Nov 3, 2010

ಪಂಚರಂಗಿ





ಇದು ಹಾಸ್ಯ ಚಿತ್ರವಲ್ಲ, "ವ್ಯಂಗ್ಯ" ಚಿತ್ರ ಅನ್ನಬೇಕು. ಮಾಮೂಲಿ ಬೇಜಾರುಗಳಲ್ಲಿ ಕಳೆದು ಹೋದ ಜೀವಗಳಿಗೆ ವ್ಯಂಗ್ಯದ ಚುಚ್ಚು ಮದ್ದು ಇದು. ಪ್ರತಿ ದೃಶ್ಯದಲ್ಲೂ ತಿವಿದು ಎಬ್ಬಿಸುವಂಥ ಸಂಭಾಷಣೆ ಉಪಯೋಗಿಸಿದ್ದಾರೆ ಯೋಗರಾಜ ಭಟ್.

ಭಾರಿ ತತ್ವ ಅಥವಾ ನೀತಿಗಳ ಬೆಂಬಲವಿಲ್ಲದ ಒಂದು ಶುದ್ಧ ಮನೋರಂಜನೀಯ ಸಿನಿಮ ಇದು. ಜೀವನದ ಬಗ್ಗೆ ತೀವ್ರವಾಗಿ ಯೋಚಿಸುತ್ತಲೇ "ಲೈಫು ಇಷ್ಟೇನೆ" ಎನ್ನುವ ಉಡಾಫೆಯನ್ನೂ ನಾಯಕನ ಮೂಲಕ ತೋರಿಸಲಾಗಿದೆ. ಪ್ರತಿ ಬಾರಿ "ಲೈಫು ಇಷ್ಟೇನೆ" ಎನ್ನುವಾಗಲೂ ವೀಕ್ಷಕ "ಇದರಾಚೆಗೂ ಏನೋ ಇದೆ" ಎಂದು ಯೋಚಿಸುವಂತೆ ಮಾಡುವುದೇ ನಿರ್ದೇಶಕನ ಉದ್ದೇಶ ಅನ್ನಿಸುತ್ತದೆ.

ಹಾಡುಗಳ ಮೂಲಕ ನಿರ್ದೇಶಕ ವೀಕ್ಷಕನೊಂದಿಗೆ ನೇರ ಸಂಭಾಷಣೆಗೆ ಇಳಿದಂತೆ ಕಾಣುತ್ತಿದೆ. "ಪಂಚರಂಗಿ ಹಾಡುಗಳು" ಎಂಬ ಹಾಡಿನಲ್ಲಿ ನಾಯಕನಿಗೆ ಹಿನ್ನೆಲೆ ಧ್ವನಿ ನೀಡುವ ಯೋಗರಾಜ್ ಭಟ್ ನಾಯಕನ ಮೂಲಕ ತೋರಿಸಲು ಹೊರಟಿದ್ದು ತಮ್ಮ ಜೀವನ ದೃಷ್ಟಿಯನ್ನು ಎಂದು ನನ್ನ ಭಾವನೆ. ಈ ಹಾಡಿನಲ್ಲಿ ಧ್ವನಿಯಲ್ಲಿರುವ ವ್ಯಂಗ್ಯದಿಂದಾಗಿ ಯೋಗರಾಜ್ ಭಟ್ ಗಮನ ಸೆಳೆಯುತ್ತಾರೆ.

ಪಾತ್ರ ಪೋಷಣೆಗೆ  ಸಾಕಷ್ಟು ಗಮನ ಹರಿಸಲಾಗಿದೆ. ಕಥೆಯಲ್ಲಿ ಸಂಕೀರ್ಣ ಅಂಶಗಳೇನು ಇಲ್ಲದೆಯೂ ವೀಕ್ಷಕನನ್ನು ತೊಡಗಿಸಿಕೊಳ್ಳುವ ಸತ್ವ ಉಳ್ಳ ಸಂಭಾಷಣೆ ಇದೆ. ನಟರೆಲ್ಲರೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಖಂಡಿತವಾಗಿಯೂ ಇದು ಒಂದು ಉತ್ತಮ ಚಿತ್ರ; ವೀಕ್ಷಕನನ್ನು ಯೋಚಿಸಲು ಹಚ್ಚಿಸುವಲ್ಲಿ ಯಶಸ್ವಿಯಾಗುವ ಚಿತ್ರ.

Oct 17, 2010

ಸತ್ತ ಹಸುವಿನ ಸುತ್ತ...


 
ಅಂದು ಮುಂಜಾನೆ ನಾನು ಆಫೀಸಿಗೆ  ಹೋಗುವ ದಾರಿಯಲ್ಲಿ ಒಂದು ಹಸು ಸತ್ತು ಬಿದ್ದಿತ್ತು. ದೊಡ್ಡ ಗಾತ್ರದ ಹಸು. ಪ್ರಾಣಿ-ಪಕ್ಷಿಗಳ ಬಗ್ಗೆ ಪ್ರೀತಿ ಇರುವ ಯಾರಿಗೇ ಆದರೂ ಹೊಟ್ಟೆ "ಚುರುಕ್" ಎನ್ನುವಂತಿತ್ತು. ಮುಖ್ಯ ರಸ್ತೆಯ ಬದಿಯಲ್ಲಿ, ಮಂಜಿನಲ್ಲಿ ಒದ್ದೆಯಾಗಿದ್ದ ಹಸುವಿನ ಶವ ಬಿದ್ದಿತ್ತು. ನಾನು ಬುದ್ಧಿ ಬೆಳೆದಾಗಿನಿಂದ ಹಸು-ಎಮ್ಮೆ, ಮತ್ತು ಅವುಗಳ ಕರುಗಳನ್ನು ನೋಡಿಕೊಂಡೇ ಬೆಳೆದವನು. ನನ್ನ ತಾಯಿ ಒಂದು ಜಾತಿ ಹಸುವನ್ನು ಸಾಕಿದ್ದಳು. ನಾನು ಅದರ ಹಾಲನ್ನು ಊರಿನ ಹೊಟೇಲಿಗೆ ಮಾರಿ ಬರುತ್ತಿದ್ದೆ. ಈ ಕೆಲಸಕ್ಕೆ ತಾಯಿ ನನಗೆ ವಾರಕ್ಕೆ ಹತ್ತು ರೂಪಾಯಿ ಕೊಡುತ್ತಿದ್ದಳು. ಈ ದುಡ್ಡನ್ನು ಸೇರಿಸಿ ನಾನು ಒಂದು ಸೈಕಲ್ಲು ಕೊಂಡೆ. ಮುಂದೆ ಆ ಹಸು ಸತ್ತು ಹೋಯಿತು. ಏನೂ ವಿಶೇಷಗಳಿಲ್ಲದೆ, ಮಾಮೂಲಿ ಬೇಜಾರುಗಳಲ್ಲಿ ಕಳೆದು ಹೋಗಿದ್ದ ನಮ್ಮ ಹಳ್ಳಿಯ ಜನರಿಗೆ ಇದೊಂದು ಸ್ವಾರಸ್ಯಕರ ವಿಷಯವಾಯಿತು; ನಮ್ಮನ್ನು ಕಂಡಾಗ ಸಹಾನುಭೂತಿಯಿಂದ ಮಾತಾಡಿ, "ತ್ಚು ತ್ಚು ತ್ಚು" ಎನ್ನಲಿಕ್ಕೆ. ನಮ್ಮ ಪ್ರೀತಿಯ ಹಸುವಿನ ಹೆಣವನ್ನು ಅದರ ಮೇಲೆ ಯಾವುದೇ ಸಹಾನುಭೂತಿ ಇಲ್ಲದವರಂತೆ ತೋರುತ್ತಿದ್ದ ನಾಲ್ವರು, ಹಗ್ಗ-ಗಿಗ್ಗ ಕಟ್ಟಿ ನಡುವೆ ಕೋಲು ಸಿಕ್ಕಿಸಿ, ಎಳೆದಾಡಿ, ತೂರಾಡಿ ಮಣ್ಣು ಮಾಡಿದರು. ಈ ದೃಶ್ಯವನ್ನು ನಾನು ಅಟ್ಟದ ಕಿಟಕಿಯಿಂದ (ಅಲ್ಲಿಂದ ಆ ಸ್ಥಳ ಸರಿಯಾಗಿ ಕಾಣುತ್ತಿದ್ದ ಕಾರಣಕ್ಕಾಗಿ) ನೋಡುತ್ತಾ, "ಇಂಥ  ಅನುಭವಗಳೇ ನಮ್ಮನ್ನು ಪಕ್ವ ಮಾಡುವುದು" - ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ!

ರಸ್ತೆಯ ಬದಿಯಲ್ಲಿ ಹಸುವಿನ ಹೆಣವನ್ನು ನೋಡಿದಾಗ ಇಷ್ಟೆಲ್ಲ ಯೋಚನೆಗಳು ನನ್ನ ತಲೆಯಲ್ಲಿ ಸುಳಿದು ಹೋಗಿರಬೇಕು. ಸಾಕಿದವರು ಯಾರಾದರೂ ಮಣ್ಣು ಮಾಡಲು ಸ್ಥಳವಿಲ್ಲದೆ ರಸ್ತೆ ಬದಿಯಲ್ಲಿ ಎಸೆದು ಹೋದರೆ! - ಎಂದುಕೊಂಡೆ. ನಮ್ಮ ಹಳ್ಳಿಗಳಲ್ಲಾದರೆ ಮನೆಯ ಸುತ್ತ ಸತ್ತ ನಾಯಿ, ಬೆಕ್ಕು, ಹಸು, ಕೊನೆಗೆ ಮನುಶ್ಯರನ್ನು ಕೂಡ ಮಣ್ಣು ಮಾಡುವಷ್ಟು ಸ್ಥಳವಿರುತ್ತದೆ. ಮನೆ, ಅಂಗಡಿ, ಅಪಾರ್ಟುಮೆಂಟ್ ಎಂದು ಒಂದು ಅಡಿ ಸ್ಥಳ ಬಿಡದೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ಸಾಕಿದ ಹಸುವನ್ನು ಮಣ್ಣು ಮಾಡಲಿಕ್ಕೆ ಸ್ಥಳವೆಲ್ಲಿದೆ? ಅಷ್ಟಕ್ಕೂ ಸತ್ತ ಹಸುವನ್ನು ಮಣ್ಣು ಮಾಡುವುದಕ್ಕೆ ಏಕೆ ಖರ್ಚು ಮಾಡಬೇಕು, ರಸ್ತೆಯ ಬದಿಯಲ್ಲಿ ಎಸೆದು ಹೋದರೆ, ನಗರವನ್ನು ಸ್ವಚ್ಛ, ಸುಂದರವಾಗಿಡುವ ಹೊಣೆ ಹೊತ್ತವರು ಹೆಣಕ್ಕೆ ಗತಿ ಕಾಣಿಸುತ್ತಾರಲ್ಲ ಹೇಗಿದ್ದರೂ ಎಂದುಕೊಂಡಿರಬಹುದು ಸತ್ತ ಹಸುವಿನ ಮಾಲಿಕ.


ಹೀಗೆಲ್ಲ ಅಂದುಕೊಳ್ಳುತ್ತಾ ಆಫೀಸಿಗೆ ನಡೆದ ನಾನು ಆಗಲೇ ಹೇಗೆ ಮನುಷ್ಯನ ಸಂವೇದನೆಗಳು ನಶಿಸಿವೆ - ಎಂಬ ಬಗ್ಗೆ ಒಂದು ಕಥೆ ಬರೆಯಬೇಕು ಅಂದುಕೊಂಡೆ. ನನ್ನ ಕಥೆಯ ನಾಯಕ ಸಿನಿಮಾ-ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ ವೃತ್ತಿಯಲ್ಲಿರುತ್ತಾನೆ. ಮನುಷ್ಯನ ಮೂಲಭೂತ ಭಾವನೆಗಳು ಹೇಗೆ ಸತ್ತಿವೆ, ಹೀಗಾಗಲಿಕ್ಕೆ ಹೇಗೆ ನಮ್ಮ ’ಸಮೂಹ ಮಾಧ್ಯಮ’ಗಳು ಕಾರಣವಾಗಿವೆ, ಹೀಗೆ ಸಂವೇದನೆಗಳಿಲ್ಲದ ಜನರನ್ನು ಮುಟ್ಟಲಿಕ್ಕಾಗಿ, ಈ ಜಡ ಜೀವಗಳನ್ನು ಅಲುಗಿಸಲಿಕ್ಕಾಗಿ ನಮ್ಮ ಕಾದಂಬರಿಕಾರರು, ಸಿನಿಮಾ ಮಂದಿ ಹೇಗೆ ತಮ್ಮ ಕಥೆಗಳಲ್ಲಿ ಕ್ರೌರ್ಯ ತುರುಕುತ್ತಿದ್ದಾರೆ. ಮತ್ತು ಈ ತುರುಕಾಟದಿಂದಾಗಿ ಮತ್ತೆ ಸಂವೇದನೆಗಳು ಹೇಗೆ ನಶಿಸುತ್ತಿವೆ - ಹೀಗೆ ಒಂದು ವಿಷಚಕ್ರದಲ್ಲಿ ಹೇಗೆ ನಾವೆಲ್ಲ ಒದ್ದಾಡುತ್ತಿದ್ದೇವೆ - ಎಂಬುದನ್ನೆಲ್ಲ ನನ್ನ ಕಥೆಯ ನಾಯಕನ ಮೂಲಕ ಹೇಳಬೇಕೆಂಬುದು ನನ್ನ ಉದ್ದೇಶವಾಗಿತ್ತು. ಹೀಗೆಲ್ಲ ಬರೆಯುವುದರಿಂದ ಏನೂ ಬದಲಾಗುವುದಿಲ್ಲ ಎಂಬುದು ನನಗೆ ಕಾಲೇಜಿನಲ್ಲಿರಬೇಕಾದರೆ ಹೊಳೆದಿತ್ತು. ಹಾಗಾಗಿ ಅಂಥ ಮಹತ್ವಾಕಾಂಕ್ಷೆಗಳೇನೂ ನನಗಿಲ್ಲ. ನನಗೆ ಮುಖ್ಯ ಎನಿಸಿದ ವಿಷಯವನ್ನು ನನಗೆ ಸರಿ ಎನಿಸಿದ ರೀತಿಯಲ್ಲಿ ದಾಖಲಿಸುವುದಷ್ಟೆ ನನ್ನ ಉದ್ದೇಶ. ಹೀಗೆ ಒಂದು ಕಥೆಯನ್ನು ಬರೆಯಬೇಕು ಎಂದುಕೊಂಡು ತುಂಬ ಸಮಯ ಓಡಾಡಿದೆ. ಓಡಾಡಿದೆ ಎಂದರೆ ಕಥೆಗೆ ವಿಷಯ ಸಂಗ್ರಹಿಸಿದೆ ಎಂದಲ್ಲ; ಹಾಗೆಲ್ಲ ವಿಷಯ ಸಂಗ್ರಹಿಸಿ ಬರೆಯುವ ಅಭ್ಯಾಸ ನನಗಿಲ್ಲ. ನನ್ನನ್ನು ನಾನೇ ಅಷ್ಟು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದೂ ಅನ್ನಬಹುದು.


ಆದರೆ ಕಥೆಯನ್ನು ಬರೆಯಲು ಶುರು ಮಾಡಿದಾಗ ಒಮ್ಮೆಗೆ ಈ ಕಥೆಗೆ ಇನ್ನೊಬ್ಬ ನಾಯಕ ಏಕೆ ಬೇಕು ಎಂಬ ಪ್ರಶ್ನೆ ಬಂತು. ನಾನು ನಾನಾಗಿ ಮಾತಾಡದೆ ಏಕೆ ಮತ್ತೊಬ್ಬನ ಮುಖವಾಡದ ಮೂಲಕ ಮಾತಾಡಬೇಕು? ಮತ್ತೆ ಮಾತಿಗಿಂತ ಮುಖವಾಡವೇ ಮುಖ್ಯವಾಗಿ ಬಿಡುವ, ಹೇಳಬೇಕಾದ್ದನ್ನು ಹೇಳಲಿಕ್ಕಾಗದೆ ಹೋಗುವ ಅಪಾಯವಿಲ್ಲವೆ? ಹೀಗೆ ಹೇಳಬೇಕಾದ್ದನ್ನು ಹೇಳಲಿಕ್ಕಾಗದೆ ಹೋಗುವುದು ಕೂಡ ಕತೆಗಾರನಲ್ಲಿ ಸಿಟ್ಟಿಗೆ ಕಾರಣವಾಗಬಹುದಲ್ಲವೆ? ಇದೇ ಸಿಟ್ಟು, ಅಸಹಾಯಕತೆ ಅವನ ಮುಂದಿನ ಕೃತಿಗಳಲ್ಲಿ ಕ್ರೌರ್ಯದ ರೂಪದಲ್ಲಿ ಹೊರ ಬರುವ ಒಂದು ಸಣ್ಣ ಸಾಧ್ಯತೆ ಇದೆ ಅಲ್ಲವೆ? ಇಂಥ ಸಣ್ಣ ವಿಷಯಗಳೆ ತಾನೇ ಮುಂದೆ ಭೂತಾಕಾರ ತಾಳುವುದು!


(ಸಶೇಷ) 

ಹಳೆಯ ಪಳೆಯ ವಿಷಯಗಳು...


Henchina mane

Jenu pettige

ondu baavi

hoge koLave

rubbuva kallu

odeda hoo "chett"igaLu

odeda hoo "chetti"

Jun 20, 2010

ಭೂಮಿಗೆ ಬಂದ ಭಗವಂತ ...

ಕೆ.ಎಸ್.ಎಲ್.ಸ್ವಾಮಿ (ರವಿ) ನಿರ್ದೇಶನದ "ಭೂಮಿಗೆ ಬಂದ ಭಗವಂತ" ಎಂಬ ಸಿನಿಮಾದಲ್ಲಿ "ಭೂಮಿಗೆ ಬಂದ ದೇವಕಿ ಕಂದ", ಎಂದು ಶುರುವಾಗುವ ಹಾಡೊಂದಿದೆ. ಇದಕ್ಕೆ ಜಿ.ಕೆ. ವೆಂಕಟೇಶರ ಸಂಗೀತ ನಿರ್ದೇಶನವಿದೆ. ಎಸ್.ಪಿ.ಬಿ ಹಾಡಿದ್ದಾರೆ.
ಮೇಲ್ನೋಟಕ್ಕೆ ಭಕ್ತಿ ಗೀತೆಯಂತೆ ಕಾಣುವ ಈ ಹಾಡು ಗಮನವಿಟ್ಟು ಕೇಳಿದಾಗ
"ಆನಂದ ರಸ" ಉಕ್ಕಿಸುವ ವಿಷಯ ಗೊತ್ತಾಗುತ್ತದೆ.

ಬಹುಷಃ ಜಿ.ಕೆ. ಬೇಕೆಂದೇ ಈ ರೀತಿಯ ಸಂಗೀತ ಸಂಯೋಜಿಸಿದ್ದಾರೆ.

ಸಾಧಾರಣ ಭಕ್ತಿ ಗೀತೆಗಳಲ್ಲಿ ಇರುವಂತೆ ಒಂದು ರೀತಿಯ ಮೈ ಮರೆತ ಹುಚ್ಚು ಸಂಗೀತ ಇದಲ್ಲ. ಎಲ್ಲೂ ಏರು ಸ್ವರವಿಲ್ಲ.
ಇಡೀ ಹಾಡಿನಲ್ಲಿ ಬಹಳ ಎಚ್ಚರವಿಟ್ಟುಕೊಂಡು ಆನಂದ ಭಾವ ಹುಟ್ಟಿಸಿದ್ದಾರೆ ಗಾಯಕ ಮತ್ತು ಸಂಯೋಜಕರಿಬ್ಬರೂ.
ಅಲ್ಲದೆ ಸಾಧಾರಣ ಭಕ್ತಿ ಗೀತೆಗಳೆಲ್ಲ ದೇವರನ್ನು ಮೆಚ್ಚಿಸುವ ಹಾಡುಗಳು. ಆದರೆ ಈ ಹಾಡಿನಲ್ಲಿ ದೇವರನ್ನು ಮೆಚ್ಚಿಸುವ, ತನ್ನ ಭಕ್ತಿಯ ವೈಶಿಷ್ಟ್ಯವನ್ನು ವರ್ಣಿಸುವ ಆತುರವಿಲ್ಲ. ಬದಲಿಗೆ ದೇವರನ್ನು ಪಡೆದ ಧನ್ಯತಾ ಭಾವವಿದೆ.
ಅವನನ್ನು ಪಡೆದಾಗ ನಿಜಕ್ಕೂ ಸಿಗಬಹುದಾದ ಆನಂದ ಭಾವವಿದೆ. ಕೆಲವೊಮ್ಮೆ ಉಕ್ಕುವ ಸಮುದ್ರ, ಬೃಹತ್ ಪರ್ವತ ಅಥವಾ ಒಂದು ಭಾರಿ ಮರವನ್ನು ನೋಡಿದಾಗ ನಮ್ಮಲ್ಲಿ ಉಕ್ಕುವ ಭಾವ ಕೂಡ ಇದೇ ಎಂದು ನನಗೆ ಅನ್ನಿಸುತ್ತದೆ. ನಿನ್ನೆ-ನಾಳೆಗಳ ಪರಿವೆ ಇಲ್ಲದ ಅಪಾರ ಆನಂದ!

ಮತ್ತೆ ಕೆಲವು ವಿಷಯಗಳು :
ಉದಯಶಂಕರ್ ಅವರ ಸಾಹಿತ್ಯ brilliant ಆಗಿದೆ.
ಈ ಸಿನಿಮಾದ ಕಥೆ ಕೂಡ interesting ಆಗಿದೆ. ದರೋಡೆಕೋರನೊಬ್ಬ ರಾಣಿಯೊಬ್ಬಳ ಮೇಲೆ ಪ್ರೀತಿ ಹುಟ್ಟಿ ಅವಳಲ್ಲಿ ಕೇಳಿದಾಗ ಅವಳು ಬೇರೆ ದಾರಿ ಕಾಣದೆ ಶ್ರೀ ಕೃಷ್ಣನ ಕತ್ತಿನಲ್ಲಿರುವ ಮಣಿಯನ್ನು ತಂದು ಕೊಟ್ಟರೆ ಅವನನ್ನು ಮದುವೆಯಾಗುವುದಾಗಿ ಹೇಳುತ್ತಾಳೆ. ದರೋಡೆಕೋರ ಕೃಷ್ಣನನ್ನು ಹುಡುಕುತ್ತ ಹೊರಡುತ್ತಾನೆ. ಈ ಹುಡುಕಾಟದಲ್ಲಿ ಅವನು ಹೇಗೆ "ತನ್ನನ್ನು" ಕಳೆದುಕೊಂಡು ಭಗವಂತನನ್ನು ಪಡೆಯುತ್ತಾನೆ ಎಂಬುದೇ ಕಥೆ. ಲೋಕೇಶ್ ಅದ್ಭುತ ನಟ ಎಂದು ನನಗೆ ಎಷ್ಟೋ ಸಲ ಅನ್ನಿಸಿದೆ. ಈ ಹಾಡಿನ video ನೋಡಿದರೆ ನಿಮಗೂ ಅನ್ನಿಸಬಹುದು. 
ಅಂದ ಹಾಗೆ ಬಾಲ - ಕೃಷ್ಣನ ಪಾತ್ರದಲ್ಲಿ ಪುನಿತ್ ರಾಜಕುಮಾರ್ ನಟಿಸಿದ್ದಾರೆ.

"ರಾಗ" ದಲ್ಲಿ ಇದರ ಲಿಂಕ್ : http://www.raaga.com/player4/?id=168145&mode=100&rand=0.062396971958092295

May 23, 2010

ಮಡಿದ ಗೆಳೆಯನಿಗೆ...

ನೀನು ಸತ್ತೆ ಎಂದ ಸುದ್ದಿ ಬಹಳ ಸುಲಭದಲ್ಲಿ ಜೀರ್ಣ ಆಯಿತು. ಸುದ್ದಿ - ಟಿ.ವಿ. ಯಲ್ಲಿ ನೋಡಿದಂತೆ, ಪೇಪರಿನಲ್ಲಿ ಓದಿದಂತೆ - ರಸ್ತೆ ಅಪಘಾತದಲ್ಲಿ ಮೃತ್ಯು - ಬುದ್ಧಿಗೆ ಅರ್ಥವಾಯಿತು; ವಿಪರೀತ ಮದ್ಯ ಸೇವಿಸಿ, ಅತಿ ವೇಗದಲ್ಲಿ ಗಾಡಿ ಓಡಿಸಿ ಮುಂದೆ ಇದ್ದ ಟ್ರಕ್ ಗೆ ನೀನೆ ಹೊಡೆದು, ವಾಹನ ನಜ್ಜು ಗುಜ್ಜಾಗಿ ಸ್ಥಳದಲ್ಲೇ ಸಾವು.
ಆದರೆ ಇನ್ನೂ ಜೀರ್ಣವಾಗದ ವಿಷಯ ಎಂದರೆ ಇವು - ನಿನ್ನ ಡೊಳ್ಳು ಹೊಟ್ಟೆಗೆ ಹೊಡೆದು "ಧಡಿಯ" ಎನ್ನಲು ಸಾಧ್ಯ ಇಲ್ಲ. ಕೆನ್ನೆಗೆ ತಟ್ಟಿ "loafer " ಎನ್ನುವಂತಿಲ್ಲ. ನೀನು ಇನ್ನು ಯಾವತ್ತು ಆಫೀಸಿನಲ್ಲಿ ಕಾಣ ಸಿಗುವುದಿಲ್ಲ. ನನ್ನ ಸೀಟಿನ ಹತ್ತಿರ ಬಂದು, "ಹುಚ್ ನನ್ ಮಗನೆ", ಎನ್ನುವುದಿಲ್ಲ. ಕೂದಲು ಸವರಿಕೊಳ್ಳುತ್ತಾ, "ಏಯ್, ನಾನು ಸಕತ್ talent ಕಣೋ", ಎಂದು ನಿನ್ನ ಬೆನ್ನು ನೀನೆ ಚಪ್ಪರಿಸಿಕೊಳ್ಳುವುದಿಲ್ಲ. ಯಾವುದೋ ತಮಿಳು ಹಾಡಿನ ಅರ್ಥ ಕೇಳಿದರೆ ಚಿತ್ರ ಬಿಡಿಸಿ ವಿವರಿಸುವುದಿಲ್ಲ. ಸಣ್ಣ ವಿಷಯಕ್ಕೆ ಮುನಿಸಿಕೊಂಡು, " ಸರಿ ಇಲ್ಲ ಕಣೋ ನೀನು!" ಎನ್ನುವುದಿಲ್ಲ. ಕುಡಿದು ಪ್ರೀತಿ ಹೆಚ್ಚಾದಾಗ ಅತಿ ಭಾವುಕ S.M .S ಗಳನ್ನೂ ಕಳಿಸುವುದಿಲ್ಲ. "ವಯನಾಡಿಗೆ ಟ್ರಿಪ್ ಹೋಗೋಣ?", ಎಂದು ಪದೇ ಪದೇ ಕೇಳುವುದಿಲ್ಲ.

ಇಲ್ಲ ಇಲ್ಲ ಇಲ್ಲ! ಯಾವ ವಿಷಯಕ್ಕೂ ನಾನು ಇಷ್ಟು ಕಣ್ಣೀರು ಸುರಿಸಿಲ್ಲ ಎಂದರೆ ಬಹುಷಃ ನೀನು ನಂಬುವುದಿಲ್ಲ. "ಹೋಗೋ ಹುಚ್ಚ!", ಎಂದು ಕೂದಲು ಸವರಿಕೊಂಡು ಮುಂದೆ ಹೋಗುತ್ತೀಯ ಅನ್ನಿಸುತ್ತೆ.

May 21, 2010

ಹೀಗೊಬ್ಬ ಸಿನಿಕನ ಲಹರಿ

ಇದು ಒಂದು ಹಳೆ ಪದ್ಯ. ನಾನು ವಿದ್ಯಾರ್ಥಿಯಾಗಿದ್ದಾಗ ಬರೆದದ್ದು. ಆದರೆ ಇವತ್ತಿಗೂ ಇದನ್ನು ಓದಿದಾಗ ನನ್ನ ಮನಸ್ಸಿನ ಸಿನಿಕತನ, ವ್ಯಂಗ್ಯ ಎಲ್ಲವೂ ಇದರಲ್ಲಿ ದಾಖಲಾಗಿದೆ ಅನ್ನಿಸುತ್ತದೆ. ಈ ಕಾರಣಕ್ಕಾಗಿ ಮೊದಲೇ ಪೋಸ್ಟ್ ಮಾಡಿದ್ದ ಇದರ ತಾರೀಖನ್ನು ಬದಲಾಯಿಸಿ "ಮುಂದೆ" ತಳ್ಳಿದ್ದೇನೆ :

ರಂಗಾಗಿ ಹೆಣೆದ ಶಬ್ದಗಳು,
ಸೋಗಿನಲ್ಲಿ ಮುಚ್ಚಲ್ಪಟ್ಟ ಒಳಮನಸ್ಸು,
ಬಣ್ಣ ಬಳಿದುಕೊಂಡ ಕೆಟ್ಟ ವಿಕೃತ ಹೃದಯ,
ಕೈಗೆ ಸಿಗದ ಬುದ್ಧಿಯ ಮುಷ್ಟಿಯಲ್ಲಿಡಲು ಕುಣಿದಾಟ,

ತನ್ನಷ್ಟಕ್ಕೆ ಓಡುವ ಕಾಲ,
ಮುಂದಕ್ಕುರುಳುವ ಬದುಕು,
ಅಲ್ಲಿ-ಇಲ್ಲಿ , ಎಲ್ಲೆಲ್ಲಿ , ಹಲವೆಡೆಯಲ್ಲಿ
ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ,
ಸ್ಫೋಟ, ಯುದ್ಧ, ಬಿರುಕು, ಅಪ್ಪಚ್ಚಿ
ಹಪ್ಪಳದಂತೆ ಬದುಕು.

---- ಇದ ವಿವರಿಸಲೊಬ್ಬ ಸಾಹಿತಿ,
ಪದ್ಯ ಕಟ್ಟಲೊಬ್ಬ ಕವಿ,
ಸ್ಟೇಜಿನಲ್ಲಿ ಸೆಮಿ-
-ನಾರುಗಳು, ಅಚ್ಚಾಗುವ ಪದ್ಯಗಳು.

ಟೊಳ್ಳು ಸಾಹಿತ್ಯ,
ಜೊಳ್ಳು ವಿಚಾರ, ಅದಕ್ಕಿಷ್ಟು ವಿಮರ್ಶೆ,
ಕುಳಿತು ಟೀಕಿಸಲೊಬ್ಬ,
ಅದ ವಿರೋಧಿಸಲೊಬ್ಬ,
ಇಬ್ಬರಿಗೆ ರಾಜಿ ಮಾಡಿಸಲು ಮತ್ತಿನ್ನೊಬ್ಬ...



ಇದನ್ನೆಲ್ಲಾ ವರದಿಯೊಪ್ಪಿಸಲೊಂದುಪತ್ರಿಕೆ,
ಅದಕ್ಕೊಬ್ಬ ಸಂಬಳಕ್ಕಿಟ್ಟ ವರದಿಗಾರ,
ಅಲ್ಪ ಸಂಖ್ಯಾತರ, ದೀನ ದಲಿತರ ದನಿ,
ಭ್ರಷ್ಟಾಚಾರದ ವಿರುದ್ಧದ ಶಂಖಧ್ವನಿ ,
ಅನಾಚಾರಿಗಳ ವಿರುದ್ಧ ಯುದ್ಧ
ಘೋಷಿಸುವ ಪತ್ರಿಕೆ,
ಎಲ್ಲೋ ಕತ್ತೆಯ ಮೆರವಣಿಗೆಯ
ಸುದ್ದಿ ಪ್ರಕಟಿಸುತ್ತದೆ!

ಪತ್ರಿಕೆಗಳಿಗೆ ಸುದ್ದಿಯೊದಗಿಸಲು
ಒಬ್ಬೊಬ್ಬ ಶಾಸಕ, ಸಚಿವ, ಮಂತ್ರಿ, ಪ್ರಧಾನಿ,
ತಮ್ಮ ದಬ್ಬಾಳಿಕೆ ನಡೆಸಲು ಇವರಿಗೊಂದು ದೇಶ,
ಪಕ್ಕದ ಕಾಡಿನ ಹೆಬ್ಬುಲಿ ಇವನ ಬೇಟೆ ತಿನ್ನದಂತೆ
ಇವನ ದೇಶಕ್ಕೊಂದು ಗಡಿ ಸುತ್ತ ಸೈನಿಕರು ,ಇವರಿಗಾಗಿ ಗನ್ನು, ಬಾಂಬು ಮತ್ತಿನ್ನೇನೇನೋ....


ಮದ್ದಿನ ಹುಡಿಯಿಂದ ಬೆಂಕಿ
ಹುಟ್ಟಿಸಲೊಬ್ಬ ವಿಜ್ಞಾನಿ,
ಅವನಿಗೊಂದು ಪದವಿ,
ಅದಕ್ಕೊಂದು ಯೂನಿವರ್ಸಿಟಿ ,
ವಿದೇಶಿ ವಿದ್ಯಾಭ್ಯಾಸಕ್ಕೆ ಪಾಸ್ ಪೋರ್ಟು - ವೀಸಾ
ಹಾರಲು, ಏರಲು ವಿಮಾನ,
ಅದಕ್ಕೊಬ್ಬ ಪೈಲಟ್ಟು,
ಅವನಿಗೊಂದು ಜಾಕೆಟ್ಟು,
ಅದ ಹೊಲಿಯಲೊಬ್ಬ ದರ್ಜಿ,
ಅವನಿಗೊಂದು ಸೂಜಿ,
ಅದಕ್ಕೊಂದು ಕಾರ್ಖಾನೆ,
ಅದರಿಂದಷ್ಟು ಹೊಗೆ,
ಇದ ತಡೆಯಲೊಬ್ಬ ಪರಿಸರವಾದಿ,
ಅವನಿಗೊಂದು ಸಂಘಟನೆ,
ಅದಕ್ಕೊಂದು ಕಛೇರಿ,
ಅದ ಕಟ್ಟಲು ಸಿಮೆಂಟು
ಅದಕ್ಕೆ ಮತ್ತೊಂದು ಕಾರ್ಖಾನೆ,
ಅದರಿಂದ ಮತ್ತಷ್ಟು ಹೊಗೆ!

ತನ್ನಷ್ಟಕ್ಕೆ ಉರುಳುವ ಬದುಕು,
ಆಗಸದಲ್ಲಿ ತೇಲುವ ಮೋಡ,
ಅಂಗಳದಲ್ಲಿ ಆಡುವ ಮಗು,
ಇಳಿಜಾರಿನಲ್ಲುರುಳುವ ಚೆಂಡು,

- ಇದನೆಲ್ಲ ವಿವರಿಸಲೊಬ್ಬ ಕವಿ,
ಅವನಿಗೊಂದು ಕವಿತೆ,
ಕವಿತೆ ಬರೆಯಲೊಂದು ಪೆನ್ನು,
ಅದಕ್ಕಿಷ್ಟು ಮಸಿ,
ಮಸಿಗೊಂದು ಕುಪ್ಪಿ....
ತಲೆ ಕೆಟ್ಟ ಕಬ್ಬಿಗ,
ಅದ ಓದಲೊಬ್ಬ ಓದುಗ
-ಇದನೆಲ್ಲ ಬರೆಯಲು ನನಗೊಂದು ಬ್ಲಾಗು,
ಕುಕ್ಕಲೊಂದು ಕೀ ಬೋರ್ಡು,
ಕೂರಲೊಂದು ಕೋಣೆ ಅದ ಕಟ್ಟಲು ಸಿಮೆಂಟು
ಅದಕ್ಕೊಂದು ಕಾರ್ಖಾನೆ
ಅದರಿಂದಷ್ಟು ಹೊಗೆ , ನನಗೊಳ್ಳೆ ಹುಚ್ಚು?

Mar 11, 2010

Nothing

Tea cups :)

Tea cups :)







Tea cup :)












Tea cups :)










Tea cups :)























Ceiling Fan



















Namma bekku












:)