Nothing
Aug 22, 2023
Jul 14, 2023
ಕಾಜೂ ಬಿಸ್ಕೆಟ್ - ನನ್ನ ಮೊದಲ ಪುಸ್ತಕ
May 8, 2019
ನನ್ನೊಳಗಿನ ಮಳೆ
ಮೂರನೆಯ ತರಗತಿಯಲ್ಲಿದ್ದಾಗೊಮ್ಮೆ ಜೋರು ಮಳೆ ಸುರಿಯುತ್ತಿದ್ದಾಗ ನನಗೆ ಒಮ್ಮೆಗೆ ದೇವರ ಜೊತೆ ನೇರವಾಗಿ ಮಾತಾಡಬೇಕೆಂದು ಅನ್ನಿಸಿತು. ನಾನು ದೇವರಲ್ಲಿ, 'ಈ ಮಳೆ, ಗುಡುಗು, ಸಿಡಿಲು - ಏನು ಇದೆಲ್ಲ?', ಎಂದು ಬಹಳ ಗಂಭೀರವಾದ ಪ್ರಶ್ನೆಗಳನ್ನು ದೇವರ ಮುಂದಿಟ್ಟೆ. ದೇವರು ಉತ್ತರಿಸಲಿಲ್ಲ. ತುಂಬ ಹೊತ್ತು ಈ ಸಂವಾದ ನಡೆಯಿತು. ಕೊನೆಗೆ ಯಾರೋ ನಕ್ಕದ್ದು ಕೇಳಿಸಿ ತಿರುಗಿ ನೋಡಿದರೆ ಅಮ್ಮ ನನ್ನ ಹುಚ್ಚಾಟವನ್ನು ನೋಡಿ ಕೊನೆಗೊಮ್ಮೆ ತಡೆಯಲಾಗದೆ ನಕ್ಕು ಬಿಟ್ಟಿದ್ದರು. ಇದರಿಂದಾಗಿ ದೇವರು ಪ್ರತ್ಯಕ್ಷವಾಗಿ ನನ್ನ ಜಟಿಲ ಪ್ರಶ್ನೆಗಳಿಗೆಲ್ಲ ಉತ್ತರಿಸುವುದು ಸ್ವಲ್ಪದರಲ್ಲೇ ತಪ್ಪಿ ಹೋಯಿತು!
ನಮ್ಮ ಊರಿನಲ್ಲಿ ಮಳೆ ಜೋರು. ಒಂದಿಪ್ಪತ್ತು ವರ್ಷ ಹಿಂದೆ ಇನ್ನೂ ಜೋರಿತ್ತು. ಕೆಲವು ಸಲ ಶುರು ಹಚ್ಚಿಕೊಂಡರೆ ದಿವಸಗಟ್ಟಲೆ ಮಳೆ ಸುರಿಯುತ್ತಲೇ ಇರುತ್ತಿತ್ತು. ಒದ್ದೆ ಬಟ್ಟೆಯನ್ನು ಬಚ್ಚಲಿನ ಒಲೆಯ ಬೆಂಕಿಯ ಬಿಸಿಯಲ್ಲಿ ಒಣಗಿಸಿಕೊಂಡು ಶಾಲೆಗೆ ಹೋಗುತ್ತಿದ್ದದ್ದು ನೆನಪು. ಆ ಬಟ್ಟೆಯಲ್ಲಿ ಹೊಗೆಯ ವಾಸನೆಯೂ ಅಲ್ಲದ, ಪರಿಮಳವೂ ಅಲ್ಲದ ಒಂದು ವಾಸನೆ ಬೆರೆತಿರುತ್ತಿತ್ತು! ಶಾಲೆಗೆ ನಾವು ನಡೆದುಕೊಂಡು ಹೋಗುತ್ತಿದ್ದೆವು. ಗದ್ದೆಯ ಕಾಲುದಾರಿಯೊಂದಿತ್ತು. ಒಮ್ಮೆ ಕುಂಭದ್ರೋಣ ಮಳೆ ಎಂದೇ ಕರೆಯಬಹುದಾದ ಮಳೆ ಹೊಡೆದಾಗ ಗದ್ದೆಯೆಲ್ಲ ನೀರಲ್ಲಿ ಮುಳುಗಿ ಮಕ್ಕಳಾದ ನಮ್ಮ ಮಂಡಿಯವರೆಗೆ ನೀರು ಬಂದು ಬಿಟ್ಟಿತ್ತು. ದಾರಿಯೇ ಗೊತ್ತಾಗದಷ್ಟು ನೀರು! ಜಲಪ್ರಳಯವಾದರೆ ಹಾಗೆಯೇ ಇರಬಹುದು ಸ್ಥಿತಿ ಎಂದು ಅದು ನೆನಪಾದಾಗಲೆಲ್ಲ ಅನ್ನಿಸುತ್ತದೆ.
ಚಿಕ್ಕವನಿದ್ದಾಗ ಮಳೆಯಲ್ಲಿ ಕೊಡೆ ಹಿಡಿದುಕೊಂಡು ನಡೆಯುತ್ತಾ ನನ್ನದೇ ಪ್ರಪಂಚದಲ್ಲಿ ಕಳೆದುಹೋಗುವುದು ನನಗೆ ಇಷ್ಟವಾದ ಕೆಲಸವಾಗಿತ್ತು. ಕೊಡೆಯ ಮೇಲೆ ಬೀಳುವ ಮಳೆಹನಿಯ ರಪರಪ ಸದ್ದು ಆಲೋಚನೆಗಳಿಗೊಂದು ಹಿನ್ನೆಲೆ ಸಂಗೀತ ಒದಗಿಸಿ ಬೇರೆ ಸದ್ದುಗಳನ್ನೆಲ್ಲ ನುಂಗಿ ಹಾಕುತ್ತಿತ್ತು. ಆ ಸದ್ದಿನ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ, ಮನಸಲ್ಲಿ ಏನೇನೋ ಆಲೋಚಿಸುತ್ತಾ ನಡೆಯುವುದರಲ್ಲಿ ಒಳ್ಳೆ ಮಜಾ ಇತ್ತು!
ಮುಂದೆ ನಾನು ಬೆಳೆದಂತೆಲ್ಲ ನಮ್ಮ ಊರಿನಲ್ಲಿ ಮಳೆ ಕಡಿಮೆಯಾಗುತ್ತಾ ಹೋಯಿತು ಎಂದನ್ನಿಸುತ್ತದೆ. ಮಳೆಯೂ ನನಗೆ ಅಭ್ಯಾಸವಾಗಿ ಹೋಯಿತು, ಅದರ ಬಗ್ಗೆ ಇದ್ದ ಬೆರಗು ಕಡಿಮೆಯಾಗುತ್ತಾ ಹೋಯಿತು. ಸುಳಿವೇ ಕೊಡದೆ ಮಳೆ ಬಂದಾಗ ಒದ್ದೆಯಾಗುವ ಲೆದರ್ ಶೂಸುಗಳನ್ನು ಹಾಳಾಗದಂತೆ ಕಾಪಾಡಿಕೊಳ್ಳುವ, ಮಳೆ ಬರಬಹುದು ಎಂದನ್ನಿಸಿದ ದಿನ ಉದ್ದನೆಯ 'ಗನ್ ಬೂಟು'ಗಳನ್ನು ಹಾಕಿಕೊಂಡು ಹೋಗುವ ತಲೆಬಿಸಿಗಳು ಅಂಟಿಕೊಂಡವು.
ನಾನು ಹೈಸ್ಕೂಲಿನಲ್ಲಿ ಓದುತ್ತಿರುವಾಗ ಮನೆಗೆ 'ಕರೆಂಟು' ಬಂತು. ಇದಾದ ಬಳಿಕ ಮಳೆ ಬರುವ ಹಾಗಿದ್ದರೆ, 'ಅಯ್ಯೋ, ಕರೆಂಟು ಹೋಗಿಬಿಡುತ್ತೆ.', ಎಂಬ ಭಯ ಶುರುವಾಯಿತು. ಈ ಭಯ ಇವತ್ತಿಗೂ ಮುಂದುವರೆದಿದೆ. ಅದೂ ನಮ್ಮ ಊರಿನಲ್ಲಂತೂ ಜೋರಾಗಿ ಒಮ್ಮೆ ಗಾಳಿ ಬೀಸಿದರೆ ಸಾಕು, ಮುನ್ನೆಚ್ಚರಿಕೆ ಕ್ರಮವಾಗಿ ಪವರ್ ತೆಗೆದು ಬಿಡುತ್ತಾರೆ. ದಿವಸಗಟ್ಟಲೆ ಬರದೆ ಇರುವುದೂ ಇದೆ. ಹೀಗೆ ಮಳೆಯ ಬೆರಗಿಗಿಂತ ವಾಸ್ತವದ ಕಿರಿಕಿರಿಗಳ ಬಗ್ಗೆ ಮನಸ್ಸು ಹೆಚ್ಚು ಯೋಚಿಸುತ್ತಿದೆ ಎಂದರಿವಾಗುವಷ್ಟರಲ್ಲಿ ಬಾಲ್ಯ ಕಳೆದುಬಿಟ್ಟಿರುತ್ತದೆ.
ಮುಂದೆ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ನಾನು ಬೆಂಗಳೂರಿಗೆ ಪ್ರಾಜೆಕ್ಟ್ ಕೆಲಸಕ್ಕೆಂದು ಬಂದೆ. ಬೆಂಗಳೂರಿನ ಮಳೆ ನನಗೆ ಬಹಳ ಹಿಡಿಸಿಬಿಟ್ಟಿತ್ತು. ಥಟ್ಟನೆ ಬಂದು ಹೆಚ್ಚು ತೊಂದರೆ ಕೊಡದೆ ಹೋಗಿಬಿಡುವ ಮಳೆ! ಒಣಗಲು ಹಾಕಿದ ಬಟ್ಟೆಯನ್ನೂ ಒದ್ದೆ ಮಾಡದೆ ಹೋಗುವ ಶಿಷ್ಟ ಮಳೆ. ನಗರದ ಮಂದಿಯಷ್ಟೇ ಶಿಸ್ತು ಕಲಿತ ಮಳೆ - ಎಂದೆಲ್ಲ ಅಂದುಕೊಂಡಿದ್ದೆ. ಆದರೆ ಮುಂದೆ ಓದು ಮುಗಿಸಿ ಇಲ್ಲೇ ಕೆಲಸ ಹಿಡಿದ ಮೇಲೆ ಇಷ್ಟೇ ಇಷ್ಟು ಮಳೆಯನ್ನೂ ತಡೆದುಕೊಳ್ಳಲು ಸಾಧ್ಯವಾಗದ ಹಾಗೆ ನಮ್ಮ ನಗರಗಳನ್ನು ಕಟ್ಟಿದ್ದಾರೆ ಎಂದು ಗೊತ್ತಾಯಿತು! ನಾನು ಬೆಂಗಳೂರಿಗೆ ಬಂದ ವರ್ಷವೇ ಸಿಲ್ಕ್ ಬೋರ್ಡಿನ ಬಳಿ ರಸ್ತೆಯಲ್ಲೆಲ್ಲ ನೀರು ಸೇರಿಕೊಂಡು ಆಫೀಸುಗಳಿಗೆ ಹೋಗುವವರೆಲ್ಲ ಎರಡು-ಮೂರು ದಿನ ಪಡಬಾರದ ತೊಂದರೆ ಪಟ್ಟಿದ್ದೆವು. ಅದರ ನಡುವೆಯೂ ನಾನು ಖುಷಿ ಪಡುವ ವಿಷಯವೊಂದಿತ್ತು - ಏನೇ ವಿದ್ಯೆಯನ್ನು ಕಲಿತಿದ್ದರೂ, ಸದ್ಯ ಮನುಷ್ಯ ಇನ್ನೂ ಪ್ರಕೃತಿಯನ್ನು ಜಯಿಸಿಲ್ಲ!
ಶುರುವಿನಲ್ಲಿ ಆಫೀಸಿಗೆ ಕೊಡೆ ತೆಗೆದುಕೊಂಡು ಹೋಗುವ ಅಭ್ಯಾಸ ನನಗಿರಲಿಲ್ಲ. ಒಂದೆರಡು ಸಲ ತೆಗೆದುಕೊಂಡು ಹೋಗಿ, ಕೊಡೆ ಇರದ ದಿನ ಮಳೆ ಬಂದದ್ದರಿಂದ ರೋಸಿ ಹೋಗಿ ಕೊಡೆ ತೆಗೆದುಕೊಂಡು ಹೋಗುವುದನ್ನೇ ನಿಲ್ಲಿಸಿದ್ದೆ. ಸಂಜೆ ಮಳೆ ಬಂದರೆ ಮಳೆಯಲ್ಲಿ ನೆನೆಯುತ್ತಾ ಮನೆಗೆ ನಡೆಯುವುದು ಅಭ್ಯಾಸವಾಯಿತು. ನಮ್ಮ ಊರಿನಲ್ಲಿ ಬರುವ ಮಳೆಯೇ ಇಲ್ಲೂ ಬರುವಂತೆ, ಆ ಮಳೆಯಲ್ಲಿ ನಾನು ನೆನೆದಂತೆ... ಮಳೆ ಬಂದ ಮರುದಿನ ಗಾಳಿಯಲ್ಲಿ ಬೆರೆತ ಮಣ್ಣಿನ ವಾಸನೆ, ಥೇಟ್ ನಮ್ಮ ಊರಿನ ಹಾಗೆಯೇ! 'ಹೋದ ಜನ್ಮದಲ್ಲಿ ಕಪ್ಪೆ ಆಗಿದ್ನೇನೋ.. ಮಳೆ ಬಂದ್ರೆ ತುಂಬ ಖುಷಿ ಆಗುತ್ತೆ.', ಎಂದು ತಮಾಷೆ ಮಾಡಿಕೊಳ್ಳುತ್ತಿದ್ದೆ. ಮಳೆ ಬಂದ ಮರುದಿನ ತುಂಬ ಫ್ರೆಶ್ ಅನ್ನಿಸುತ್ತಿತ್ತು. ಎಲ್ಲವೂ ಹೊಸದಾಗಿರುವಂತೆ ಅನ್ನಿಸುತ್ತಿತ್ತು. ನಿನ್ನೆಯವರೆಗಿನದ್ದೆಲ್ಲ ಮಳೆಯಲ್ಲಿ ಕೊಚ್ಚಿ ಹೋದ ಹಾಗೆ, ಎಲ್ಲವೂ ಮತ್ತೆ ಹುಟ್ಟಿದ ಹಾಗೆ...!
ಮತ್ತೊಂದಷ್ಟು ವರ್ಷ ಕಳೆದ ಮೇಲೆ ಮಳೆಯ ಬಗ್ಗೆ ಇದ್ದ ಈ ರೋಮಾಂಚನವೂ ಕಡಿಮೆಯಾಗಿ ಮಳೆ ಎಂದರೆ ಟ್ರಾಫಿಕ್ಕು, ಆಫೀಸು ಬಸ್ಸಿನೊಳಗೆ ಕುಳಿತು ಒಗ್ಗಟ್ಟಾಗಿ ಮಳೆಯನ್ನು ಬಯ್ದುಕೊಳ್ಳುವುದಷ್ಟೆ ನೆನಪುಳಿಯುವಂತಾಯಿತು. 'ಇಲ್ಲಿ ಯಾಕೆ ಸುರಿಯುತ್ತದೆ ಹಾಳು ಮಳೆ! ಯಾವುದಾದರೂ ಹಳ್ಳಿಯಲ್ಲಾದರೂ ಸುರಿದರೆ ರೈತರಿಗಾದರೂ ಪ್ರಯೋಜನವಾಗುತ್ತಿತ್ತು.', ಎನ್ನುವ ಕಪಟ ಕಾಳಜಿಯ ಸಿನಿಕತನದ ಮಾತುಗಳು ಅಭ್ಯಾಸವಾಗಿಬಿಟ್ಟಿತು. ಎಷ್ಟೋ ಸಲ ಆಫೀಸಿನಿಂದ ಹೊರಗೆ ಬಂದಾಗಷ್ಟೆ ಮಳೆ ಬಂದು ಹೋಗಿದೆ ಎಂದು ಗೊತ್ತಾಗುವ ಹಾಗಾಯಿತು. 'ಎಲ್ಲೋ ಮಳೆಯಾಗಿದೆ' ಎಂದು ತಂಗಾಳಿಯಿಂದ ಹೇಳಿಸಿಕೊಳ್ಳುವ ಭಾಗ್ಯ ಇಲ್ಲದ, ಮನೆ ತಲುಪಿದಾಗ ಮರುದಿನಕ್ಕೆ ಬೇಕಾದ ಬಟ್ಟೆಗಳು ಒದ್ದೆಯಾಗದೆ ಉಳಿದಿರಲಿ ಎಂಬ ಕೋರಿಕೆಯ ಆಚೆ ಮಳೆಯ ಬಗ್ಗೆ ಬೇರೇನೂ ಅನ್ನಿಸದ ಹಲವಾರು ಜನರಲ್ಲಿ ನಾನೂ ಒಬ್ಬನಾಗಿಬಿಟ್ಟಿದ್ದೇನೆ.
ಈ ಬುದ್ಧಿಯನ್ನು ಮರೆತು ಮತ್ತೆ ಮಳೆಯಲ್ಲಿ ನೆನೆಯಬೇಕಿದೆ. ಮಳೆಯ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಬೇಕು. ಮಳೆಯಲ್ಲಿ ನಡೆಯುತ್ತಾ ನನ್ನದೇ ಪ್ರಪಂಚದಲ್ಲಿ ಕಳೆದುಹೋಗಬೇಕು. ಅಥವಾ ಹೊರಗೆ ಮಳೆ ಸುರಿಯುವಾಗ ಸುಮ್ಮನೆ ಕುಳಿತು ಮಳೆಯನ್ನು ಮನಸಿನೊಳಕ್ಕೆ ತೆಗೆದುಕೊಳ್ಳಬೇಕು. ಮತ್ತೆ ಮಳೆ ನನ್ನೊಳಗೆ ಹುಟ್ಟುಹಾಕುವ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಮಳೆ ಬಂದ ಮರುದಿನ ಕಪ್ಪೆಯ ಹಾಗೆ ಸಂತೋಷ ಪಡುವುದನ್ನು ಮತ್ತೆ ಕಲಿಯಬೇಕು. ಹಳೆಯದೆಲ್ಲವೂ ಮಳೆಯ ಸ್ಪರ್ಶ ಮಾತ್ರದಿಂದ ಹೊಸಜೀವ ಪಡೆದು ನಳನಳಿಸುವುದನ್ನು ನೋಡಬೇಕು. ಮಣ್ಣಿನ ವಾಸನೆ ಇನ್ನೂ ಹಾಗೆಯೇ ಇದೆಯೇ? ನೋಡಬೇಕಿದೆ. ಹಾಗೆಯೇ ಮಳೆ ಸುರಿಯುತ್ತಿರುವಾಗ ಮೂರನೆ ಕ್ಲಾಸಿನ ಮುಗ್ಧನಂತೆ, 'ಈ ಮಳೆ, ಗುಡುಗು, ಮೋಡ, ಗಾಳಿ... ಏನು ಇದೆಲ್ಲ?', ಎಂದು ಬೆರಗಾಗುವುದನ್ನು ನೆನಪಿಸಿಕೊಳ್ಳಬೇಕಿದೆ! ಎಲ್ಲಕ್ಕೂ ಉತ್ತರ ಸಿಕ್ಕವನಂತೆ ನಟಿಸುವುದನ್ನು ನಿಲ್ಲಿಸಿ ನನ್ನೊಳಗಿನ ಮಳೆಯ ಸದ್ದಿಗೆ ಕಿವಿಯಾಗಬೇಕು!
ಕಲ್ಯಾಣ ಮಂಟಪ
ಮುಂಬಾಗಿಲಲ್ಲಿ 'ಸತೀಶ್ weds ಸುಷ್ಮಾ' ಎಂಬ ಶೃಂಗಾರಗೊಂಡ ಫಲಕವಿತ್ತು. ಚೌಲ್ಟ್ರಿ ಪ್ರವೇಶಿಸುವವರಿಗೆ ಪನ್ನೀರು ಚಿಮುಕಿಸಿ, ಪ್ಲಾಸ್ಟಿಲ್ ನಗೆ ನಕ್ಕು, 'ಬನ್ನಿ', ಎಂದು ಸ್ವಾಗತಿಸುತ್ತಿದ್ದ ಯುವತಿ ಇದೇ ಮೊದಲ ಬಾರಿಗೆ ಸೀರೆ ಉಟ್ಟವಳಂತೆ ಕಂಡಳು. ಸ್ವಾಗತಿಸುವ ಕೆಲಸವಾದರೆ, ಸೀರೆ ಉಟ್ಟು ನಡೆದಾಡುವ ಕೆಲಸವಿಲ್ಲವೆಂದು ಅದನ್ನು ವಹಿಸಿಕೊಂಡಂತಿದ್ದಳು. ಒಳ ಹೋಗುತ್ತಿದ್ದಂತೆಯೇ ಹುಡುಗನ ಚಿಕ್ಕಪ್ಪ ನಮಸ್ಕರಿಸುತ್ತಿದ್ದರೆ, ಪಕ್ಕದಲ್ಲಿಯೇ ಹುಡುಗನೊಬ್ಬ ನಿಂತು ಎಲ್ಲರಿಗೂ ಒತ್ತಾಯಿಸಿ ಜ್ಯೂಸ್ ಕುಡಿಸುತ್ತಿದ್ದ.
ಗಂಡು-ಹೆಣ್ಣನ್ನು ಕ್ಯಾಮೆರಾ ಬೆಳಕು ಬೆಂಕಿಯಂತೆ ಸುಡುತ್ತಿತ್ತು. ಹುಡುಗಿ ಪ್ರತಿ ಫೊಟೋಗೂ ಫಳ್ಳನೆ ನಗೆ ಮಿಂಚು ಕೊಡುತ್ತಿದ್ದರೆ ಹುಡುಗನಿಗೆ ನಗು ಬರದೆ ಒದ್ದಾಡಿ ಸಾಕಾಗಿತ್ತು. ನಿಯಮಿತವಾಗಿ ಫೊಟೋಗ್ರಾಫರ್, 'Sir, smile please.', ಎಂದು ಹುಡುಗನನ್ನು ಒತ್ತಾಯಿಸುತ್ತಿದ್ದರೆ, ಅವನಿಗೆ ನಗು ಬರದೆ ಬರೀ ಬೆವರಷ್ಟೆ ಬಂದು ಬೆವರು ಒರೆಸಿ ಸುಸ್ತಾಗಿತ್ತು.
ನೆಂಟರು ಇಷ್ಟರು ಸುಖಾಸೀನರಾಗಿ ಹುಡುಗಿಯ ಸೀರೆ, ಹುಡುಗನ ಉದುರಿದ ಕೂದಲುಗಳ ಬಗ್ಗೆ ಮಾತಾಡುತ್ತಿದ್ದರು. ಹುಡುಗಿಯ ಸೋದರತ್ತೆ, 'ನಮ್ಮ ಕಡೆ ಎಷ್ಟೋ ಒಳ್ಳೆಯ ಹುಡುಗರಿದ್ದರು.', ಎನ್ನುತ್ತಿದ್ದಳು. ಅತ್ತ ಬೇರೆ ಸಾಲಿನಲ್ಲಿ ಹುಡುಗನ ಚಿಕ್ಕಮ್ಮ, 'ನಾನು ತುಂಬ ಒಳ್ಳೆಯ ಹುಡುಗಿಯರ ಫೋಟೋ ತೋರಿಸಿದ್ದೆ. ಎಲ್ಲ reject ಮಾಡಿ ಕಟ್ಕೊಂಡಿರೋ ಹುಡುಗಿ ನೋಡಿ, ಹೀಗಿದ್ದಾಳೆ.', ಎನ್ನುತ್ತಿದ್ದಳು. ಹುಡುಗ-ಹುಡುಗಿಯರು ಇದರ ಪರಿವೆ ಇಲ್ಲದೆ ಫೋಟೋಗಳಿಗೆ smile ಕೊಡುವುದನ್ನು ಮುಂದುವರೆಸಿದ್ದರು.
ಅತ್ತ ಆರ್ಕೆಸ್ಟ್ರಾದವರ ಅಬ್ಬರ ಜೋರಿತ್ತು. ಡಾ| ರಾಜ್ ಕುಮಾರರ ದನಿಯನ್ನು ಅನುಕರಿಸಿ, ಅನುಕರಿಸಿ ತನ್ನದೇ ದನಿಯನ್ನು ಮರೆತು ಹೋದಂತಿದ್ದ ಗಾಯಕ, ಏರುದನಿಯಲ್ಲಿ ಕಿರುಚಿ ಶ್ರೇಯಾ ಘೋಶಾಲಳನ್ನು ಮೀರಿಸಿದೆನೆಂದುಕೊಂಡ ಗಾಯಕಿ, ಮತ್ತು ಇವರ ನಡುವೆ ತಾವೇನು ಕಡಿಮೆ ಎಂದು ಹಿನ್ನೆಲೆ ಸಂಗೀತದ ಹುಡುಗರು. ಇವರೆಲ್ಲರ ದೆಸೆಯಿಂದ ಮದುವೆಗೆ ಬಂದಿದ್ದ ಮಧ್ಯವಯಸ್ಕರು, 'ಊಟ ಮಾಡಿ ಹೋಗೋಣ ಬೇಗ.', ಎಂದು ಮಗ-ಸೊಸೆಯನ್ನು ಒತ್ತಾಯಿಸತೊಡಗಿದ್ದರು.
ಸ್ಟೇಜಿನಲ್ಲಿ ಹುಡುಗಿಯ ಚಿಕ್ಕಪ್ಪನ ಮಗಳು ಮಿರಮಿರನೆ ಮಿಂಚುವ designer ಸೀರೆ ಉಟ್ಟು ಬಂದವರಿಗೆಲ್ಲ ನಮಸ್ಕರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಳು. ಅವಳ ಮನೆಯವರೇ ಅವಳಿಗೆ ಹಾಗೆ ಮಾಡಲು ಹೇಳಿದ್ದರು. ಈಗಾಗಲೇ ಮದುವೆಗೆ ಬಂದಿದ್ದ ಹಲವರು, 'ನಮ್ಮ ಕಡೆ ಒಬ್ಬ ಒಳ್ಳೆಯ ಹುಡುಗ ಇದ್ದಾನೆ.', ಎಂದು ಈ ಹುಡುಗಿಯ ಜಾತಕದ ಪ್ರತಿಯನ್ನು ಪಡೆದುಕೊಂಡಿದ್ದರು. ಕೆಲವು ಹುಡುಗರು ಕೆಲಸವಿಲ್ಲದೆ ಸ್ಟೇಜಿನ ಬಳಿ ಸುಳಿದಾಡತೊಡಗಿದ್ದರು.
ಇವೆಲ್ಲದರ ಮಧ್ಯೆ ಎಲ್ಲೋ ಮದುವೆಯ ಹುಡುಗಿಯನ್ನು ವರ್ಷಗಳ ಕಾಲ ಮನಸಲ್ಲಿ ಹೊತು ನಡೆದ ಹುಡುಗ ಕೈಯಲ್ಲಿ gift ಹಿಡಿದುಕೊಂಡು ಕುಳಿತಿದ್ದ. ತನ್ನ ಕನಸಿನ ಕನ್ಯೆಯನ್ನು ವರಿಸುತ್ತಿರುವ ಗಂಡನ್ನು ತನ್ನೊಂದಿಗೆ ಹೋಲಿಸಿಕೊಳ್ಳತ್ತಾ ತನ್ನ ಬದುಕನ್ನು ಹಳಿದುಕೊಳ್ಳುತ್ತಾ, ಜೀವನದ ಬಗ್ಗೆ ತನ್ನದೇ ಸಿದ್ಧಾಂತಗಳನ್ನು ರೂಪಿಸಿಕೊಳ್ಳುತ್ತಾ ಅವನು ಕುಳಿತಿದ್ದ.
ಊಟದ hall ನಲ್ಲಿ ಜನ ತುಂಬಿ ತುಳುಕುತ್ತಿದ್ದರು. ಅಲ್ಲೂ ಒಂದು T.V. ಹಾಕಿ ಮೇಲೆ ಸ್ಟೇಜಿನಲ್ಲಿ ನಡೆಯುತ್ತಿರುವುದನ್ನು ನೇರ ಪ್ರಸಾರ ಮಾಡುತ್ತಿದ್ದರು. ಅಲ್ಲದೆ ಅದನ್ನೆಲ್ಲ edit ಮಾಡಿ ಹುಡುಗ-ಹುಡುಗಿ ಯಾವುದೋ ಸಿನಿಮಾದ ನಾಯಕ-ನಾಯಕಿ ಎಂಬಂತೆ ತೋರಿಸುತ್ತಿರುವುದನ್ನು ಹುಡುಗನ ಸ್ನೇಹಿತರು ಹಾಸ್ಯ ಮಾಡಿಕೊಳ್ಳುತ್ತ ಪಲಾವ್-ಮೊಸರು ಬಜ್ಜಿಯನ್ನು ಸವಿದರು. ಊಟ ಮುಗಿಸಿದವರು 'ಮನೆಗೆ ಹೋಗಿ ಮಜ್ಜಿಗೆ ಮಾಡಿಕೊಂಡು ಕುಡೀಬೇಕು, ಎಲ್ಲಾ items ಗು ವಿಪರೀತ ಮಸಾಲೆ ಹಾಕಿದ್ರು.', ಎಂದುಕೊಳ್ಳುತ್ತಿದ್ದವರು, ಹುಡುಗನ ಅಪ್ಪ, 'ಊಟ ಚೆನ್ನಾಗಿತ್ತಾ?', ಎಂದು ಕೇಳಿದರೆ, 'Super ಆಗಿತ್ತು. ಇನ್ನು ಎರಡು ದಿವ್ಸ ಏನೂ ತಿನ್ಬೇಕಿಲ್ಲ, ಅಷ್ಟು batting ಮಾಡ್ದೆ.', ಎಂದು ಪ್ರಿಯವಾದ ಸುಳ್ಳನ್ನು ಹೇಳಿದರು.
ಹೆಣ್ಣಿನ ಅಪ್ಪ ಮುಖದಲ್ಲಿ ನಗು ತುಂಬಿಕೊಂಡು ಒಳಗೆ ನಡೆಯುತ್ತಿದ್ದ ಚಂಡಮಾರುತವನ್ನು ಮೆಟ್ಟಿ ನಿಂತಿದ್ದ. ಹೆಚ್ಚಿದ ಸಾಲದ ಹೊರೆಯ ಚಿಂತೆಯಲ್ಲಿ ಅವನಿಗೆ ಮಗಳು ಮನೆ ಬಿಟ್ಟು ಹೋಗುತ್ತಿರುವ ದುಃಖವೂ ನೆನಪಾಗಲಿಲ್ಲ. ಯಾರಲ್ಲಿಯೂ ಹೇಳಿಕೊಳ್ಳಲಾಗದೆ ಒಳಗೊಳಗೇ ಬೇಯುತ್ತಾ ಹೊರಗೆ ನಗು ಸೂಸುತ್ತ ಓಡಾಡುತ್ತಿದ್ದ.
ರಾತ್ರಿ ಹತ್ತೂವರೆಯ ಹೊತ್ತಿಗೆ ಇದೆಲ್ಲ ಸಂಭ್ರಮ ಮುಗಿದು, reception ಗೆ ಬಂದಿದ್ದ ಮಕ್ಕಳು ಸ್ಟೇಜಿನ ಶೃಂಗಾರಕ್ಕೆ ಬಳಸಿದ್ದ ಹೂಗಳನ್ನೆಲ್ಲ ಕಿತ್ತು ಹಾಳು ಮಾಡಿ ಆಗಿತ್ತು. ಹುಡುಗನೊಳಗಿದ್ದ ತತ್ವಜ್ಞಾನಿ, 'ಇದೆಲ್ಲ ಯಾವ ಖುಷಿಗೆ?', ಎಂದು ಪ್ರಶ್ನಸಿಕೊಳ್ಳತೊಡಗಿದ್ದ. ಮೂರು ಗಂಟೆಯ ಸಡಗರಕ್ಕಾಗಿ ಎಷ್ಟೆಲ್ಲ ವೆಚ್ಚವೆಂದು ತನ್ನಲ್ಲೇ ಅಂದುಕೊಳ್ಳುತ್ತಿದ್ದ. ಆದರೆ ತನ್ನ ಸ್ನೇಹಿತರು, ಸಹೋದ್ಯೊಗಿಗಳೆಲ್ಲ, 'ಒಳ್ಳೆಯ ವ್ಯವಸ್ಥೆ. Nice stage decoration. ', ಎಂದೆಲ್ಲ ಹೊಗಳಿದ್ದು ನೆನಪಾಗಿ, 'ಪರ್ವಾಗಿಲ್ಲ, ನಾಲ್ಕು ಜನಕ್ಕೆ ಖುಷಿಯಾದರೆ, ಅದಕ್ಕಿಂತ ಇನ್ನೇನು ಬೇಕು.', ಎಂದು ತನ್ನೊಳಗಿದ್ದ ತತ್ವಜ್ಞಾನಿಯ ಬಾಯಿ ಮುಚ್ಚಿಸಿದ.
ಆ ರಾತ್ರಿ ಎಲ್ಲರೂ ನಿದ್ದೆ ಹೋದ ಮೇಲೂ ಮೂವರು ನಿದ್ದೆ ಬರದೆ ಹೊರಳಾಡುತ್ತಿದ್ದರು - ಹೆಣ್ಣಿನ ತಂದೆ, ಹೆಣ್ಣಿನ ತಾಯಿ, ಮತ್ತು ಈ ಹೆಣ್ಣನ್ನು ವರ್ಷಗಳ ಕಾಲ ಮನಸಲ್ಲೇ ಹೊತ್ತು ನಡೆದಿದ್ದನಲ್ಲ, ಆ ಹುಡುಗ!
Nov 17, 2017
ಅಪೂರ್ಣ ಕಥೆ
ನಮ್ಮ ಊರಿನಲ್ಲಿ ಕಥೆ ಹೇಳುವವನೊಬ್ಬನಿದ್ದ. ದುಡ್ಡು ಕೊಟ್ಟರೆ ಯಾವ್ಯಾವುದೋ ಕಥೆಗಳನ್ನೆಲ್ಲ ಜೋಡಿಸಿ ಹೊಸ ಕಥೆ ಕಟ್ಟಿ ಹೇಳುತ್ತಿದ್ದ. ಕೆಲವು ಸಲ ಕಥೆಯನ್ನು ಕುತೂಹಲಕಾರಿ ಘಟ್ಟಕ್ಕೆ ತಂದು ನಿಲ್ಲಿಸಿ ರೂಪಾಯಿ ಕೊಟ್ಟರೆ ಮಾತ್ರ ಮುಂದುವರೆಸುತ್ತಿದ್ದ.
ಸಣ್ಣಂದಿನಲ್ಲಿ ನಾನು ಕೈಯಲ್ಲಿ ಸ್ವಲ್ಪ ದುಡ್ಡು ಸೇರಿದಾಗ ಹೋಗಿ ಇವನ ಕಥೆ ಕೇಳುತ್ತಿದ್ದೆ. ಎಷ್ಟೋ ಸಲ ದುಡ್ಡು ಖಾಲಿಯಾಗಿ ಅರ್ಧ ಕಥೆ ಕೇಳಿ ವಾಪಾಸು ಬರುತ್ತಿದ್ದೆ. ಒಮ್ಮೆ ಅವನು ಒಂದು ಕಥೆ ಶುರು ಮಾಡಿದ :
"ಒಂದಾನೊಂದು ಕಾಲದಲ್ಲಿ ಒಬ್ಬ ಇದ್ದ. ಅವನ ಊರಿನಲ್ಲಿ ಎಲ್ಲರೂ ಅರ್ಥವಿಲ್ಲದ ಮಾತಾಡುತ್ತಿದ್ದರು. ಗುರಿಯಿಲ್ಲದೆ ಬದುಕುತ್ತಿದ್ದರು. ಎಷ್ಟೋ ಜನ ಏನನ್ನೂ ಮಾಡದೆ ಸುಮ್ಮನೆ ಕುಳಿತಿರುತ್ತಿದ್ದರು. ಈ ಜನರ ರೀತಿ ಅವನಿಗೆ ಬೇಸರ ತರಿಸಿತು. ಅವನು ಆ ಊರನ್ನು ಬಿಟ್ಟು ನಡೆದ. ನಡೆಯುತ್ತಾ ಒಂದು ಹೊಸ ಊರನ್ನು ತಲುಪಿದ. ಈ ಊರಿನಲ್ಲಿ ಎಲ್ಲರೂ ತುಂಬ ಅರ್ಥವತ್ತಾಗಿ ಮಾತಾಡುತ್ತಿದ್ದರು. ಎಲ್ಲರೂ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಿದ್ದರು. ಸೋಮಾರಿತನ ಯಾರಲ್ಲೂ ಇರಲಿಲ್ಲ. ಅವನು ಆ ಊರಲ್ಲೇ ಉಳಿದ. ಆ ಊರು ಅವನಿಗೆ ಬದುಕಲ್ಲೊಂದು ಗುರಿಯನ್ನು ಕಲಿಸಿತು. ಆ ಊರಿನಲ್ಲಿ ಎಲ್ಲರೂ ಎಲ್ಲರನ್ನೂ ಪೂರ್ತಿಯಾಗಿ ಅರ್ಥ ಮಾಡಿಕೊಂಡಿದ್ದರು. ಎಲ್ಲರೂ ಎಲ್ಲರಿಗೂ ಬಹಳ ಮರ್ಯಾದೆ ಕೊಟ್ಟು ಮಾತಾಡುತ್ತಿದ್ದರು. ಬದುಕಿಗೆ ಯಾವುದೋ ಒಂದು ಉದ್ದೇಶ ಇರುವಂತೆಯೂ, ಪ್ರತಿಯೊಬ್ಬರೂ ಒಂದು ಮಹತ್ತರವಾದ ಕಾರಣದ ಸಣ್ಣದೊಂದು ಭಾಗವನ್ನಾದರೂ ಪೂರ್ತಿ ಮಾಡುವುದಕ್ಕಾಗಿಯೇ ಪ್ರಪಂಚದಲ್ಲಿ ಹುಟ್ಟಿರುವುದಾಗಿಯೂ ಅವನು ನಂಬಿದ. ಎಷ್ಟೋ ವರ್ಷ ಇದು ನಡೆಯಿತು. ಆದರೆ ಕೊನೆಗೊಂದು ದಿನ ಅವನಿಗೆ ಅರ್ಥವತ್ತಾದ ಬದುಕು ನಿರರ್ಥಕ ಅನ್ನಿಸಿತು. ಅರ್ಥವಿರುವುದೆಲ್ಲವೂ ಭಾರ ಅನ್ನಿಸಿತು, ಬಂಧನ ಅನ್ನಿಸಿತು."
ಇಷ್ಟಕ್ಕೆ ನಿಲ್ಲಿಸಿ, "ಕಾಸು ಕೊಡು.", ಎಂದ. ನನ್ನಲ್ಲಿ ದುಡ್ಡು ಖಾಲಿಯಾಗಿತ್ತು. ಅವತ್ತು ಅವನು ಹೇಳಿದ ಅಪೂರ್ಣ ಕಥೆಯ ಅಂತ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಮನೆಗೆ ನಡೆದೆ. ಇದಾದ ಬಳಿಕ ನಾನು ನನ್ನ ಓದು ಮುಗಿಸುವುದರಲ್ಲಿ ಮತ್ತು ಒಂದು ಉದ್ಯೋಗ ದೊರಕಿಸಿಕೊಳ್ಳುವುದರಲ್ಲಿ ಕಳೆದು ಹೋದೆ. ಉದ್ಯೋಗಕ್ಕಾಗಿ ಊರು ಬಿಟ್ಟೆ. ಊರಿಗೆ ಯಾವತ್ತಾದರೂ ಹೋದಾಗಲೂ ಕಥೆ ಕೇಳಲು ಪುರುಸೊತ್ತಿರುತ್ತಿರಲಿಲ್ಲ. ನಾನು ಆ ಅಪೂರ್ಣ ಕಥೆಯನ್ನು ಮರೆತೆ.
***
ಮತ್ತೆ ಯಾವತ್ತೋ ಆ ಕಥೆ ನನ್ನನ್ನು ಕಾಡತೊಡಗಿತು. ಅರ್ಥವಿರುವುದೆಲ್ಲವೂ ಭಾರವೆಂದನ್ನಿಸಿದವನು ಮುಂದೇನು ಮಾಡಿರಬಹುದು? ಮತ್ತೆ ತನ್ನ ಊರಿಗೆ ವಾಪಾಸು ಹೋಗಿರಬಹುದೇ? ಆ ಊರಿನ ಜನ ಇವನು ವಾಪಾಸು ಹೋದಾಗಲೂ ಹಾಗೆಯೇ ಅರ್ಥವಿಲ್ಲದ ಮಾತಾಡಿಕೊಂಡು ಬದುಕುತ್ತಿದ್ದಿರಬಹುದೇ?
ನಾನು ಊರಿಗೆ ಹೋದಾಗ, ವಾಪಾಸು ಹೊರಡುವ ಸಂಜೆ ಕಥೆ ಹೇಳುವವನ ಮನೆಗೆ ಹೋದೆ. ಈಗ ನನ್ನ ಕೈತುಂಬ ಹಣ ಇತ್ತು. ಕಥೆ ಪೂರ್ತಿಯಾಗುವವರೆಗೂ ರೂಪಾಯಿ ಕೊಡಲು ತಯಾರಿದ್ದೆ. ಆದರೆ ರಾತ್ರಿ ನಾನು ಹೊರಡಲಿದ್ದ ಬಸ್ಸನ್ನು ತಪ್ಪಿಸಿಕೊಳ್ಳುವ ಹಾಗಿರಲಿಲ್ಲ. ಹಾಗಾಗಿ ಬೇಗ ಬೇಗ ಕಥೆ ಹೇಳಿ ಮುಗಿಸು ಅನ್ನಬೇಕು ಅಂದುಕೊಂಡು ಅವನ ಮನೆಯ ಒಳಗೆ ನಡೆದೆ.
ಅವನು ಹಾಸಿಗೆ ಹಿಡಿದಿದ್ದ. ಏನೋ ಖಾಯಿಲೆ ಹಿಡಿದು ನಿತ್ರಾಣವಾಗಿದ್ದ. ಅವನಿಗೆ ನನ್ನ ಗುರುತು ಹತ್ತಲಿಲ್ಲ. ನನಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಆದರೂ ಒಮ್ಮೆ ಪ್ರಯತ್ನಿಸೋಣವೆಂದು ಅವನಿಗೆ ಆ ಅಪೂರ್ಣ ಕಥೆಯನ್ನು ನೆನಪಿಸಿ ಅದನ್ನು ಪೂರ್ತಿ ಮಾಡಲು ಕೇಳಿಕೊಂಡೆ. " ನನಗೆ ಹೆಚ್ಚು ಸಮಯವಿಲ್ಲ. ಸ್ವಲ್ಪ ಬೇಗ ಬೇಗ ಹೇಳಿದರೆ ಒಳ್ಳೆಯದಿತ್ತು.", ಎಂದೆ.
ಅದಕ್ಕೆ ಅವನು, "ನನಗೂ ಹೆಚ್ಚು ಸಮಯವಿಲ್ಲ.", ಎಂದು ನಕ್ಕ. " ಕಾಸು ಕೊಡು.", ಎಂದು ಕೈ ಚಾಚಿದ. ನಾನು ನೂರು ರೂಪಾಯಿ ಇಟ್ಟೆ.
"ಅರ್ಥವಿರುವುದೆಲ್ಲವೂ ಭಾರ, ಬಂಧನ ಅನ್ನಿಸಿದ ಮೇಲೆ ಅವನು ಆ ಊರನ್ನೂ ಬಿಟ್ಟು ನಡೆದ. ನಡೆಯುತ್ತಾ ಒಂದು ಹೊಸ ಊರು ತಲುಪಿದ. ಈ ಊರಿನಲ್ಲಿ ಮಾತಾಡುವವರೇ ಕಡಿಮೆ ಇದ್ದರು. ಕೆಲವೇ ಕೆಲವು ಜನ ಮಾತಾಡಿದರೆ ಉಳಿದವರು ಅದಕ್ಕೆ ಪ್ರತಿಕ್ರಿಯಿಸದೆ ತಮ್ಮ ಕೆಲಸ ಮಾಡಿಕೊಂಡಿರುತ್ತಿದ್ದರು. ಅವನು ಆ ಊರಲ್ಲಿ ಉಳಿದ. ಅರ್ಥವೇ ಇರದ ಮಾತಾಡತೊಡಗಿದ. ಅವನಿಗೆ ಮನಸ್ಸು ಹಗುರವಾಯಿತು. ಸ್ವಾತಂತ್ರ್ಯ ಸಿಕ್ಕಂತೆ ಅನ್ನಿಸಿತು. ಎಲ್ಲ ಬಂಧನವೂ ಕಳಚಿದಂತೆ ಅನ್ನಿಸಿತು.
" ಅವನ ಮಾತು ಕೇಳಿಸಿಕೊಂಡ ಕೆಲವರು ಅವನು ಬಹಳ ಗೂಢವಾದದ್ದೇನನ್ನೋ ಹೇಳುತ್ತಿದ್ದಾನೆ ಎಂದುಕೊಂಡರು. ಅವನ ಮಾತಲ್ಲಿ ಏನೋ ರಹಸ್ಯವಿರಬೇಕು ಅಂದುಕೊಂಡ ಜನ ಅವನನ್ನು ಒಬ್ಬ ದಾರ್ಶನಿಕ ಎಂದು ಕೊಂಡಾಡಿದರು. ಅವನ ಮಾತಿಗೆ ಒಬ್ಬೊಬ್ಬರು ಒಂದೊಂದು ಅರ್ಥ ಹಚ್ಚಿ ಹೇಳಿದರು. ಅವನ ಮಾತಿಗೆ ಸಾವಿರಾರು ಅರ್ಥಗಳು ಬಂದದ್ದರಿಂದ ಅವನಿಗೂ ಸಂತೋಷವೇ ಆಯಿತು."
ಇಷ್ಟಕ್ಕೆ ನಿಲ್ಲಿಸಿ, "ಕಾಸು ಕೊಡು.", ಎಂದ.
ನಾನು ಐನೂರು ರೂಪಾಯಿ ಇಟ್ಟು, " ಬೇಗ ಹೇಳು. ಸಮಯ ಇಲ್ಲ.", ಎಂದೆ.
ಅವನು, "ಒಮ್ಮೆ ಆ ಊರಿಗೊಬ್ಬ ಹೊಸಬ ಬಂದ. ಬಂದವನು ಅರ್ಥವಿರದ ಮಾತಾಡುತ್ತಿದ್ದ ಇವನ ಮಾತು ಕೇಳಿಸಿಕೊಂಡು ಅದನ್ನೆಲ್ಲ ಎಳೆಯೆಳೆಯಾಗಿ ಬಿಡಿಸಿಟ್ಟ. ಇದಕ್ಕೆ ಇಷ್ಟೇ ಅರ್ಥ, ಇದು ಅರ್ಥವಿಲ್ಲದ್ದು ಎಂದೆಲ್ಲ ವಿಂಗಡಿಸಿ ವಿವರಿಸಿದ. ಇವನು ಎಷ್ಟೇ ಅರ್ಥದ ಸರಹದ್ದು ಮೀರಲು ನೋಡಿದರೂ, ಅವನು ಇವನನ್ನು ಎಳೆದು ತಂದು ಅರ್ಥದ ವ್ಯಾಪ್ತಿಯಲ್ಲಿ ಕಟ್ಟಿ ಹಾಕಿದ. ಕೊನೆಗೆ ಜನರು ಇವನ ಮಾತು ಕೇಳಿಸಿಕೊಳ್ಳುವುದು ನಿಲ್ಲಿಸಿ ಬರೀ ಅವನು ಕೊಡುವ ಟಿಪ್ಪಣಿಯನ್ನಷ್ಟೇ ಕೇಳಿಸಿಕೊಳ್ಳತೊಡಗಿದರು.
" ನೀನೇ ಹೇಳು, ಈಗವನು ಏನು ಮಾಡಬೇಕು?"
ಅವನು ಕೇಳದಿದ್ದರೂ ಸಾವಿರ ರೂಪಾಯಿಯನ್ನು ಅವನ ಕೈಯಲ್ಲಿಟ್ಟು, ಕೈಗಡಿಯಾರ ನೋಡಿಕೊಳ್ಳುತ್ತಾ, "ಹೆಚ್ಚು ಸಮಯ ಇಲ್ಲ. ಬೇಗ ಮುಗಿಸು.", ಎಂದೆ. ಜೇಬಿನಲ್ಲಿ ಇನ್ನೂ ರೂಪಾಯಿ ಇತ್ತು.
ದುಡ್ಡು ಹಿಡಿದ ಅವನ ಕೈ ವಾಲಿತು. ಅವನ ಸಮಯವೇ ಮುಗಿದಿತ್ತು. ಅಪೂರ್ಣ ಕಥೆಯ ಅಂತ್ಯದ ಬಗ್ಗೆ ಯೋಚಿಸಿದೆ. ಕಥೆ ಹೇಳುತ್ತಾ ಅವನು ಸತ್ತದ್ದರಿಂದ ಕಥೆಗೆ ಗಹನವಾದ ಅರ್ಥವೇನೋ ಇರಬೇಕೆಂದು ಭಾಸವಾಗಿ ಆ ಅರ್ಥ ನನ್ನ ಬಳಿ ಬರದೆ ಸತಾಯಿಸುತ್ತಾ ದೂರ ದೂರ ಓಡಿದಂತೆ ಅನ್ನಿಸಿ, ಏನು ಮಾಡುವುದೆಂದು ಅರ್ಥವಾಗದೆ ನಾನು ಅವನ ನಿರ್ಜೀವ ಕಂಗಳನ್ನೇ ದಿಟ್ಟಿಸುತ್ತಾ ನಿಂತೆ.
***
Jun 10, 2017
ಇಂದು ಬೆಳಿಗ್ಗೆ
ಬೋಳು ರಸ್ತೆಯಲ್ಲಿ ಸೈಕಲ್ಲು ತುಳಿಯುತ್ತ ಬಂದ ಪೇಪರಿನವನು, ರಾಕೆಟ್ಟು ಉಡಾಯಿಸಿದ ಸುದ್ದಿ ಹೊತ್ತ ಪತ್ರಿಕೆಯನ್ನು ಮೊದಲನೆ ಮಹಡಿಗೆ ಉಡಾಯಿಸಿ ಮತ್ತೆ ಸೈಕಲ್ಲು ತುಳಿಯುತ್ತ ಹೊರಟ.
ರಸ್ತೆಯ ತುದಿಯಲ್ಲಿ ಪ್ರತ್ಯಕ್ಷನಾದ ಅಜ್ಜನ ಚಡ್ಡಿ ಬಹುಷಃ ಮೊಮ್ಮಗನದ್ದಿರಬೇಕು. ತಲೆಗೆ ಹಾಕಿದ ಮಂಕಿ-ಕ್ಯಾಪಿನ ಮೇಲೆ ದುಬಾರಿ ಹೆಡ್-ಫೋನ್ ಸಿಕ್ಕಿಸಿಕೊಂಡಿದ್ದಾನೆ - ಹಾಡು ಕೇಳಲಿಕ್ಕೋ? ಗಾಳಿ ತಡೆಯಲಿಕ್ಕೋ?
ಮನೆಗೆ ಬೂದು ಬಣ್ಣದ ಪೈಂಟು ಬಳಿದು ಬ್ರಶ್ಶು ಕ್ಲೀನು ಮಾಡಿದವನ ದಯೆಯಿಂದ ಸಂಪಿಗೆ ಮರವೂ ಬೂದು ಚಡ್ಡಿಯ ಯೂನಿಫಾರ್ಮು ಧರಿಸಿದೆ.
ಅಟ್ಟಹಾಸದಿಂದ ಗುಡುಗುತ್ತಾ ಹೊರಟ ಪಕ್ಕದ ಬೀದಿಯವನ ಎನ್ಫೀಲ್ಡಿನ ಜೋರಿಗೆ ಹೆದರಿದ ನೆರೆಮನೆಯವನ ಮಾರುತಿ ಎಂದಿನಂತೆ ತನ್ನ ಒಡೆಯನಿಗೆ ಮೊರೆಯಿಟ್ಟಿತು.
ಹೊಸ ದಿನವೊಂದು ಉದಯಿಸಿತು. ಹೊಸ ತಲೆನೋವು, ಹೊಸ ಖುಷಿ, ಹೊಸದೇ ಬೇಜಾರುಗಳನ್ನು ಸರಬರಾಜು ಮಾಡಲು ರವಿ ತಾನು ಖುದ್ದಾಗಿ ನಮ್ಮ ಬಡಾವಣೆಗೆ ಬಂದ.
Apr 29, 2017
ಮಂಪರು ಮತ್ತು ಎಚ್ಚರ
ಕೋಣೆಯಲ್ಲಿ ಮಂದ ಬೆಳಕಿತ್ತು. ನಾನು ಮಲಗಿದ್ದೆ. ಅರ್ಧ ಎಚ್ಚರದಲ್ಲಿದ್ದೆ. ವರ್ಷ ತುಂಬದ ನನ್ನ ಮಗ ಇವತ್ತೇಕೋ ಬೇಗನೆ ಎಚ್ಚರವಾಗಿ ಹಾಸಿಗೆಯ ತುಂಬ ಹೊರಳಾಡುತ್ತಿದ್ದ. ಅವನ ಹೊರಳಾಟದಲ್ಲಿ ಆಗಾಗ ನನಗೆ ಗುದ್ದುತ್ತಿದ್ದ. ಅವನು ಗುದ್ದಿದಾಗೆಲ್ಲ ನನ್ನ ಮಂಪರು ಸ್ವಲ್ಪ ಕಡಿಮೆಯಾಗುತ್ತಿತ್ತು. ಅವನು ಅತ್ತ ಹೋಗುತ್ತಿದ್ದಂತೆ ಮಂಪರು ಮತ್ತೆ ಆವರಿಸುತ್ತಿತ್ತು. ಮಂಪರು ಮೂಡುತ್ತಿದ್ದಂತೆ ನನಗೆ ಇದರಲ್ಲೆಲ್ಲ ಯಾವುದೋ ಒಂದು ಕಥೆ ಇರುವಂತೆ ಅನ್ನಿಸತೊಡಗಿತು. ಅದೇನಿರಬಹುದೆಂದು ಯೋಚಿಸಲು ಎಚ್ಚರವಾದರೆ ಆ ಕಥೆ ಮಾಯವಾಗುತ್ತಿತ್ತು. ಆ ಕಥೆ ಬೆಳಗಿನ ಜಾವದ ಇಬ್ಬನಿಯಂತೆ ನನ್ನ ಕಣ್ಣಲ್ಲೇ ಕುಳಿತಂತೆಯೂ, ಕಣ್ಣು ಬಿಟ್ಟರೆ ಬೆಳಕಿನ ಬಿಸಿಗೆ ಅದು ಆವಿಯಾದಂತೆಯೂ ಮಂಪರಿನಲ್ಲಿ ನನಗೆ ಭಾಸವಾಗುತ್ತಿತ್ತು. ನಾನು ಕಣ್ಣು ಮುಚ್ಚಿದಾಗ ಇಲ್ಲೊಂದು ಹೊಸ ಲೋಕವೇ ಸೃಷ್ಟಿಯಾಗಿ, ಕಣ್ಣು ಬಿಟ್ಟ ಕ್ಷಣ ಅದು ನಾಶವಾದಂತೆಯೂ ಅನ್ನಿಸಿತು. ಮಂಪರಿನಲ್ಲಿ ಅದು ಇದ್ದಂತೆ ಅನ್ನಿಸಿ ಎಚ್ಚರದಲ್ಲಿ ಮಾಯವಾಗಿ ಸತಾಯಿಸುತ್ತಿತ್ತು. ಈ ಎಚ್ಚರ ಮತ್ತು ಮಂಪರಿನ ನಡುವಿನ ಯಾವ ಅವಸ್ಥೆಯಲ್ಲಿ ಆ ಕಥೆಯನ್ನು ಹಿಡಿದುಹಾಕಬಹುದೆಂದು ನನ್ನ ಮನಸ್ಸು ಚಿಂತಿಸುತ್ತಿತ್ತು. ನನ್ನ ಮಗ ಹೊರಳಾಡುತ್ತಾ ಬಂದು ನನ್ನ ದವಡೆಗೆ ಒಮ್ಮೆ ಗುದ್ದಿದ. ನಾನು ಏನೋ ಬಯ್ದುಕೊಳ್ಳುತ್ತಾ ಕಣ್ಣು ಬಿಟ್ಟೆ. ಕಥೆ ಮತ್ತೆ ಸುಟ್ಟು ಆವಿಯಾಯಿತು. ನನ್ನ ಮಗ ನಗುತ್ತಾ ಮಗ್ಗುಲಾದ.
-
ಸುನೀಲನಿಗೆ ಎರಡನೇ ಇಯತ್ತೆಯಿಂದಲೇ ವರ್ಷಕ್ಕೊಬ್ಬ ಹುಡುಗಿಯ ಮೇಲೆ ದೈವಿಕ ಪ್ರೇಮ ಹುಟ್ಟುತ್ತಲೇ ಇತ್ತು. ತರಗತಿಯಲ್ಲಿ ಇದ್ದುದರಲ್ಲಿ ಚೆಂದದ ಹುಡುಗಿಯರಲ್ಲಿ ವಿಪರೀತ ಪ್ರ...
-
It had been 3 days since Siddharth (Sid) joined his new job in an IT firm. He had joined on a Wednseday. The manager had then told, "We...
-
My mind is empty. I have no thought to write about. Even as I write this sentence, I scan my mind for any thoughts I can write about. The se...