Nov 17, 2017

ಅಪೂರ್ಣ ಕಥೆ

ನಮ್ಮ ಊರಿನಲ್ಲಿ ಕಥೆ ಹೇಳುವವನೊಬ್ಬನಿದ್ದ. ದುಡ್ಡು ಕೊಟ್ಟರೆ ಯಾವ್ಯಾವುದೋ ಕಥೆಗಳನ್ನೆಲ್ಲ ಜೋಡಿಸಿ ಹೊಸ ಕಥೆ ಕಟ್ಟಿ ಹೇಳುತ್ತಿದ್ದ. ಕೆಲವು ಸಲ ಕಥೆಯನ್ನು ಕುತೂಹಲಕಾರಿ ಘಟ್ಟಕ್ಕೆ ತಂದು ನಿಲ್ಲಿಸಿ ರೂಪಾಯಿ ಕೊಟ್ಟರೆ ಮಾತ್ರ ಮುಂದುವರೆಸುತ್ತಿದ್ದ.

ಸಣ್ಣಂದಿನಲ್ಲಿ ನಾನು ಕೈಯಲ್ಲಿ ಸ್ವಲ್ಪ ದುಡ್ಡು ಸೇರಿದಾಗ ಹೋಗಿ ಇವನ ಕಥೆ ಕೇಳುತ್ತಿದ್ದೆ. ಎಷ್ಟೋ ಸಲ ದುಡ್ಡು ಖಾಲಿಯಾಗಿ ಅರ್ಧ ಕಥೆ ಕೇಳಿ ವಾಪಾಸು ಬರುತ್ತಿದ್ದೆ. ಒಮ್ಮೆ ಅವನು ಒಂದು ಕಥೆ ಶುರು ಮಾಡಿದ :

"ಒಂದಾನೊಂದು ಕಾಲದಲ್ಲಿ ಒಬ್ಬ ಇದ್ದ. ಅವನ ಊರಿನಲ್ಲಿ ಎಲ್ಲರೂ ಅರ್ಥವಿಲ್ಲದ ಮಾತಾಡುತ್ತಿದ್ದರು.  ಗುರಿಯಿಲ್ಲದೆ ಬದುಕುತ್ತಿದ್ದರು. ಎಷ್ಟೋ ಜನ ಏನನ್ನೂ ಮಾಡದೆ ಸುಮ್ಮನೆ ಕುಳಿತಿರುತ್ತಿದ್ದರು. ಈ ಜನರ ರೀತಿ ಅವನಿಗೆ ಬೇಸರ ತರಿಸಿತು. ಅವನು ಆ ಊರನ್ನು ಬಿಟ್ಟು ನಡೆದ. ನಡೆಯುತ್ತಾ ಒಂದು ಹೊಸ ಊರನ್ನು ತಲುಪಿದ. ಈ ಊರಿನಲ್ಲಿ ಎಲ್ಲರೂ ತುಂಬ ಅರ್ಥವತ್ತಾಗಿ ಮಾತಾಡುತ್ತಿದ್ದರು. ಎಲ್ಲರೂ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಿದ್ದರು. ಸೋಮಾರಿತನ ಯಾರಲ್ಲೂ ಇರಲಿಲ್ಲ. ಅವನು ಆ ಊರಲ್ಲೇ ಉಳಿದ. ಆ ಊರು ಅವನಿಗೆ ಬದುಕಲ್ಲೊಂದು ಗುರಿಯನ್ನು ಕಲಿಸಿತು. ಆ ಊರಿನಲ್ಲಿ ಎಲ್ಲರೂ ಎಲ್ಲರನ್ನೂ ಪೂರ್ತಿಯಾಗಿ ಅರ್ಥ ಮಾಡಿಕೊಂಡಿದ್ದರು. ಎಲ್ಲರೂ ಎಲ್ಲರಿಗೂ ಬಹಳ ಮರ್ಯಾದೆ ಕೊಟ್ಟು ಮಾತಾಡುತ್ತಿದ್ದರು. ಬದುಕಿಗೆ ಯಾವುದೋ ಒಂದು ಉದ್ದೇಶ ಇರುವಂತೆಯೂ, ಪ್ರತಿಯೊಬ್ಬರೂ ಒಂದು ಮಹತ್ತರವಾದ ಕಾರಣದ ಸಣ್ಣದೊಂದು ಭಾಗವನ್ನಾದರೂ ಪೂರ್ತಿ ಮಾಡುವುದಕ್ಕಾಗಿಯೇ ಪ್ರಪಂಚದಲ್ಲಿ ಹುಟ್ಟಿರುವುದಾಗಿಯೂ ಅವನು ನಂಬಿದ. ಎಷ್ಟೋ ವರ್ಷ ಇದು ನಡೆಯಿತು. ಆದರೆ ಕೊನೆಗೊಂದು ದಿನ ಅವನಿಗೆ ಅರ್ಥವತ್ತಾದ ಬದುಕು ನಿರರ್ಥಕ ಅನ್ನಿಸಿತು. ಅರ್ಥವಿರುವುದೆಲ್ಲವೂ ಭಾರ ಅನ್ನಿಸಿತು, ಬಂಧನ ಅನ್ನಿಸಿತು."

ಇಷ್ಟಕ್ಕೆ ನಿಲ್ಲಿಸಿ, "ಕಾಸು ಕೊಡು.", ಎಂದ. ನನ್ನಲ್ಲಿ ದುಡ್ಡು ಖಾಲಿಯಾಗಿತ್ತು. ಅವತ್ತು ಅವನು ಹೇಳಿದ ಅಪೂರ್ಣ ಕಥೆಯ ಅಂತ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಮನೆಗೆ ನಡೆದೆ. ಇದಾದ ಬಳಿಕ ನಾನು ನನ್ನ ಓದು ಮುಗಿಸುವುದರಲ್ಲಿ ಮತ್ತು ಒಂದು ಉದ್ಯೋಗ ದೊರಕಿಸಿಕೊಳ್ಳುವುದರಲ್ಲಿ ಕಳೆದು ಹೋದೆ. ಉದ್ಯೋಗಕ್ಕಾಗಿ ಊರು ಬಿಟ್ಟೆ. ಊರಿಗೆ ಯಾವತ್ತಾದರೂ ಹೋದಾಗಲೂ ಕಥೆ ಕೇಳಲು ಪುರುಸೊತ್ತಿರುತ್ತಿರಲಿಲ್ಲ. ನಾನು ಆ ಅಪೂರ್ಣ ಕಥೆಯನ್ನು ಮರೆತೆ.

***

ಮತ್ತೆ ಯಾವತ್ತೋ ಆ ಕಥೆ ನನ್ನನ್ನು ಕಾಡತೊಡಗಿತು. ಅರ್ಥವಿರುವುದೆಲ್ಲವೂ ಭಾರವೆಂದನ್ನಿಸಿದವನು ಮುಂದೇನು ಮಾಡಿರಬಹುದು? ಮತ್ತೆ ತನ್ನ ಊರಿಗೆ ವಾಪಾಸು ಹೋಗಿರಬಹುದೇ? ಆ ಊರಿನ ಜನ ಇವನು ವಾಪಾಸು ಹೋದಾಗಲೂ ಹಾಗೆಯೇ ಅರ್ಥವಿಲ್ಲದ ಮಾತಾಡಿಕೊಂಡು ಬದುಕುತ್ತಿದ್ದಿರಬಹುದೇ?

ನಾನು ಊರಿಗೆ ಹೋದಾಗ, ವಾಪಾಸು ಹೊರಡುವ ಸಂಜೆ ಕಥೆ ಹೇಳುವವನ ಮನೆಗೆ ಹೋದೆ. ಈಗ ನನ್ನ ಕೈತುಂಬ ಹಣ ಇತ್ತು. ಕಥೆ ಪೂರ್ತಿಯಾಗುವವರೆಗೂ ರೂಪಾಯಿ ಕೊಡಲು ತಯಾರಿದ್ದೆ. ಆದರೆ ರಾತ್ರಿ ನಾನು ಹೊರಡಲಿದ್ದ ಬಸ್ಸನ್ನು ತಪ್ಪಿಸಿಕೊಳ್ಳುವ ಹಾಗಿರಲಿಲ್ಲ. ಹಾಗಾಗಿ ಬೇಗ ಬೇಗ ಕಥೆ ಹೇಳಿ ಮುಗಿಸು ಅನ್ನಬೇಕು ಅಂದುಕೊಂಡು ಅವನ ಮನೆಯ ಒಳಗೆ ನಡೆದೆ.

ಅವನು ಹಾಸಿಗೆ ಹಿಡಿದಿದ್ದ. ಏನೋ ಖಾಯಿಲೆ ಹಿಡಿದು ನಿತ್ರಾಣವಾಗಿದ್ದ. ಅವನಿಗೆ ನನ್ನ ಗುರುತು ಹತ್ತಲಿಲ್ಲ. ನನಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಆದರೂ ಒಮ್ಮೆ ಪ್ರಯತ್ನಿಸೋಣವೆಂದು ಅವನಿಗೆ ಆ ಅಪೂರ್ಣ ಕಥೆಯನ್ನು ನೆನಪಿಸಿ ಅದನ್ನು ಪೂರ್ತಿ ಮಾಡಲು ಕೇಳಿಕೊಂಡೆ. " ನನಗೆ ಹೆಚ್ಚು ಸಮಯವಿಲ್ಲ. ಸ್ವಲ್ಪ ಬೇಗ ಬೇಗ ಹೇಳಿದರೆ ಒಳ್ಳೆಯದಿತ್ತು.", ಎಂದೆ.

ಅದಕ್ಕೆ ಅವನು, "ನನಗೂ ಹೆಚ್ಚು ಸಮಯವಿಲ್ಲ.", ಎಂದು ನಕ್ಕ. " ಕಾಸು ಕೊಡು.", ಎಂದು ಕೈ ಚಾಚಿದ. ನಾನು ನೂರು ರೂಪಾಯಿ ಇಟ್ಟೆ.

"ಅರ್ಥವಿರುವುದೆಲ್ಲವೂ ಭಾರ, ಬಂಧನ ಅನ್ನಿಸಿದ ಮೇಲೆ ಅವನು ಆ ಊರನ್ನೂ ಬಿಟ್ಟು ನಡೆದ. ನಡೆಯುತ್ತಾ ಒಂದು ಹೊಸ ಊರು ತಲುಪಿದ. ಈ ಊರಿನಲ್ಲಿ ಮಾತಾಡುವವರೇ ಕಡಿಮೆ ಇದ್ದರು. ಕೆಲವೇ ಕೆಲವು ಜನ ಮಾತಾಡಿದರೆ ಉಳಿದವರು ಅದಕ್ಕೆ ಪ್ರತಿಕ್ರಿಯಿಸದೆ ತಮ್ಮ ಕೆಲಸ ಮಾಡಿಕೊಂಡಿರುತ್ತಿದ್ದರು. ಅವನು ಆ ಊರಲ್ಲಿ ಉಳಿದ. ಅರ್ಥವೇ ಇರದ ಮಾತಾಡತೊಡಗಿದ. ಅವನಿಗೆ ಮನಸ್ಸು ಹಗುರವಾಯಿತು. ಸ್ವಾತಂತ್ರ್ಯ ಸಿಕ್ಕಂತೆ ಅನ್ನಿಸಿತು. ಎಲ್ಲ ಬಂಧನವೂ ಕಳಚಿದಂತೆ ಅನ್ನಿಸಿತು.

" ಅವನ ಮಾತು ಕೇಳಿಸಿಕೊಂಡ ಕೆಲವರು ಅವನು ಬಹಳ ಗೂಢವಾದದ್ದೇನನ್ನೋ ಹೇಳುತ್ತಿದ್ದಾನೆ ಎಂದುಕೊಂಡರು. ಅವನ ಮಾತಲ್ಲಿ ಏನೋ ರಹಸ್ಯವಿರಬೇಕು ಅಂದುಕೊಂಡ ಜನ ಅವನನ್ನು ಒಬ್ಬ ದಾರ್ಶನಿಕ ಎಂದು ಕೊಂಡಾಡಿದರು. ಅವನ ಮಾತಿಗೆ ಒಬ್ಬೊಬ್ಬರು ಒಂದೊಂದು ಅರ್ಥ ಹಚ್ಚಿ ಹೇಳಿದರು. ಅವನ ಮಾತಿಗೆ ಸಾವಿರಾರು ಅರ್ಥಗಳು ಬಂದದ್ದರಿಂದ ಅವನಿಗೂ ಸಂತೋಷವೇ ಆಯಿತು."

ಇಷ್ಟಕ್ಕೆ ನಿಲ್ಲಿಸಿ, "ಕಾಸು ಕೊಡು.", ಎಂದ.

ನಾನು ಐನೂರು ರೂಪಾಯಿ ಇಟ್ಟು, " ಬೇಗ ಹೇಳು. ಸಮಯ ಇಲ್ಲ.", ಎಂದೆ.

ಅವನು, "ಒಮ್ಮೆ ಆ ಊರಿಗೊಬ್ಬ ಹೊಸಬ ಬಂದ. ಬಂದವನು ಅರ್ಥವಿರದ ಮಾತಾಡುತ್ತಿದ್ದ ಇವನ ಮಾತು ಕೇಳಿಸಿಕೊಂಡು ಅದನ್ನೆಲ್ಲ ಎಳೆಯೆಳೆಯಾಗಿ ಬಿಡಿಸಿಟ್ಟ. ಇದಕ್ಕೆ ಇಷ್ಟೇ ಅರ್ಥ, ಇದು ಅರ್ಥವಿಲ್ಲದ್ದು ಎಂದೆಲ್ಲ ವಿಂಗಡಿಸಿ ವಿವರಿಸಿದ. ಇವನು ಎಷ್ಟೇ ಅರ್ಥದ ಸರಹದ್ದು ಮೀರಲು ನೋಡಿದರೂ, ಅವನು ಇವನನ್ನು ಎಳೆದು ತಂದು ಅರ್ಥದ ವ್ಯಾಪ್ತಿಯಲ್ಲಿ ಕಟ್ಟಿ ಹಾಕಿದ. ಕೊನೆಗೆ ಜನರು ಇವನ ಮಾತು ಕೇಳಿಸಿಕೊಳ್ಳುವುದು ನಿಲ್ಲಿಸಿ ಬರೀ ಅವನು ಕೊಡುವ ಟಿಪ್ಪಣಿಯನ್ನಷ್ಟೇ ಕೇಳಿಸಿಕೊಳ್ಳತೊಡಗಿದರು.

" ನೀನೇ ಹೇಳು, ಈಗವನು ಏನು ಮಾಡಬೇಕು?"

ಅವನು ಕೇಳದಿದ್ದರೂ ಸಾವಿರ ರೂಪಾಯಿಯನ್ನು ಅವನ ಕೈಯಲ್ಲಿಟ್ಟು, ಕೈಗಡಿಯಾರ ನೋಡಿಕೊಳ್ಳುತ್ತಾ, "ಹೆಚ್ಚು ಸಮಯ ಇಲ್ಲ. ಬೇಗ ಮುಗಿಸು.", ಎಂದೆ. ಜೇಬಿನಲ್ಲಿ ಇನ್ನೂ ರೂಪಾಯಿ ಇತ್ತು.

ದುಡ್ಡು ಹಿಡಿದ ಅವನ ಕೈ ವಾಲಿತು. ಅವನ ಸಮಯವೇ ಮುಗಿದಿತ್ತು. ಅಪೂರ್ಣ ಕಥೆಯ ಅಂತ್ಯದ ಬಗ್ಗೆ ಯೋಚಿಸಿದೆ. ಕಥೆ ಹೇಳುತ್ತಾ ಅವನು ಸತ್ತದ್ದರಿಂದ ಕಥೆಗೆ ಗಹನವಾದ ಅರ್ಥವೇನೋ ಇರಬೇಕೆಂದು ಭಾಸವಾಗಿ ಆ ಅರ್ಥ ನನ್ನ ಬಳಿ ಬರದೆ ಸತಾಯಿಸುತ್ತಾ ದೂರ ದೂರ ಓಡಿದಂತೆ ಅನ್ನಿಸಿ, ಏನು ಮಾಡುವುದೆಂದು ಅರ್ಥವಾಗದೆ ನಾನು ಅವನ ನಿರ್ಜೀವ ಕಂಗಳನ್ನೇ ದಿಟ್ಟಿಸುತ್ತಾ ನಿಂತೆ.

***

Jun 10, 2017

ಇಂದು ಬೆಳಿಗ್ಗೆ

ಬೋಳು ರಸ್ತೆಯಲ್ಲಿ ಸೈಕಲ್ಲು ತುಳಿಯುತ್ತ ಬಂದ ಪೇಪರಿನವನು, ರಾಕೆಟ್ಟು ಉಡಾಯಿಸಿದ ಸುದ್ದಿ ಹೊತ್ತ ಪತ್ರಿಕೆಯನ್ನು ಮೊದಲನೆ ಮಹಡಿಗೆ ಉಡಾಯಿಸಿ ಮತ್ತೆ ಸೈಕಲ್ಲು ತುಳಿಯುತ್ತ ಹೊರಟ.

ರಸ್ತೆಯ ತುದಿಯಲ್ಲಿ ಪ್ರತ್ಯಕ್ಷನಾದ ಅಜ್ಜನ ಚಡ್ಡಿ ಬಹುಷಃ ಮೊಮ್ಮಗನದ್ದಿರಬೇಕು. ತಲೆಗೆ ಹಾಕಿದ ಮಂಕಿ-ಕ್ಯಾಪಿನ ಮೇಲೆ ದುಬಾರಿ ಹೆಡ್-ಫೋನ್ ಸಿಕ್ಕಿಸಿಕೊಂಡಿದ್ದಾನೆ - ಹಾಡು ಕೇಳಲಿಕ್ಕೋ? ಗಾಳಿ ತಡೆಯಲಿಕ್ಕೋ?

ಮನೆಗೆ ಬೂದು ಬಣ್ಣದ ಪೈಂಟು ಬಳಿದು ಬ್ರಶ್ಶು ಕ್ಲೀನು ಮಾಡಿದವನ ದಯೆಯಿಂದ ಸಂಪಿಗೆ ಮರವೂ ಬೂದು ಚಡ್ಡಿಯ ಯೂನಿಫಾರ್ಮು ಧರಿಸಿದೆ.

ಅಟ್ಟಹಾಸದಿಂದ ಗುಡುಗುತ್ತಾ ಹೊರಟ ಪಕ್ಕದ ಬೀದಿಯವನ ಎನ್ಫೀಲ್ಡಿನ ಜೋರಿಗೆ ಹೆದರಿದ ನೆರೆಮನೆಯವನ ಮಾರುತಿ ಎಂದಿನಂತೆ ತನ್ನ ಒಡೆಯನಿಗೆ ಮೊರೆಯಿಟ್ಟಿತು.

ಹೊಸ ದಿನವೊಂದು ಉದಯಿಸಿತು. ಹೊಸ ತಲೆನೋವು, ಹೊಸ ಖುಷಿ, ಹೊಸದೇ ಬೇಜಾರುಗಳನ್ನು ಸರಬರಾಜು ಮಾಡಲು ರವಿ ತಾನು ಖುದ್ದಾಗಿ ನಮ್ಮ ಬಡಾವಣೆಗೆ ಬಂದ. 

Apr 29, 2017

ಮಂಪರು ಮತ್ತು ಎಚ್ಚರ

ಕೋಣೆಯಲ್ಲಿ ಮಂದ ಬೆಳಕಿತ್ತು. ನಾನು ಮಲಗಿದ್ದೆ. ಅರ್ಧ ಎಚ್ಚರದಲ್ಲಿದ್ದೆ. ವರ್ಷ ತುಂಬದ ನನ್ನ ಮಗ ಇವತ್ತೇಕೋ ಬೇಗನೆ ಎಚ್ಚರವಾಗಿ ಹಾಸಿಗೆಯ ತುಂಬ ಹೊರಳಾಡುತ್ತಿದ್ದ. ಅವನ ಹೊರಳಾಟದಲ್ಲಿ ಆಗಾಗ ನನಗೆ ಗುದ್ದುತ್ತಿದ್ದ. ಅವನು ಗುದ್ದಿದಾಗೆಲ್ಲ ನನ್ನ ಮಂಪರು ಸ್ವಲ್ಪ ಕಡಿಮೆಯಾಗುತ್ತಿತ್ತು. ಅವನು ಅತ್ತ ಹೋಗುತ್ತಿದ್ದಂತೆ ಮಂಪರು ಮತ್ತೆ ಆವರಿಸುತ್ತಿತ್ತು. ಮಂಪರು ಮೂಡುತ್ತಿದ್ದಂತೆ ನನಗೆ ಇದರಲ್ಲೆಲ್ಲ ಯಾವುದೋ ಒಂದು ಕಥೆ ಇರುವಂತೆ ಅನ್ನಿಸತೊಡಗಿತು. ಅದೇನಿರಬಹುದೆಂದು ಯೋಚಿಸಲು ಎಚ್ಚರವಾದರೆ ಆ ಕಥೆ ಮಾಯವಾಗುತ್ತಿತ್ತು. ಆ ಕಥೆ ಬೆಳಗಿನ ಜಾವದ ಇಬ್ಬನಿಯಂತೆ ನನ್ನ ಕಣ್ಣಲ್ಲೇ ಕುಳಿತಂತೆಯೂ, ಕಣ್ಣು ಬಿಟ್ಟರೆ ಬೆಳಕಿನ ಬಿಸಿಗೆ ಅದು ಆವಿಯಾದಂತೆಯೂ ಮಂಪರಿನಲ್ಲಿ ನನಗೆ ಭಾಸವಾಗುತ್ತಿತ್ತು. ನಾನು ಕಣ್ಣು ಮುಚ್ಚಿದಾಗ ಇಲ್ಲೊಂದು ಹೊಸ ಲೋಕವೇ ಸೃಷ್ಟಿಯಾಗಿ, ಕಣ್ಣು ಬಿಟ್ಟ ಕ್ಷಣ ಅದು ನಾಶವಾದಂತೆಯೂ ಅನ್ನಿಸಿತು. ಮಂಪರಿನಲ್ಲಿ ಅದು ಇದ್ದಂತೆ ಅನ್ನಿಸಿ ಎಚ್ಚರದಲ್ಲಿ ಮಾಯವಾಗಿ ಸತಾಯಿಸುತ್ತಿತ್ತು. ಈ ಎಚ್ಚರ ಮತ್ತು ಮಂಪರಿನ ನಡುವಿನ ಯಾವ ಅವಸ್ಥೆಯಲ್ಲಿ ಆ ಕಥೆಯನ್ನು ಹಿಡಿದುಹಾಕಬಹುದೆಂದು ನನ್ನ ಮನಸ್ಸು ಚಿಂತಿಸುತ್ತಿತ್ತು. ನನ್ನ ಮಗ ಹೊರಳಾಡುತ್ತಾ ಬಂದು ನನ್ನ ದವಡೆಗೆ ಒಮ್ಮೆ ಗುದ್ದಿದ. ನಾನು ಏನೋ ಬಯ್ದುಕೊಳ್ಳುತ್ತಾ ಕಣ್ಣು ಬಿಟ್ಟೆ. ಕಥೆ ಮತ್ತೆ ಸುಟ್ಟು ಆವಿಯಾಯಿತು. ನನ್ನ ಮಗ ನಗುತ್ತಾ ಮಗ್ಗುಲಾದ.

Apr 28, 2017

ಮಾಸ್ ವರ್ಸಸ್ ಕ್ಲಾಸ್

'ಲುಟೇರಾ' ಮತ್ತು 'ಚೆನ್ನೈ ಎಕ್ಸ್‌ಪ್ರೆಸ್‌' ಬಿಡುಗಡೆಯಾದಾಗ ಕೆಲವರು ಲುಟೇರಾ‌ ಬೋರಿಂಗ್ ಸಿನಿಮಾ ಎಂದೂ ಚೆನ್ನೈ ಎಕ್ಸ್‌ಪ್ರೆಸ್‌ ತುಂಬಾ ಮಜವಾಗಿದೆಯೆಂದೂ ಹೇಳಿದಾಗ ನನಗೆ ತುಂಬಾ ಸಿಟ್ಟು ಬಂದಿತ್ತು. ಚೆನ್ನೈ ಎಕ್ಸ್‌ಪ್ರೆಸ್‌ ಸಿನಿಮಾ ಅಲ್ಲ, ಹಳೆಯ ದರಿದ್ರ ಜೋಕುಗಳ ಸಂಗ್ರಹವೆಂದು ನಾನು ಹೇಳಿದ್ದೆ. ಆಗಲೇ ಫೇಸ್‌ಬುಕ್ಕಿನಲ್ಲಿ ಎರಡೂ ಸಿನಿಮಾವನ್ನು ಹೋಲಿಸಿ ತುಂಬ ದುಃಖದ ಒಂದು ಪೋಸ್ಟ್ ಹಾಕಿದ್ದೆ 😀 ನಿಜಕ್ಕೂ ಎಲ್ಲೆಡೆ ಮಾಸ್ ವರ್ಸಸ್ ಕ್ಲಾಸಿನ ಯುದ್ಧ ನಡೆಯುತ್ತಿದೆಯೆಂದು ನಾನು ತಿಳಿದುಕೊಂಡಿದ್ದೆ.

ಈಚೆಗೆ ನಾನು ಬಾಲಿವುಡ್ ನಿರ್ದೇಶಕರ ಕೆಲವು ಹಳೆಯ ಸಂದರ್ಶನಗಳನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಯಾವ ವಿಕ್ರಮಾದಿತ್ಯ ಮೊಟ್ವಾನೆಗೆ ಯಾವ ರೋಹಿತ್ ಶೆಟ್ಟಿಯಿಂದ ಅನ್ಯಾಯವಾಗುತ್ತಿದೆಯೆಂದು ನಾನು ತಿಳಿದುಕೊಂಡಿದ್ದೆನೋ, ಅದೇ ವಿಕ್ರಮಾದಿತ್ಯ ಮೊಟ್ವಾನೆ ಅದೇ ರೋಹಿತ್ ಶೆಟ್ಟಿಯ ಪಕ್ಕ ಕುಳಿತು ತಣ್ಣಗೆ ಹೇಳುತ್ತಾನೆ - 'ಯಾವ ಸಿನಿಮಾ ಕೂಡ ಸುಮ್ಮಸುಮ್ಮನೆ ಗೆಲ್ಲುವುದಿಲ್ಲ. ಒಂದು ಸಿನಿಮಾ ಹಣ ಮಾಡಿದೆಯೆಂದರೆ ಅದರಲ್ಲೇನೋ ಸರಿಯಿದೆಯೆಂದೇ ಅರ್ಥ.' ನನ್ನದು ಉತ್ತಮ ಕಥೆ, ಆದರೂ ಗೆಲ್ಲಲಿಲ್ಲ; ಈ ಮನುಷ್ಯ ಕೆಟ್ಟ ಸಿನಿಮಾ ಮಾಡಿದ್ದರೂ ದೊಡ್ಡ ಹೆಸರು ಮಾಡಿದ - ಎಂಬ ಯಾವ ಸಿಟ್ಟೂ ವಿಕ್ರಮಾದಿತ್ಯನಲ್ಲಿ ಇಲ್ಲ. ವಾಸ್ತವವನ್ನು ತುಂಬ ಸುಲಭವಾಗಿ ಒಪ್ಪಿಕೊಂಡಿದ್ದಾನೆ.

ನಾನು ಮತ್ತೂ ಕೆಲವು ಸಂದರ್ಶನಗಳನ್ನು ನೋಡಿದೆ. ಬಾಲಿವುಡ್ಡಿನ ಗಂಭೀರ ನಿರ್ದೇಶಕರೆಲ್ಲರದ್ದೂ ಒಂದೇ ಅಭಿಪ್ರಾಯ - 'ಯಾವತ್ತೂ ಈ ರೀತಿಯೇ ನಡೆಯುತ್ತದೆ. ಮಸಾಲೆ ಸಿನಿಮಾಗಳು ಹಣ ಮಾಡುತ್ತವೆ. ಅದು ಹಣ ಮಾಡಿದರೆ ಒಳ್ಳೆಯದೇ. ಅಲ್ಲಿ ಹುಟ್ಟುವ ಹಣದಿಂದಲೇ ಗಂಭೀರ ಸಿನಿಮಾಗಳನ್ನು ಮಾಡಲು ಬೇಕಾದ ಬಂಡವಾಳ ಹುಟ್ಟುವುದು. ಒಂದು ಸಿನಿಮಾ ದುಡ್ಡು ಮಾಡಿದರೆ ಅದು ನಮ್ಮ ಉದ್ಯಮ ಲಾಭದಲ್ಲಿ ನಡೆಯುತ್ತಿದೆಯೆಂಬುದರ ಸೂಚನೆ. ಅದು ಖುಷಿಯ ವಿಷಯ.'

ಅಂದರೆ ಈ ಕ್ಲಾಸ್ ವರ್ಸಸ್ ಮಾಸ್ ಎಂಬ ಪರಿಕಲ್ಪನೆ ಬೇಕಾಗಿಲ್ಲ. ಒಂದರ ಹಣವನ್ನು ಇನ್ನೊಂದು ಕಿತ್ತುಕೊಳ್ಳುತ್ತಿದೆಯೆಂದೇನೂ ಇಲ್ಲ. ಎಲ್ಲ ರೀತಿಯ ಸಿನಿಮಾಗಳಿಗೂ ಇಲ್ಲಿ ಅವಕಾಶವಿದೆ. ಲುಟೇರಾ ರೀತಿಯ ಸಿನಿಮಾ ಯಾವತ್ತೂ ಚೆನ್ನೈ ಎಕ್ಸ್‌ಪ್ರೆಸ್ ಮಾಡಿದಷ್ಟು ಲಾಭ ಮಾಡಲು ಸಾಧ್ಯವಿಲ್ಲ. ಇದೆರಡರ 'ಟಾರ್ಗೆಟ್‌ ಆಡಿಯನ್ಸ್' ಬೇರೆ ಬೇರೆ. ಈ ಸತ್ಯಗಳೆಲ್ಲ ಅಲ್ಲಿನ ನಿರ್ದೇಶಕರಿಗೆ ಪೂರ್ತಿ ಮನವರಿಕೆಯಾಗಿದೆ. ಹಾಗಾಗಿ ಅವರ ಶಕ್ತಿಯೆಲ್ಲವೂ ತಮಗೆ ಹೇಳಲಿರುವ ಕಥೆಯನ್ನು ಚೆನ್ನಾಗಿ ಹೇಳಲು ಪ್ರಯತ್ನಿಸುವುದಕ್ಕೆ ಖರ್ಚಾಗುತ್ತದೆ. ಈ ಕೆಲಸಕ್ಕೆ ಬಾರದ ಮಾಸ್-ಕ್ಲಾಸಿನ ಯುದ್ಧಗಳಲ್ಲಿ ಅದು ವ್ಯಯವಾಗುವುದಿಲ್ಲ.

ನಿರ್ದೇಶಕ ದಿನಕರ್ ಬ್ಯಾನರ್ಜಿ ಹೇಳುತ್ತಾನೆ - 'ಸಿನಿಮಾ ನೋಡಲು ಬರುವ ಹೆಚ್ಚಿನ ಮಂದಿ ನಿಜ ಬದುಕಿನ ತಲೆನೋವುಗಳಿಂದ ಬಚಾವಾಗಲು ಬರುತ್ತಾರೆ. ಅದು ಅವರಿಗೆ ಎಸ್ಕೇಪ್. ಇವತ್ತಿನ ಭಾರತದಲ್ಲಿ ಈ ರೀತಿಯದೊಂದು ಎಸ್ಕೇಪ್ ನಮಗೆ ಬೇಕು. ಆದರೆ ನೂರರಲ್ಲಿ ಹತ್ತು-ಹನ್ನೆರಡರಷ್ಟು ಗಂಭೀರ ಸಿನಿಮಾಗಳು ಬರಬೇಕು. ಈ ಸಿನಿಮಾಗಳು ಬೇರೆ ಸಿನಿಮಾಗಳು ಹೇಳದ ಕಹಿ ಸತ್ಯಗಳನ್ನು ಹೇಳಬೇಕು. ನೋಡುವವನನ್ನು ಯೋಚಿಸುವಂತೆ ಮಾಡಬೇಕು.' ಹೌದು, ಮನುಷ್ಯನಿಗೆ ವಾಸ್ತವದಿಂದ ಬಚಾವಾಗಲು ಮಸಾಲೆ ಸಿನಿಮಾಗಳು ಬೇಕು. ಬದುಕಿನ ವಾಸ್ತವದಿಂದ ಈಗಾಗಲೇ ಬೇಜಾರಾದವನಿಗೆ ಸಿನಿಮಾದಲ್ಲಿ ಮತ್ತೂ ಕಹಿ ಸತ್ಯಗಳು, ಬೇಸರಗಳು, ಭಾರಿ ತತ್ವಗಳನ್ನು ಬಡಿಸಿದರೆ ಅವನ ಮನಸ್ಸು ಹಗುರವಾಗುವುದಾದರೂ ಹೇಗೆ!

ಹಾಗಾಗಿ ಈ ಸತ್ಯವನ್ನು ಒಪ್ಪಿಕೊಳ್ಳುವುದೇ ಸರಿ - ಮಸಾಲೆ ಸಿನಿಮಾಗಳು ಹೆಚ್ಚು ಹಣ ಮಾಡುತ್ತವೆ. ಮಸಾಲೆ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತವೆ. ಸೂಪರ್ ಸ್ಟಾರುಗಳು ಮಸಾಲೆ ಸಿನಿಮಾಗಳನ್ನು ಮಾಡುತ್ತಾರೆ. ಇದರಲ್ಲಿ ಏನೂ ತಪ್ಪಿಲ್ಲ.

ಕನ್ನಡ ಚಿತ್ರರಂಗದಲ್ಲಿ ಈಗಲೂ ಈ ಸತ್ಯಗಳನ್ನು ಒಪ್ಪಿಕೊಂಡಂತಿಲ್ಲ. ಅನವಶ್ಯವಾಗಿ ಸ್ಟಾರ್ ನಟರನ್ನು ದ್ರೋಹಿಗಳಂತೆ ನಾವು ನೋಡುತ್ತೇವೆ. ನಮಗೆ ನಿಜಕ್ಕೂ ಬೇಕಿರುವುದೇನೆಂದರೆ ನೂರರಲ್ಲಿ ಹತ್ತು ಗಂಭೀರ ಸಿನಿಮಾಗಳನ್ನು ಮಾಡುವ ನಿರ್ದೇಶಕರು. ಮತ್ತು ಸಿನಿಮಾ ಉದ್ಯಮವೂ ಹೌದು, ಕಲೆಯೂ ಹೌದು ಎಂಬುದನ್ನು ತಿಳಿದ ನಿರ್ಮಾಪಕರು. ಲಾಭಕ್ಕಾಗಿ ಮಾಡುವ ಸಿನಿಮಾ ಯಾವುದು, ಕಲೆಗಾಗಿ ಮಾಡುವ ಸಿನಿಮಾ ಯಾವುದೆಂಬುದನ್ನು ಅರಿತ ಜಾಣ ಉದ್ಯಮ ನಮಗೆ ಬೇಕಿರುವುದು. ಹಾಗೆಯೇ ಯಾವ ಸಿನಿಮಾದಿಂದ ಏನನ್ನು ಎದುರುನೋಡಬೇಕೆಂಬುದನ್ನು ಅರಿತ ಜಾಣ ಪ್ರೇಕ್ಷಕ. ಹಾಗೆ ಅವನು ಅಂದಾಜು ಹಾಕಲು ಬೇಕಾಗುವ ಎಲ್ಲ ಮಾಹಿತಿಯೂ ಸಿನಿಮಾದ ಪ್ರಚಾರಕ್ಕೆ ಬಳಸುವ ಟ್ರೈಲರ್, ಹಾಡು ಇತ್ಯಾದಿಗಳಿಂದ ಹಾಗೂ ತಂಡದ ಮಾತುಗಳಿಂದ ಅವನಿಗೆ ಸಿಗಬೇಕು. ಇಷ್ಟನ್ನು ಸರಿಯಾಗಿ ಮಾಡಿದರೆ ಮಾಸ್-ಕ್ಲಾಸಿನ ಈ ನಕಲಿ ಯುದ್ಧದಿಂದ ಎಲ್ಲರೂ ಬಚಾವಾಗಬಹುದು. ಇದೀಗ ಚಿತ್ರರಂಗವನ್ನು ಬದಲಿಸಿಯೇ ಬಿಡುತ್ತೇನೆ ಎಂಬ ಪೊಳ್ಳು ಅಹಂಕಾರದಿಂದ ಸಿನಿಮಾ ಮಾಡಬೇಕಾಗಿ ಬರುವುದಿಲ್ಲ. ಮತ್ತು ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ಕನ್ನಡ ಸಿನಿಮಾವನ್ನು ಉಳಿಸಿ, ಬೆಳೆಸಿ ಎಂಬ ಹಳಸಲು ಮಾತುಗಳನ್ನು ಕೇಳಬೇಕಾಗಿ ಬರುವುದೂ ಇಲ್ಲ.

(ಇಲ್ಲಿನ ಸತ್ಯಗಳು ಬೇರೆಯಿರಬಹುದು, ಇದೆಲ್ಲ ತುಂಬ ಕಷ್ಟವಿರಬಹುದು. ಆದರೆ ಒಬ್ಬ ವೀಕ್ಷಕನಾಗಿ ಇದು ನನ್ನ ಅಭಿಪ್ರಾಯ.)