Jun 20, 2010

ಭೂಮಿಗೆ ಬಂದ ಭಗವಂತ ...

ಕೆ.ಎಸ್.ಎಲ್.ಸ್ವಾಮಿ (ರವಿ) ನಿರ್ದೇಶನದ "ಭೂಮಿಗೆ ಬಂದ ಭಗವಂತ" ಎಂಬ ಸಿನಿಮಾದಲ್ಲಿ "ಭೂಮಿಗೆ ಬಂದ ದೇವಕಿ ಕಂದ", ಎಂದು ಶುರುವಾಗುವ ಹಾಡೊಂದಿದೆ. ಇದಕ್ಕೆ ಜಿ.ಕೆ. ವೆಂಕಟೇಶರ ಸಂಗೀತ ನಿರ್ದೇಶನವಿದೆ. ಎಸ್.ಪಿ.ಬಿ ಹಾಡಿದ್ದಾರೆ.
ಮೇಲ್ನೋಟಕ್ಕೆ ಭಕ್ತಿ ಗೀತೆಯಂತೆ ಕಾಣುವ ಈ ಹಾಡು ಗಮನವಿಟ್ಟು ಕೇಳಿದಾಗ
"ಆನಂದ ರಸ" ಉಕ್ಕಿಸುವ ವಿಷಯ ಗೊತ್ತಾಗುತ್ತದೆ.

ಬಹುಷಃ ಜಿ.ಕೆ. ಬೇಕೆಂದೇ ಈ ರೀತಿಯ ಸಂಗೀತ ಸಂಯೋಜಿಸಿದ್ದಾರೆ.

ಸಾಧಾರಣ ಭಕ್ತಿ ಗೀತೆಗಳಲ್ಲಿ ಇರುವಂತೆ ಒಂದು ರೀತಿಯ ಮೈ ಮರೆತ ಹುಚ್ಚು ಸಂಗೀತ ಇದಲ್ಲ. ಎಲ್ಲೂ ಏರು ಸ್ವರವಿಲ್ಲ.
ಇಡೀ ಹಾಡಿನಲ್ಲಿ ಬಹಳ ಎಚ್ಚರವಿಟ್ಟುಕೊಂಡು ಆನಂದ ಭಾವ ಹುಟ್ಟಿಸಿದ್ದಾರೆ ಗಾಯಕ ಮತ್ತು ಸಂಯೋಜಕರಿಬ್ಬರೂ.
ಅಲ್ಲದೆ ಸಾಧಾರಣ ಭಕ್ತಿ ಗೀತೆಗಳೆಲ್ಲ ದೇವರನ್ನು ಮೆಚ್ಚಿಸುವ ಹಾಡುಗಳು. ಆದರೆ ಈ ಹಾಡಿನಲ್ಲಿ ದೇವರನ್ನು ಮೆಚ್ಚಿಸುವ, ತನ್ನ ಭಕ್ತಿಯ ವೈಶಿಷ್ಟ್ಯವನ್ನು ವರ್ಣಿಸುವ ಆತುರವಿಲ್ಲ. ಬದಲಿಗೆ ದೇವರನ್ನು ಪಡೆದ ಧನ್ಯತಾ ಭಾವವಿದೆ.
ಅವನನ್ನು ಪಡೆದಾಗ ನಿಜಕ್ಕೂ ಸಿಗಬಹುದಾದ ಆನಂದ ಭಾವವಿದೆ. ಕೆಲವೊಮ್ಮೆ ಉಕ್ಕುವ ಸಮುದ್ರ, ಬೃಹತ್ ಪರ್ವತ ಅಥವಾ ಒಂದು ಭಾರಿ ಮರವನ್ನು ನೋಡಿದಾಗ ನಮ್ಮಲ್ಲಿ ಉಕ್ಕುವ ಭಾವ ಕೂಡ ಇದೇ ಎಂದು ನನಗೆ ಅನ್ನಿಸುತ್ತದೆ. ನಿನ್ನೆ-ನಾಳೆಗಳ ಪರಿವೆ ಇಲ್ಲದ ಅಪಾರ ಆನಂದ!

ಮತ್ತೆ ಕೆಲವು ವಿಷಯಗಳು :
ಉದಯಶಂಕರ್ ಅವರ ಸಾಹಿತ್ಯ brilliant ಆಗಿದೆ.
ಈ ಸಿನಿಮಾದ ಕಥೆ ಕೂಡ interesting ಆಗಿದೆ. ದರೋಡೆಕೋರನೊಬ್ಬ ರಾಣಿಯೊಬ್ಬಳ ಮೇಲೆ ಪ್ರೀತಿ ಹುಟ್ಟಿ ಅವಳಲ್ಲಿ ಕೇಳಿದಾಗ ಅವಳು ಬೇರೆ ದಾರಿ ಕಾಣದೆ ಶ್ರೀ ಕೃಷ್ಣನ ಕತ್ತಿನಲ್ಲಿರುವ ಮಣಿಯನ್ನು ತಂದು ಕೊಟ್ಟರೆ ಅವನನ್ನು ಮದುವೆಯಾಗುವುದಾಗಿ ಹೇಳುತ್ತಾಳೆ. ದರೋಡೆಕೋರ ಕೃಷ್ಣನನ್ನು ಹುಡುಕುತ್ತ ಹೊರಡುತ್ತಾನೆ. ಈ ಹುಡುಕಾಟದಲ್ಲಿ ಅವನು ಹೇಗೆ "ತನ್ನನ್ನು" ಕಳೆದುಕೊಂಡು ಭಗವಂತನನ್ನು ಪಡೆಯುತ್ತಾನೆ ಎಂಬುದೇ ಕಥೆ. ಲೋಕೇಶ್ ಅದ್ಭುತ ನಟ ಎಂದು ನನಗೆ ಎಷ್ಟೋ ಸಲ ಅನ್ನಿಸಿದೆ. ಈ ಹಾಡಿನ video ನೋಡಿದರೆ ನಿಮಗೂ ಅನ್ನಿಸಬಹುದು. 
ಅಂದ ಹಾಗೆ ಬಾಲ - ಕೃಷ್ಣನ ಪಾತ್ರದಲ್ಲಿ ಪುನಿತ್ ರಾಜಕುಮಾರ್ ನಟಿಸಿದ್ದಾರೆ.

"ರಾಗ" ದಲ್ಲಿ ಇದರ ಲಿಂಕ್ : http://www.raaga.com/player4/?id=168145&mode=100&rand=0.062396971958092295