May 23, 2010

ಮಡಿದ ಗೆಳೆಯನಿಗೆ...

ನೀನು ಸತ್ತೆ ಎಂದ ಸುದ್ದಿ ಬಹಳ ಸುಲಭದಲ್ಲಿ ಜೀರ್ಣ ಆಯಿತು. ಸುದ್ದಿ - ಟಿ.ವಿ. ಯಲ್ಲಿ ನೋಡಿದಂತೆ, ಪೇಪರಿನಲ್ಲಿ ಓದಿದಂತೆ - ರಸ್ತೆ ಅಪಘಾತದಲ್ಲಿ ಮೃತ್ಯು - ಬುದ್ಧಿಗೆ ಅರ್ಥವಾಯಿತು; ವಿಪರೀತ ಮದ್ಯ ಸೇವಿಸಿ, ಅತಿ ವೇಗದಲ್ಲಿ ಗಾಡಿ ಓಡಿಸಿ ಮುಂದೆ ಇದ್ದ ಟ್ರಕ್ ಗೆ ನೀನೆ ಹೊಡೆದು, ವಾಹನ ನಜ್ಜು ಗುಜ್ಜಾಗಿ ಸ್ಥಳದಲ್ಲೇ ಸಾವು.
ಆದರೆ ಇನ್ನೂ ಜೀರ್ಣವಾಗದ ವಿಷಯ ಎಂದರೆ ಇವು - ನಿನ್ನ ಡೊಳ್ಳು ಹೊಟ್ಟೆಗೆ ಹೊಡೆದು "ಧಡಿಯ" ಎನ್ನಲು ಸಾಧ್ಯ ಇಲ್ಲ. ಕೆನ್ನೆಗೆ ತಟ್ಟಿ "loafer " ಎನ್ನುವಂತಿಲ್ಲ. ನೀನು ಇನ್ನು ಯಾವತ್ತು ಆಫೀಸಿನಲ್ಲಿ ಕಾಣ ಸಿಗುವುದಿಲ್ಲ. ನನ್ನ ಸೀಟಿನ ಹತ್ತಿರ ಬಂದು, "ಹುಚ್ ನನ್ ಮಗನೆ", ಎನ್ನುವುದಿಲ್ಲ. ಕೂದಲು ಸವರಿಕೊಳ್ಳುತ್ತಾ, "ಏಯ್, ನಾನು ಸಕತ್ talent ಕಣೋ", ಎಂದು ನಿನ್ನ ಬೆನ್ನು ನೀನೆ ಚಪ್ಪರಿಸಿಕೊಳ್ಳುವುದಿಲ್ಲ. ಯಾವುದೋ ತಮಿಳು ಹಾಡಿನ ಅರ್ಥ ಕೇಳಿದರೆ ಚಿತ್ರ ಬಿಡಿಸಿ ವಿವರಿಸುವುದಿಲ್ಲ. ಸಣ್ಣ ವಿಷಯಕ್ಕೆ ಮುನಿಸಿಕೊಂಡು, " ಸರಿ ಇಲ್ಲ ಕಣೋ ನೀನು!" ಎನ್ನುವುದಿಲ್ಲ. ಕುಡಿದು ಪ್ರೀತಿ ಹೆಚ್ಚಾದಾಗ ಅತಿ ಭಾವುಕ S.M .S ಗಳನ್ನೂ ಕಳಿಸುವುದಿಲ್ಲ. "ವಯನಾಡಿಗೆ ಟ್ರಿಪ್ ಹೋಗೋಣ?", ಎಂದು ಪದೇ ಪದೇ ಕೇಳುವುದಿಲ್ಲ.

ಇಲ್ಲ ಇಲ್ಲ ಇಲ್ಲ! ಯಾವ ವಿಷಯಕ್ಕೂ ನಾನು ಇಷ್ಟು ಕಣ್ಣೀರು ಸುರಿಸಿಲ್ಲ ಎಂದರೆ ಬಹುಷಃ ನೀನು ನಂಬುವುದಿಲ್ಲ. "ಹೋಗೋ ಹುಚ್ಚ!", ಎಂದು ಕೂದಲು ಸವರಿಕೊಂಡು ಮುಂದೆ ಹೋಗುತ್ತೀಯ ಅನ್ನಿಸುತ್ತೆ.

May 21, 2010

ಹೀಗೊಬ್ಬ ಸಿನಿಕನ ಲಹರಿ

ಇದು ಒಂದು ಹಳೆ ಪದ್ಯ. ನಾನು ವಿದ್ಯಾರ್ಥಿಯಾಗಿದ್ದಾಗ ಬರೆದದ್ದು. ಆದರೆ ಇವತ್ತಿಗೂ ಇದನ್ನು ಓದಿದಾಗ ನನ್ನ ಮನಸ್ಸಿನ ಸಿನಿಕತನ, ವ್ಯಂಗ್ಯ ಎಲ್ಲವೂ ಇದರಲ್ಲಿ ದಾಖಲಾಗಿದೆ ಅನ್ನಿಸುತ್ತದೆ. ಈ ಕಾರಣಕ್ಕಾಗಿ ಮೊದಲೇ ಪೋಸ್ಟ್ ಮಾಡಿದ್ದ ಇದರ ತಾರೀಖನ್ನು ಬದಲಾಯಿಸಿ "ಮುಂದೆ" ತಳ್ಳಿದ್ದೇನೆ :

ರಂಗಾಗಿ ಹೆಣೆದ ಶಬ್ದಗಳು,
ಸೋಗಿನಲ್ಲಿ ಮುಚ್ಚಲ್ಪಟ್ಟ ಒಳಮನಸ್ಸು,
ಬಣ್ಣ ಬಳಿದುಕೊಂಡ ಕೆಟ್ಟ ವಿಕೃತ ಹೃದಯ,
ಕೈಗೆ ಸಿಗದ ಬುದ್ಧಿಯ ಮುಷ್ಟಿಯಲ್ಲಿಡಲು ಕುಣಿದಾಟ,

ತನ್ನಷ್ಟಕ್ಕೆ ಓಡುವ ಕಾಲ,
ಮುಂದಕ್ಕುರುಳುವ ಬದುಕು,
ಅಲ್ಲಿ-ಇಲ್ಲಿ , ಎಲ್ಲೆಲ್ಲಿ , ಹಲವೆಡೆಯಲ್ಲಿ
ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ,
ಸ್ಫೋಟ, ಯುದ್ಧ, ಬಿರುಕು, ಅಪ್ಪಚ್ಚಿ
ಹಪ್ಪಳದಂತೆ ಬದುಕು.

---- ಇದ ವಿವರಿಸಲೊಬ್ಬ ಸಾಹಿತಿ,
ಪದ್ಯ ಕಟ್ಟಲೊಬ್ಬ ಕವಿ,
ಸ್ಟೇಜಿನಲ್ಲಿ ಸೆಮಿ-
-ನಾರುಗಳು, ಅಚ್ಚಾಗುವ ಪದ್ಯಗಳು.

ಟೊಳ್ಳು ಸಾಹಿತ್ಯ,
ಜೊಳ್ಳು ವಿಚಾರ, ಅದಕ್ಕಿಷ್ಟು ವಿಮರ್ಶೆ,
ಕುಳಿತು ಟೀಕಿಸಲೊಬ್ಬ,
ಅದ ವಿರೋಧಿಸಲೊಬ್ಬ,
ಇಬ್ಬರಿಗೆ ರಾಜಿ ಮಾಡಿಸಲು ಮತ್ತಿನ್ನೊಬ್ಬ...



ಇದನ್ನೆಲ್ಲಾ ವರದಿಯೊಪ್ಪಿಸಲೊಂದುಪತ್ರಿಕೆ,
ಅದಕ್ಕೊಬ್ಬ ಸಂಬಳಕ್ಕಿಟ್ಟ ವರದಿಗಾರ,
ಅಲ್ಪ ಸಂಖ್ಯಾತರ, ದೀನ ದಲಿತರ ದನಿ,
ಭ್ರಷ್ಟಾಚಾರದ ವಿರುದ್ಧದ ಶಂಖಧ್ವನಿ ,
ಅನಾಚಾರಿಗಳ ವಿರುದ್ಧ ಯುದ್ಧ
ಘೋಷಿಸುವ ಪತ್ರಿಕೆ,
ಎಲ್ಲೋ ಕತ್ತೆಯ ಮೆರವಣಿಗೆಯ
ಸುದ್ದಿ ಪ್ರಕಟಿಸುತ್ತದೆ!

ಪತ್ರಿಕೆಗಳಿಗೆ ಸುದ್ದಿಯೊದಗಿಸಲು
ಒಬ್ಬೊಬ್ಬ ಶಾಸಕ, ಸಚಿವ, ಮಂತ್ರಿ, ಪ್ರಧಾನಿ,
ತಮ್ಮ ದಬ್ಬಾಳಿಕೆ ನಡೆಸಲು ಇವರಿಗೊಂದು ದೇಶ,
ಪಕ್ಕದ ಕಾಡಿನ ಹೆಬ್ಬುಲಿ ಇವನ ಬೇಟೆ ತಿನ್ನದಂತೆ
ಇವನ ದೇಶಕ್ಕೊಂದು ಗಡಿ ಸುತ್ತ ಸೈನಿಕರು ,ಇವರಿಗಾಗಿ ಗನ್ನು, ಬಾಂಬು ಮತ್ತಿನ್ನೇನೇನೋ....


ಮದ್ದಿನ ಹುಡಿಯಿಂದ ಬೆಂಕಿ
ಹುಟ್ಟಿಸಲೊಬ್ಬ ವಿಜ್ಞಾನಿ,
ಅವನಿಗೊಂದು ಪದವಿ,
ಅದಕ್ಕೊಂದು ಯೂನಿವರ್ಸಿಟಿ ,
ವಿದೇಶಿ ವಿದ್ಯಾಭ್ಯಾಸಕ್ಕೆ ಪಾಸ್ ಪೋರ್ಟು - ವೀಸಾ
ಹಾರಲು, ಏರಲು ವಿಮಾನ,
ಅದಕ್ಕೊಬ್ಬ ಪೈಲಟ್ಟು,
ಅವನಿಗೊಂದು ಜಾಕೆಟ್ಟು,
ಅದ ಹೊಲಿಯಲೊಬ್ಬ ದರ್ಜಿ,
ಅವನಿಗೊಂದು ಸೂಜಿ,
ಅದಕ್ಕೊಂದು ಕಾರ್ಖಾನೆ,
ಅದರಿಂದಷ್ಟು ಹೊಗೆ,
ಇದ ತಡೆಯಲೊಬ್ಬ ಪರಿಸರವಾದಿ,
ಅವನಿಗೊಂದು ಸಂಘಟನೆ,
ಅದಕ್ಕೊಂದು ಕಛೇರಿ,
ಅದ ಕಟ್ಟಲು ಸಿಮೆಂಟು
ಅದಕ್ಕೆ ಮತ್ತೊಂದು ಕಾರ್ಖಾನೆ,
ಅದರಿಂದ ಮತ್ತಷ್ಟು ಹೊಗೆ!

ತನ್ನಷ್ಟಕ್ಕೆ ಉರುಳುವ ಬದುಕು,
ಆಗಸದಲ್ಲಿ ತೇಲುವ ಮೋಡ,
ಅಂಗಳದಲ್ಲಿ ಆಡುವ ಮಗು,
ಇಳಿಜಾರಿನಲ್ಲುರುಳುವ ಚೆಂಡು,

- ಇದನೆಲ್ಲ ವಿವರಿಸಲೊಬ್ಬ ಕವಿ,
ಅವನಿಗೊಂದು ಕವಿತೆ,
ಕವಿತೆ ಬರೆಯಲೊಂದು ಪೆನ್ನು,
ಅದಕ್ಕಿಷ್ಟು ಮಸಿ,
ಮಸಿಗೊಂದು ಕುಪ್ಪಿ....
ತಲೆ ಕೆಟ್ಟ ಕಬ್ಬಿಗ,
ಅದ ಓದಲೊಬ್ಬ ಓದುಗ
-ಇದನೆಲ್ಲ ಬರೆಯಲು ನನಗೊಂದು ಬ್ಲಾಗು,
ಕುಕ್ಕಲೊಂದು ಕೀ ಬೋರ್ಡು,
ಕೂರಲೊಂದು ಕೋಣೆ ಅದ ಕಟ್ಟಲು ಸಿಮೆಂಟು
ಅದಕ್ಕೊಂದು ಕಾರ್ಖಾನೆ
ಅದರಿಂದಷ್ಟು ಹೊಗೆ , ನನಗೊಳ್ಳೆ ಹುಚ್ಚು?