Aug 8, 2009

ಯಾತನೆಗೆ ಮುಗುಳ್ನಗು ಬರಲು...


"ಗಾಳಿಪಟ" ಸಿನೆಮಾದಲ್ಲಿ "ಒಂದೇ ಸಮನೆ ನಿಟ್ಟುಸಿರು" ಎಂದು ತೊಡಗುವ ಒಂದು ಹಾಡಿದೆ. ಒಂದು ರೀತಿಯ ವಿಚಿತ್ರ ಪ್ರತಿಮೆಗಳಿಂದಾಗಿ ಈ ಹಾಡು ಇಷ್ಟವಾಗುತ್ತದೆ. ಸಾಧಾರಣವಾಗಿ "ಕಾಮನಬಿಲ್ಲು, "ಕನಸಿನ ಬಣ್ಣ", "ಅಮೃತ", "ಹೊಂಗನಸು" ಮುಂತಾದ ಶಬ್ದಗಳು ಉತ್ಸಾಹ, ಪ್ರೇಮ, ಸಂತೋಷ ಮುಂತಾದ ಭಾವಗಳನ್ನು ಹುಟ್ಟಿಸಲು ಬಳಕೆಯಾಗುತ್ತವೆ. ಆದರೆ ಈ ಹಾಡಿನಲ್ಲಿ ಇದೆ ಪದಗಳನ್ನುಪಯೋಗಿಸಿ ದುಃಖ, ವಿರಹಗಳನ್ನು ಚಿತ್ರಿಸಲಾಗಿದೆ.
"ಕರಗುತಿದೆ ಕನಸಿನ ಬಣ್ಣ", "ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು", "ಜೀವ ಕಳೆವ ಅಮೃತ", "ಪ್ರಾಣ ಉಳಿಸೋ ಖಾಯಿಲೆ", "ಮುಳ್ಳಿನ ಹಾಸಿಗೆ", "ಯಾತನೆಗೆ ಮುಗುಳ್ನಗೆ", "ನಗುತಲಿದೆ ಮಡಿದ ಕವನ" - ಇಂಥ ವಿಚಿತ್ರ ಪದ ಪ್ರಯೋಗದಿಂದ ಒಂದು ರೀತಿಯ ವಿಚಿತ್ರ ಭಾವ ಸೃಷ್ಟಿಸಿದ್ದಾರೆ ಕವಿ. ಈ ವಿಚಿತ್ರ ಪ್ರತಿಮೆಗಳಿಂದಾಗಿ ಈ ಹಾಡು ಕುತೂಹಲ ಮೂಡಿಸುತ್ತದೆ.

ಹಾಡಿನ ಕೊನೆಯಲ್ಲಿ, "ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆ? ಮೂರು ಸ್ವರದ ಹಾಡಿನಲ್ಲಿ ಹೃದಯವನು ಹರಿ ಬಿಡಬಹುದೇ?" ಎಂಬ ಪ್ರಶ್ನೆಯಿದೆ. ಇದು ಒಂದು ರೀತಿಯಲ್ಲಿ ಕವಿಯ "ಸೆಲ್ಫ್ ಡೌಟ್" ಎಂದನ್ನಿಸುತ್ತದೆ. ಈ ಹಾಡಿನಲ್ಲಿ ನಿಜವಾಗಿಯು ನೋವನ್ನು ಚಿತ್ರಿಸಿದ್ದೇನೋ ಅಥವಾ ವ್ಯರ್ಥ ಪದಗಳಲ್ಲಿ ಕಳೆದು ಹೋಗಿದ್ದೇನೋ - ಎಂಬ ಕವಿಯ ಸಂದೇಹ ಇಲ್ಲಿ ಕಾಣುತ್ತದೆ. ಇದೇ ಪ್ರಶ್ನೆ ಕೇಳುಗನಲ್ಲಿ ಮೂರು ಭಾವಗಳನ್ನು ಹುಟ್ಟು ಹಾಕಬಹುದು :
೧. ಸಾಧ್ಯವಿದೆಯೇ ಎಂಬ ಪ್ರಶ್ನೆ.
೨. ಸಾಧ್ಯವಿಲ್ಲ ಎಂಬ ನಿರ್ಧಾರ.
೩. ಸಾಧ್ಯವಿರಬಹುದು ಎಂಬ ಭಾವ.

ಮೇಲಿನ ಮೂರೂ ಭಾವಗಳಲ್ಲಿ ಅಲೆದಾಡಿ ಕೊನೆಯಲ್ಲಿ ಮತ್ತೆ ಪ್ರಶ್ನೆಯಾಗಿ ಉಳಿಯುತ್ತದೆ.
ಒಂದು ಸಾಧಾರಣ ವಿರಹ ಗೀತೆಗೆ ಇಷ್ಟೆಲ್ಲಾ ಭಾವ ಹುಟ್ಟಿಸುವ ಶಕ್ತಿ ಇದೆಯಲ್ಲ ಎಂದು ಆಶ್ಚರ್ಯವಾಗುತ್ತದೆ!

No comments:

Post a Comment

ಪ್ಯಾಪಿಯ ಪತಂಗ | Pyapiya Patanga

ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...