Showing posts with label ಕವಿತೆ. Show all posts
Showing posts with label ಕವಿತೆ. Show all posts

Apr 19, 2008

ಕೊರತೆ

ಸುರಿವ ಮಳೆಯಲ್ಲಿ
ಎಷ್ಟು ದೂರ ನಡೆದರೂ
ಮನಸ್ಸು ತಂಪಾಗಲಿಲ್ಲ!

ಕೋಣೆಯ ತುಂಬಾ
ಜಗಮಗಿಸುವ ಬೆಳಕಿದ್ದರೂ
ಕತ್ತಲು ದೂರಾಗಲಿಲ್ಲ!

ಪಟದ ಮೇಲೆ
ಎಷ್ಟು ಬಣ್ಣ ಬಳಿದರೂ
ಚಿತ್ರ ಏಕೋ ಮೂಡುತ್ತಿಲ್ಲ!

ಶಬ್ದ ಹುಡುಕಿ
ಎಷ್ಟು ಸಾಲು ಗೀಚಿದರೂ
ಈ ಕವಿತೆ ಪೂರ್ಣವಾಗುವುದಿಲ್ಲ!

Mar 27, 2008

ದನಿ

ಸುತ್ತ ಬಡಬಡಿಸುವ
ಹತ್ತು ಜನ,
ಒಳದನಿ
ಸತ್ತು
ಸ್ಮಶಾನ ಮೌನ!

Mar 13, 2008

ಕತ್ತಲು

ಕತ್ತಲು ತುಂಬಿದ
ಈ ಬಾಳಿನಲ್ಲಿ
ಮೂಡೀತೆ ಎಂದಾದರೂ ಬೆಳಕು?
ಮುಕ್ತಿ ಕಂಡೀತೆ ಈ ನನ್ನ ಬದುಕು?

ಬಂದೀತೆ ಸುಧಾವರ್ಷ,
ಆದೀತೇ ಅರುಣ ಸ್ಪರ್ಶ,
ಬರಬಹುದೇ ಬೆಳಕು
ಕತ್ತಲ ರಾಡಿಯೊಳಗೆ?
------- ಎಂದು ಚಿಂತಿಸುವ ಬದಲು
ಮೋಂಬತ್ತಿ ಉರಿಸಲೇನು
ಧಾಡಿ ನಿಮಗೆ??

Mar 9, 2008

ಈಗೀಗ...

ಈಗೀಗ ನನಗೆ ಅತ್ತಾಗ ಕಣ್ಣೀರು ಬರುವುದಿಲ್ಲ,
ಎಷ್ಟು ಅತ್ತರೂ ದುಃಖ ಇಳಿಯುತ್ತಿಲ್ಲ,
ದುಃಖ ಒತ್ತರಿಸಿ ಬಂದಾಗಲೂ ನಾನು ಬಿಕ್ಕಳಿಸುವುದಿಲ್ಲ!

ಈಗೀಗ ನನಗೆ ಮಾತಾಡಲು ದನಿಯೇ ಹೊರಡುತ್ತಿಲ್ಲ,
ಹೊರಟ ದನಿಗೆ ಉಸಿರು ಜೊತೆ ಕೊಡುತ್ತಿಲ್ಲ,
ಕೊರಳು ಹಿಂಡಿದವರು ಯಾರೆಂದು ನಾನು ಯೋಚಿಸುವುದಿಲ್ಲ!

ಈಗೀಗ ಸಂಜೆ ಹೊತ್ತು ತಂಗಾಳಿ ಬೀಸುತ್ತಿಲ್ಲ,
ಬಿಸಿಲ ಬೇಗೆ ಏಕೋ ಏನೋ ಇಳಿಯುತ್ತಿಲ್ಲ,
ಬೆಳದಿಂಗಳು ಮೂಡಬಹುದೆಂಬ ಆಸೆಯೇ ನನಗಿಲ್ಲ!

ಈಗೀಗ ಯಾವ ಕರೆಗಂಟೆಗೂ ನಾನು ಉತ್ತರಿಸುತ್ತಿಲ್ಲ,
ಎಷ್ಟು ತಟ್ಟಿದರೂ ಮುಚ್ಚಿದ ಬಾಗಿಲು ತೆರೆಯುವುದಿಲ್ಲ,
ಬಾಗಿಲು ತೆರೆದರೆ ಬೆಳಕು ಬರಬಹುದೆಂದು ನನಗನ್ನಿಸುವುದಿಲ್ಲ!

ಈಗೀಗ ನನ್ನ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕುತ್ತಿಲ್ಲ,
ಪ್ರಪಂಚದ ಹಾಳು ರಗಳೆ ನನರ್ಥವಾಗುವುದಿಲ್ಲ,
ಅರ್ಥಾನರ್ಥಗಳ ಸಂತೆಯಲ್ಲಿ ನನಗೆ ನಾನೇ ಕಾಣುತ್ತಿಲ್ಲ!

Feb 24, 2008

ಆಗಬೇಕು

ಶುದ್ದವಾಗಬೇಕು
ಒಳಗಿನಿಂದ
ಗಟ್ಟಿಯಾಗಬೇಕು
ಅಣು ಅಣುವಿನಿಂದ
ದ್ವೇಷ ತ್ಯಜಿಸಬೇಕು
ಮನದಿಂದ
ಸಾಮಾನ್ಯನಾಗಬೇಕು,
ಬೀದಿ ನಾಯಿಯಂತೆ,

ಮತ್ತೆ ಬೆಳೆಯಬೇಕು
ತೆಂಗಿನ ಮರದಂತೆ
ಸುತ್ತ ಸಾವಿರಗರಿ ಚಾಚಿ
ಈ ವ್ಯಂಗ್ಯನುಡಿ
ಚುಚ್ಚು ಮಾತುಗಳ
ಸಿಡಿಲಿಗಂಜದೆ, ಕಾಲದೆಲ್ಲೆ ಮೀರಿ
ಸೂರ್ಯನಂತೆ ಬೆಳಕಾಗಿ!


ನಾನು

ನಾನೆಂದರೆ ಮೂಲತಃ ಒಬ್ಬ ಉಗ್ರಗಾಮಿ,
ಉಗ್ರ ಭಾವನೆಗಳೆಲ್ಲ ನನ್ನಲ್ಲಿ ಅಂತರ್ಗಾಮಿ!
ಮಹಾತ್ಮನ ಸೋಗು ಹಾಕಿ
ಸಹವರ್ತಿಗಳಿಂದ 'ಗಾಂಧಿ' ಎನಿಸಿಕೊಂಡವನ
ಒಳಗಿನ 'ಗಂಧಿ ' ಭಾವನೆಗಳು
ಕೇವಲ ನನಗಷ್ಟೆ ಗೊತ್ತು!

Feb 17, 2008

ಬೆಳಕು

ಅವನು ಅರವತ್ತರ ಮುದುಕ,
ಸಂಜೆಗತ್ತಲಲ್ಲಿ ವಾಕಿಂಗ್ ಹೊರಟಿದ್ದ
ನಾ ಕೆಲಸ ಮುಗಿಸಿ ಹೊರಟಿದ್ದೆ ಮನೆ ಕಡೆಗೆ,

ಅವ ನಕ್ಕ, ನಾ ನಗದೇ ಕೇಳಿದೆ,
"ಹೊರಟೆ ಎಲ್ಲಿಗೆ?"
ಅವ ಹೇಳಿದ,
"ನಾ ನಡೆವೆ ಕತ್ತಲೆಯೆಡೆಗೆ
ನೀ ಮನೆಯತ್ತ ನಡೆ, ಅದುವೆ ಸರಿ
ಬೆಳಕಿದೆಯಲ್ಲಿ, ಬೆಳಕು ಸಾಕೆನಿಸಿತೆನಗೆ
ಹೊರಟೆ, ಹೊರಟೆ ನೀ ಹುಟ್ಟಿದಲ್ಲಿಗೆ !"

ಅವನ ಮಾತು, ನನಗರ್ಥವಾಗಲಿಲ್ಲ,
ಆಯಿತೆ ನಿಮಗೆ?


ಸಮಸ್ಯೆ

ಏನೆಂದು ಹೇಳಲಾಗದು, ಏನೋ ದ್ವಂದ್ವ
ಸಿದ್ಧಾಂತಗಳೆಲ್ಲ ಸಿಕ್ಕಾಗಿ ಕಂಡದ್ದು ಪ್ರಶ್ನಾರ್ಥಕ ಚಿಹ್ನೆ!

ಮನಸೆಂಬುದು ಮುದುಡಿದ ತಾವರೆಯಂತಾದಾಗ
ಕಂಡದ್ದಕ್ಕೆಲ್ಲ ಸಹಸ್ರ ವಿಪರೀತಾರ್ಥ!

ಅರಳದೆ ಮೂಲೆ ಸೇರುವ ಮನಸ್ಸು
ಸಿಟ್ಟು ಬರಿಸುತ್ತದೆ ಕೆಲವೊಮ್ಮೆ,
ಮತ್ತೊಮ್ಮೆ ಏಕಾಂತಪ್ರಿಯತೆಯ ಬಗ್ಗೆ ಅಹಂಕಾರ, ಗರ್ವ, ಹೆಮ್ಮೆ!

ಪ್ರಪಂಚದ ಸಮಸ್ಯೆಗಳಿಗೆಲ್ಲ ಪರಿಹಾರ ಬಯಸುವ ಮನಸ್ಸು
ಏಕೋ ಕೆಲವೊಮ್ಮೆ ತಾನೆ ಸಮಸ್ಯೆಯಾಗಿ ಬಿಡುತ್ತದೆ!

ಸೂತ್ರ

ಸಾವಿಲ್ಲದ ಸಾವೇ ನಿನ್ನ ಸಾವು ಕಂಡವರುಂಟೆ?
ಕಂಡವ ಸಾಯದಿರುವುದುಂಟೆ?
ಸಾವು, ಸಾವು, ಸಾವು, ನಾವೆಲ್ಲ ಸಾಯುವೆವು!

ಸತ್ತ ನಂತರ ಜೀವವಿಲ್ಲ, ಬರಿಯ ದೇಹ ಮಾತ್ರ
ಸಾಯುವ ಮೊದಲಿತ್ತು, ಸತ್ತ ನಂತರವಿಲ್ಲ, ಅರ್ಥವಾಗದ ಸೂತ್ರ!

ಕತ್ತಲು

ಕಣ್ಣು ಮುಚ್ಚಲು
ಜಗತ್ತೇ ಕತ್ತಲು, ಕಪ್ಪು
ಆದರೆ ಬೆಳಕೆ ಸುಳ್ಳು ಎಂದರೆ
ಅದು ನಿನ್ನ ತಪ್ಪು!

ಕವಿತೆ

ಬಡತನದ ಮೇಲೆ ಭಾಷಣ ಬಿಗಿಯುತ್ತಾರಂತೆ,
ವಿದೇಶಿ ಮದ್ಯ ಹೀರುತ್ತಾ ಅಭಿಪ್ರಾಯ ವ್ಯಕ್ತ ಪಡಿಸುತ್ತಾರಂತೆ
ವರದಿಗಾರರು ಸಂಪಾದಿಸುತ್ತಾರೆ ಕಂತೆ ಕಂತೆ,
ಪ್ರಪಂಚವೆಂಬುದು ಸಮಯ ಸಾಧಕರ ಸಂತೆ!

ಹೊಟ್ಟೆಗಿಲ್ಲದವನ ಚಿತ್ರಕ್ಕೆ ಪ್ರಥಮ ಬಹುಮಾನ
ಚಿತ್ರ ಬರೆದವನಿಗೆ ಪ್ರಶಸ್ತಿ, ಸನ್ಮಾನ
ಹಸಿವಿನಿಂದ ನರಳಿದವನ ಬಾಯಿಗಿಷ್ಟು ಮಣ್ಣು,
ಅವನ ನೋವು ಕಾಣಲು ಯಾರಿಗು ಇಲ್ಲ ಕಣ್ಣು!

ಮನುಷ್ಯನ ಕಾಲಡಿ ನೆಲ, ತಲೆ ಮೇಲೆ ಬಾನು
ಕವಿತೆ ಕವಿಗಾಯಿತು, ಬಡವನ ಹೊಟ್ಟೆಗೇನು?
----ಎಂದೆಲ್ಲ ಬರೆದ ನಾನು,
ಕೊನೆಗೆ ಮಾಡಿದ್ದೇನು?



ದೈವ

ದೈವ ಬೇಕಿರುವುದು
ವರ್ಷ ವರ್ಷದ ಜಾತ್ರೆಗೆ
ತೀರ್ಥ ಕ್ಷೇತ್ರದ ಯಾತ್ರೆಗೆ

ಯೋಗಿಗೆ ದೈವ ಬೇಡ,

ಬೇಕು ಅವನು ಭೋಗಿಗೆ!
ನಮ್ಮ ಮನೋರೋಗಿಗೆ,

ಧರ್ಮಾತ್ಮನ ಸೋಗಿಗೆ
ಮತ್ತೆ ಬಡ ಬ್ರಾಹ್ಮಣನಿಗೆ
ದೇವಾಲಯ ಸಮಿತಿಗೆ!

Feb 16, 2008

ದೈವಕ್ಕೆ

ಲೋಕವೆಲ್ಲ ನಾನೇ ನಾನು
ಕುಳಿತಿರುವೆ ಎಲ್ಲಿ ನೀನು?

ನಾನೆಂಬುದು ಸುಳ್ಳು ಎಂದವರು ಯಾರು?
ನೀನು, ಅವನು, ಲೋಕವೆಲ್ಲ ನನ್ನಿಂದಲೇ ಶುರು !

ಕಣ್ಣಿಗೆ ಕಾಣದ ದೈವ ನೀನು ಧೂಳಿಗಿಂತ ಕೀಳೆ?
ವೇದ, ಗೀತೆ, ಮಂತ್ರ ಪಠಿಸಲು ನನಗಿಲ್ಲ ವೇಳೆ!

ನಿನ್ನ ಅರಿಯಲಿಕ್ಕೆ ನಿನ್ನ ಮೀರಬೇಕು
ಮನದಲ್ಲಿ ಭಕ್ತಿ ಬೇಡ , ಶೌಚವೊಂದೆ ಸಾಕು!

ತೇಪು

ದುಷ್ಟ ಮನವ ಮುಚ್ಚಲು ದುಬಾರಿ ಸೂಟು
ಕತ್ತಿಗೆ ಟೈ, ಕಾಲಿಗೆ ಸಾಕ್ಸ್, ಬೂಟು
ಮನದಲ್ಲಿ ದ್ವೇಷ, ಸೇಡಿನ ಕತ್ತಿ, ಚೂಪು
ಒಳಗೆ ಕೊಳಕು, ಹೊರಗೆ ಸಜ್ಜನಿಕೆಯ ತೇಪು.

ಗಾಂಧಿಗೆ

ನಿನ್ನ ಮರಣದ ದಿವಸ
ಹೂವು ಅರಳಲೇ ಇಲ್ಲ
ಕಡಲು ಮೊರೆಯಲೇ ಇಲ್ಲ
ಮಳೆಯು ಹನಿಯಲೇ ಇಲ್ಲ

ನಿನ್ನ ಮರಣದ ಬಳಿಕ
ನಾವು ನಗುವುದೇ ಇಲ್ಲ
ಸುಳ್ಳು ಬೊಗಳುವುದಿಲ್ಲ
ಮನದಲ್ಲಿ ಶಾಂತಿ ಮಮತೆ
ಎದೆಯಲ್ಲಿ ಸ್ನೇಹದ ಹಣತೆ

---- ಎಂದೆಲ್ಲ ಇವರು ಹೇಳಿದ್ದು
ನಿನ್ನಾಣೆಗೂ ನಿಜವಲ್ಲ!!

ನನ್ನ ಕವಿತೆ

ಆಗಸದಲ್ಲಿ ಹಾರುವುದು ಹದ್ದು
ಅಂಗಡಿಯಲ್ಲಿ ಸಿಗುವುದು ಉದ್ದು
ಕವಿತೆ ಬರೆಯುವೆ ನಾನು ಬೇರೆಯವರಿಂದ ಕದ್ದು
ಓದಿ ಸುಮ್ಮನಿರಿ, ಮಾಡದಿರಿ ಸದ್ದು!

ಪ್ಯಾಪಿಯ ಪತಂಗ | Pyapiya Patanga

ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...