Sep 29, 2012

ಅತಿ ಸಣ್ಣ ಕಥೆಗಳು

ಜೀವನ

ಒಂದು  ಮನೆಯಲ್ಲಿ ಮುಂಜಾನೆ ಬೇಗನೆ ಶ್ರಾದ್ಧ ನಡೆಸಿ , ಮತ್ತೊಂದು ಮನೆಯಲ್ಲಿ ಮಗುವಿನ ನಾಮಕರಣ ನಡೆಸಲು ಮೊಪೆಡ್ ನಲ್ಲಿ ಅವಸರವಸರದಲ್ಲಿ ಹೋಗುತ್ತಿದ್ದ ಪುರೋಹಿತರೊಬ್ಬರು ರಸ್ತೆ ಅಪಘಾತದಲ್ಲಿ ಮೃತರಾದರು. ಜೀವನದ ನಶ್ವರತೆ ಸಾಯುವ ಕೆಲವೇ ಕ್ಷಣಗಳ ಹಿಂದೆ ಅರಿವಾಗಿ ಅವರು ಮನದಲ್ಲೇ ನಕ್ಕರು. ಅವರ ಮಕ್ಕಳು ನಶ್ವರ ಜೀವನಗಳನ್ನು ಮುಂದುವರೆಸಿದರು.

ಬಲಿ

ಕೆಲ ವರ್ಷಗಳ ಹಿಂದೆ ದೀಪಾವಳಿಯ ಸಮಯದಲ್ಲಿ ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಪಾತಾಳದಿಂದೆದ್ದು  ಬಂದ. ರಸ್ತೆ, ಬೀದಿ, ಗಲ್ಲಿಗಳಲ್ಲೆಲ್ಲ ಜನ ಹುಚ್ಚೆದ್ದು ಪಟಾಕಿ ಸಿಡಿಸುತ್ತಿದ್ದರು. ಸದ್ದಿಗೆ ಹೆದರಿ ಪಾತಾಳಕ್ಕೆ ಹಿಂದಿರುಗಿದ ಬಲಿ ಮತ್ತೆಂದೂ ಭೂಮಿಯತ್ತ ತಲೆ ಹಾಕುವ ಸಾಹಸ ಮಾಡಲಿಲ್ಲ. ಪಟಾಕಿ ಸದ್ದಿಗೆ ಬಲಿ ಚಕ್ರವರ್ತಿ ಬಲಿಯಾದದ್ದು ತಿಳಿಯದ ಜನ ಪಟಾಕಿ ಸಿಡಿಸುವುದು ನಿಲ್ಲಿಸಲಿಲ್ಲ.

ಅಳು  

ಜಯಮ್ಮನವರು ತಾಯಿಯ ಶವದ ಮುಂದೆ ಅಳುತ್ತ ಕುಳಿತಿದ್ದರು. ಪಕ್ಕದಲ್ಲೆ ಮತ್ತೆ ಯಾರೋ ಬಿಕ್ಕಳಿಸುವ ದನಿ ಕೇಳಿ, ನೋಡಿದರೆ ಅವರ ಪತಿಯ ಅಣ್ಣನ ಮಗಳು, ಹೈ-ಸ್ಕೂಲು ಹುಡುಗಿ. ಜಯಮ್ಮ ತಮ್ಮ ಅಳು ಮರೆತರು, ಆ ಹುಡುಗಿಯ ತಾಯಿ ಸತ್ತದ್ದು ಹಿಂದಿನ ವರ್ಷವಷ್ಟೆ. ಅವಳ ಅಳು ಸದ್ಯಕ್ಕೆ ನಿಲ್ಲುವಂಥದ್ದಾಗಿರಲಿಲ್ಲ.

 






No comments:

Post a Comment