದುವೆಯಾಗುವುದಾದರೆ ಅವನನ್ನೇ ಎಂದು ಎಂದೋ ನಿಶ್ಚಯಿಸಿಕೊಂಡಿದ್ದ ಅವಳ ಮುಂದೆ ಈಗ ಯಾವುದೇ ದಾರಿಗಳಿರಲಿಲ್ಲ.
ನಯನಾ ಸ್ವಗತವೆಂಬಂತೆ ಮಾತು ಮುಂದುವರೆಸಿದ್ದಳು - "ಅಪ್ಪ ಮತ್ತೆ ಮೊದಲಿನ ಹಾಗೆ ಅಗೊಲ್ಲ. ಅಮ್ಮನ ಅಳು ನಿಲ್ಲೊಲ್ಲ. ನಿಖಿಲನ ತಲೆಯಲ್ಲಿ ಅದೇನು ಓಡ್ತಿದ್ಯೋ, ಗೊತ್ತಿಲ್ಲ! ಏನಿದೆ ನಂಗೆ ಬದುಕಿನಲ್ಲಿ!"
"ನಯನಾ, ನಾವಿಬ್ರೂ ಆತ್ಮಹತ್ಯೆ ಮಾಡ್ಕೊಂಡು ಬಿಡೋಣ." - ಶರ್ಮಿಳ ಮೆತ್ತಗೆ ಹೇಳಿದಳು. "ಮಹೇಶ ನಂಗೆ ಸಿಗೊಲ್ಲ. ಅವನಿಲ್ದೆ ನಾನು ಬದುಕೊಲ್ಲ."
ನಯನಾಳಿಗೆ ಸಿಟ್ಟು ಬಂತು - "ಆ ಹುಚ್ಚು ನಾಯಿಗೋಸ್ಕರ ನೀನ್ಯಾಕೆ ಸಾಯಬೇಕು!", ಎಂದು ಶರ್ಮಿಳಾಳನ್ನು ಗದರಿದಳು.
"ನಾನು ಹೇಗೆ ಹೇಳ್ಲಿ ನಯನಾ? ಬದುಕಿದ್ರೆ ಅವ್ನ ಜೊತೆ, ಮದ್ವೆ ಆದ್ರೆ ಅವ್ನನ್ನೇ. ನಂಗೆ ಬೇರೆ ದಾರಿ ಇಲ್ಲ.", ಎಂದು ಅಳತೊಡಗಿದಳು. ಹಿಂದೆ ಆಗಿದ್ದರೆ ಶರ್ಮಿಳಾಳನ್ನು   ಗದರಿ ಸಮಾಧಾನ ಮಾಡುತ್ತಿದ್ದ ನಯನಾ ಇಂದು ತಾನೂ ಅಳತೊಡಗಿದಳು. ಮನಸ್ಸು ಹಗುರಾಗುವವರೆಗೆ ಅತ್ತ ನಂತರ ನಯನಾ ಹೇಳಿದಳು - " ಸರಿ. ಇಬ್ರೂ ಆತ್ಮಹತ್ಯೆ ಮಾಡ್ಕೊಂಡು ಬಿಡೋಣ!"
ನಯನಾಳ ಒಪ್ಪಿಗೆ ಸಿಕ್ಕ ಕೂಡಲೇ ಶರ್ಮಿಳಾ ಗೆಲುವಾದಳು. ಘನವಾದದ್ದೇನನ್ನೋ ಸಾಧಿಸಲಿದ್ದೇನೆಂಬಂತೆ ಸಾಯುವ ವಿಧಾನ, ಸಾಯುವ ದಿನವನ್ನೆಲ್ಲ ಹೇಳಿದಳು - "ಹನ್ನೆರಡ್ರಿಂದ ಹದಿನೈದು ನಿದ್ದೆ ಮಾತ್ರೆ ಸಾಕು ಒಬ್ರನ್ನ ಸಾಯ್ಸೋಕೆ. ನಾನು ಹೊಂದಿಸ್ತೀನಿ. ಬರುವ ತಿಂಗಳು - ಆಗಸ್ಟ್ ಇಪ್ಪತ್ತಕ್ಕೆ ಸಾಯೋಣ."
ನಯನಾ ಏನೂ ಮಾತಾಡಲಿಲ್ಲ. ಗಟ್ಟಿ ಮನಸ್ಸು ಮಾಡಿಕೊಂಡು ಸತ್ತು ಬಿಟ್ಟರೆ ಕಷ್ಟಗಳಿಗೆಲ್ಲ ಕೊನೆ! ಎಂದುಕೊಂಡು ಮುಗುಳ್ನಕ್ಕಳು.
*                                                         *                                                          *
(ಭಾಗ ೩)
ಆದರೆ  ನಡೆದದ್ದೇ ಬೇರೆ! ಸಾವೆಂಬ ಬದುಕಿನ ಪರಮ ಸತ್ಯಕ್ಕೆ  ತಮ್ಮನ್ನು ತಾವೇ ಒಡ್ಡಿಕೊಳ್ಳುವುದೆಂದು ನಿರ್ಧರಿಸಿದ ಎರಡೇ ವಾರಕ್ಕೆ ಬದುಕೆಂಬ ಮಹಾಮಾಯೆಯನ್ನು ಮುಂದುವರೆಸಲು ಚಿಕ್ಕದೊಂದು ಕಾರಣ ನಯನಾಳಿಗೆ ದೊರಕಿತು. ಅವಳು ಹುಡುಕುತ್ತಿದ್ದ ಹೆಚ್ಚು ಸಂಬಳದ ಕೆಲಸ ಅವಳನ್ನು ಹುಡುಕಿಕೊಂಡು ಬಂತು. ನಯನಾ ಕೆಲಸ ಬದಲಿಸುವ  ತಲೆಬಿಸಿಯಲ್ಲಿ ಮುಳುಗಿ ಹೋದಳು. ಸಾವಿನ ನಿರ್ಧಾರ ಸಡಿಲವಾಯಿತು. ಮುಂದಿನ ತಿಂಗಳು ಸಾಯುವವಳು ಕೆಲಸವೇಕೆ ಬದಲಾಯಿಸುತ್ತಿರುವೆ ಎಂದು ಶರ್ಮಿಳಾ ಕೇಳಲಿಲ್ಲ. ತಾನು ಹಿಂಜರಿಯುವುದು ಅವಳಿಗೆ ಆಗಲೇ ಗೊತ್ತಾಗಿತ್ತೆ?

ಒಮ್ಮೆ ಹೊಸ ಕೆಲಸದಲ್ಲಿ ತುಂಬಾ ಮುಖ್ಯವಾದ ಒಂದು ಮೀಟಿಂಗಿನಲ್ಲಿದ್ದಾಗ ಶರ್ಮಿಳಾ ಕರೆ ಮಾಡಿದಳು. ನಯನಾ ಎರಡು ಮೂರು ಬಾರಿ ಸೈಲೆಂಟಿಗೆ ಹಾಕಿ ಕೂತಳು. ಶರ್ಮಿಳಾ  ಮತ್ತೆ ಕರೆ ಮಾಡಿದಾಗ ಮೀಟಿಂಗ್ ರೂಮ್  ನಿಂದ ಹೊರಗೆ ಬಂದು ಕರೆಯನ್ನು ತೆಗೆದುಕೊಂಡಳು. ಶರ್ಮಿಳಾ ಮತ್ತೆ ಸಾವಿನ ವಿಷಯ ಮಾತಾಡುತ್ತಾಳೆಂದು ತಿಳಿದಿತ್ತು, ಹಾಗಾಗಿ ಅವಳು ಮಾತಾಡುವ ಮೊದಲೇ ನಯನಾ ಹೇಳಿದಳು, "ಶರ್ಮಿಳಾ, ನಂಗೆ ನಿಜವಾಗಲೂ ಸಾಯೋಕೆ ಇಷ್ಟವಿಲ್ಲ ಕಣೆ. ನಾನು ಆಸೆ ಪಡ್ತಿದ್ದ ಹಾಗೆ ಒಳ್ಳೆ ಕೆಲ್ಸ ಸಿಕ್ಕಿದೆ. ದೇವ್ರು ಬದುಕೋಕೆ ಒಂದು ಚಾನ್ಸ್ ಕೊಟ್ಟಿದ್ದಾನೆ, ಅದನ್ನ ಉಪಯೋಗಿಸ್ಕೋಬೇಕು ನಾನು!"

"ಆದ್ರೆ ನಾವು ಮಾತಾಡ್ಕೊಂಡಿದ್ದು ಬೇರೇನೇ ಆಲ್ವಾ ನಯನಾ??", ಶರ್ಮಿಳಾ ಏನೋ ಹೇಳ ಹೊರಟರೆ ನಯನಾ ಅವಳನ್ನು ತಡೆದು ಕೇಳಿದಳು, "ನಾನು ಈಗ ಒಂದು ಮೀಟಿಂಗ್ ನಲ್ಲಿ ಇದ್ದೀನಿ. ಮತ್ತೆ ಕಾಲ್ ಮಾಡ್ತೀನಿ ನಿಂಗೆ."
*                                                  *                                                                      *

ಅಂದು ನಯನಾ ಮತ್ತೆ ಶರ್ಮಿಳಾಳಿಗೆ ಕರೆ ಮಾಡಲಿಲ್ಲ. ಅವಳು ಶರ್ಮಿಳಾಳಿಗೆ ಮತ್ತೆ ಕರೆ ಮಾಡಿದ್ದು ಹೊಸ ಕೆಲಸದಲ್ಲಿ ಮೊದಲ ಸಂಬಳ ಬಂದಾಗಲೇ. ಆದರೆ ಶರ್ಮಿಳಾ ಎತ್ತಲಿಲ್ಲ. ಅವಳ ಪೀಜಿಯ ಬಳಿ ಹೋದರೆ ಅವಳು ಅಲ್ಲಿರಲಿಲ್ಲ. ವಿಳಾಸ ಬದಲಿಸಿದ್ದಳು, ಅಥವಾ ಹಾಗೆಂದು ನಯನಾ ನಂಬಿಕೊಂಡಳು. ಮತ್ತೆ ಯಾವತ್ತೂ ಶರ್ಮಿಳಾಳಿಂದ ನಯನಾಳಿಗೆ ಯಾವುದೇ ಕರೆ ಬರಲಿಲ್ಲ. 

ಈಗ ವರ್ಷಗಳೇ ಕಳೆದಿವೆ. ಶರ್ಮಿಳಾಳ ಸುದ್ದಿ ಇಲ್ಲ. ಈಗ ಅವಳ ಬಗ್ಗೆ ನೆನೆದರೆ ನಯನಾಳಿಗೆ ಮೊದಲಿಗೆ ನೆನಪಾಗುವುದು ಅವಳ ದೈವಭಕ್ತಿ. ಅದರಲ್ಲೂ ಶಿರಡಿಯ ಸಾಯಿಬಾಬಾರ ಬಗ್ಗೆ ಅವಳಿಗಿದ್ದ ವಿಪರೀತ ಭಕ್ತಿ. ಅವಳ ಪಾಸ್ವರ್ಡ್ ಗಳು ಕೂಡ ಅವಳ ಸಾಯಿ ಭಕ್ತಿಯನ್ನು ಪ್ರತಿಬಿಂಬಿಸುತ್ತಿದ್ದವು. ಅಗತ್ಯಕ್ಕಿಂತ ಹೆಚ್ಚಾಗಿ ಸಾಯಿಬಾಬರನ್ನು ನಂಬುತ್ತಿದ್ದ ಅವಳು, ಬಾಬಾರಿಗೆ ಭಕ್ತಿಯಿಂದ ಬೇಡಿಕೊಂಡರೆ ಕಷ್ಟಗಳೆಲ್ಲವೂ ದೂರವಾಗುವುದೆಂದು ನಂಬಿದ್ದಳು. ಹೀಗಿದ್ದ ಅವಳು ಆ ಆಗಸ್ಟ್ ಇಪ್ಪತ್ತರಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಶರ್ಮಿಳಾ ಬದುಕಿರಬಹುದೆ? ಸಾಯಿಬಾಬಾರನ್ನು ನಂಬಿಕೊಂಡು ಎಲ್ಲೋ ಬದುಕಿರಬಹುದು ಎಂದು ನಯನಾ ಭಾವಿಸುತ್ತಾಳೆ. ಹಾಗೆಂದುಕೊಂಡ ಮರುಕ್ಷಣವೇ ಸಾವಿನ ಬಗ್ಗೆ ತಾವು ಮಾಡಿಕೊಂಡ ಒಪ್ಪಂದದಿಂದ ಹಿಂಜರಿದು ತಾನವಳಿಗೆ ಮೋಸ ಮಾಡಿಬಿಟ್ಟೆ ಎಂದು ಚುಚ್ಚಿದಂತಾಗುತ್ತದೆ. ಶರ್ಮಿಳಾ ನೆನಪಾದ ರಾತ್ರಿಗಳಲ್ಲಿ ನಯನಾ ನಿದ್ದೆಗೆಡುತ್ತಾಳೆ. 
*                                                        *                                                                 *

ಮೊನ್ನೆ ಶರ್ಮಿಳಾಳಿಗೆ ಕಳಿಸಿದ್ದ ಈ-ಮೇಲ್ ಕೂಡ ವಿಳಾಸ ಅಸ್ತಿತ್ವದಲ್ಲಿಲ್ಲವೆಂಬ ಸಂದೇಶದೊಂದಿಗೆ ಮರಳಿತು. ಶರ್ಮಿಳಾಳ ಮನೆ ಕಾಳಹಸ್ತಿಯ ಬಳಿ ಎಲ್ಲೋ ಇದೆ ಎಂದು ಅವಳು ಹೇಳಿದ್ದು ನೆನಪು. ನಯನಾ ಕನಸಿನಲ್ಲಿ ಅವಳ ಮನೆಗೆ ಹೋಗಿದ್ದಳು. "ಶರ್ಮಿಳಾ" ಎಂದು ಕರೆದರೆ ಯಾರೂ ಬರಲಿಲ್ಲ. ಮನೆ ಬಿಕೋ ಎನ್ನುತ್ತಿತ್ತು. ನಯನಾಳಿಗೆ ಭಯವಾಯಿತು. ಇನ್ನೆರಡು ಬಾರಿ ಅವಳ ಹೆಸರನ್ನು ಕೂಗಿದಳು. "ನಯನಾ!", ಎಂದು ಕೂಗುತ್ತಾ ಶರ್ಮಿಳಾ ದಡದಡನೆ ಮೆಟ್ಟಿಲಿಳಿದು ಬಂದಳು! ಇಬ್ಬರೂ ತಬ್ಬಿಕೊಂಡು ನಕ್ಕರು. ಮತ್ತೆ ಅತ್ತರು. ಬಳಿಕ ನಕ್ಕರು. 

- ಕನಸಿನಿಂದ ಎಚ್ಚರಗೊಂಡ ನಯನಾಳ ಕಣ್ಣಲ್ಲಿ ನೀರಿತ್ತು. 'ಕಾಳಹಸ್ತಿಗೆ ಇವತ್ತೇ ಹೋಗಬೇಕು.", ಎಂದುಕೊಂಡು ಬೆಳಕಾಗುವುದನ್ನು ಉದ್ವೇಗದಿಂದ ಕಾದಳು. 
*                                                          *                                                                 *
(ಮುಗಿಯಿತು)

Jan 1, 2014

FaceBook Ramblings - Jan - Apr 2014

Apr 10, 2014:

Today all the cartoonists are busy making fun of AK, RaGa and Manmohan Singh. Will they be able to poke fun at Narendra Modi at least once he comes to power? Or will they continue to be biased?

Mar 31, 2014:

ಯುಗಾದಿಗೆ ಬೆಂಗಳೂರು ವೇವ್ಸ್ ನಲ್ಲಿ ಪ್ರಕಟವಾದ ಲೇಖನ :

http://www.bangalorewaves.com/articles/bangalorewaves-article-details.php?val1=NjY5

Mar 30, 2014:

ಉಳಿದವರು ಕಂಡಂತೆ - ವೀಕ್ಷಕರಿಗೆ ಏನಾದರೂ ಹೊಸತನ್ನು ಕೊಡಬೇಕೆಂಬ ತುಡಿತದ ಫಲ. ದೃಶ್ಯಗಳನ್ನು ಕಟ್ಟಿಕೊಡುವುದರಲ್ಲಾಗಲಿ, ತಾಂತ್ರಿಕತೆಯಲ್ಲಾಗಲಿ, ಹಿನ್ನೆಲೆ ಸಂಗೀತದಲ್ಲಾಗಲಿ - ಎಲ್ಲದರಲ್ಲು ಹೊಸತನವಿದೆ.
ಹೊಸತನ್ನು ಇಷ್ಟ ಪಡುವವರು, ಹೊಸ ಪ್ರಯತ್ನಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವವರು ಒಮ್ಮೆ ನೋಡಲೇಬೇಕಾದ ಸಿನಿಮಾ.

Mar 28, 2014:

ಟಿಕೆಟ್ ಬುಕ್ ಮಾಡಿಲ್ವ? ಯಾಕೆ, ಶೂಟ್ ಮಾಡ್ಬೇಕಾ? #UlidavaruKandanthe

Mar 16, 2014:

Few pending comments :
The Monuments Men - An interesting canvas. But a boring movie, most probably because of the lazy screenplay.
The Wolf of Wall Street - An interesting movie. A bit cruel and ruthless, but still worth watching.
...
Queen - A must watch. A very refreshing story. Kangana surprises you with her performance!
Ugram (Kannada) - A larger than life action story that entertains and holds your attention till the end. A good one time watch.

Mar 16, 2014:

Value of English :-D

Mar 14, 2014:

My biggest fear while traveling in BMTC is that the crowd will not let me get down at my stop :-D
Mar 13, 2014:
No matter how many links or photographs or random thoughts you share on Facebook, some people are only going to send you Candy Crush requests. Otherwise, they don't know you exist :-D

Mar 8, 2014:

Article on Women's Day, in BangaloreWaves website :


Feb 6, 2014:

I am postponing the release of my Facebook movie to avoid clash in box office. Sorry for the inconvenience. Stay tuned.:-D